ಉದ್ಯೋಗ ಸೃಷ್ಟಿಗೆ ಮೋದಿ ಸರ್ಕಾರದ ಆದ್ಯತೆ
ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ.
ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ.
ಮುಂದಿನ 5 ವರ್ಷಗಳಲ್ಲಿ ಸಾರಿಗೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರೈಲ್ವೆ, ಹೆದ್ದಾರಿ, ನದಿಗಳ ಜೋಡಣೆ ಸೇರಿದಂತೆ ರೂ. 30 ಲಕ್ಷ ಕೋಟಿ ಹಂಚಿಕೆ ಮಾಡುವ ಸಾಧ್ಯತೆ ಇದೆ. ಮೂಲ ಸೌಕರ್ಯ ವಲಯ ಉತ್ತೇಜಿಸುವ ಉದ್ದೇಶಿತ ರೂ. 100 ಲಕ್ಷ ಕೋಟಿ ಹೂಡಿಕೆ ಯೋಜನೆಯಲ್ಲಿ ಸಾರಿಗೆ ವಲಯದ ಪಾಲು ಮೂರನೇ ಒಂದು ಭಾಗದಷ್ಟಿದೆ.
ಮುಂದಿನ ದಿನಗಳಲ್ಲಿ ಸಾರಿಗೆ ವಲಯ ಪ್ರಾಮುಖ್ಯತೆ ಪಡೆಯಲಿರುವುದರಿಂದ ಆರ್ಥಿಕತೆ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ. ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಯ ಸಂದರ್ಭದಲ್ಲಿ ಬಿಜೆಪಿ ಭವಿಷ್ಯದ ಯೋಜನೆಗಳಿಗೆ ಸಂಬಂಧಿಸಿದ ನೀಲಿನಕ್ಷೆಯನ್ನು ತಯಾರಿಸಿತ್ತು.
ಅದರಂತೆ, ರೈಲ್ವೆ, ನದಿಗಳ ಜೋಡಣೆ ಮತ್ತು ಹೆದ್ದಾರಿ ವಿಸ್ತರಣೆ ಯೋಜನೆಗಳಿಗೆ ಹೆಚ್ಚಿನ ಹಣ ಖರ್ಚಾಗಲಿದೆ. ಹೆಚ್ಚುವರಿಯಾಗಿ ರಕ್ಷಣಾ ವಲಯದ ಆಧುನೀಕರಣಕ್ಕೆ ರೂ. 9 ಲಕ್ಷ ಕೋಟಿ ಹಂಚಿಕೆ ಮಾಡುವ ಯೋಜನೆಯೂ ಇದೆ.
ಮುಂದಿನ ದಿನಗಳಲ್ಲಿ ಬುಲೆಟ್ ರೈಲುಗಳಿಗಾಗಿ ಹೊಸ ಕಾರಿಡಾರ್ಗಳ ನಿರ್ಮಾಣಕ್ಕೆ ರೂ. 10 ಲಕ್ಷ ಕೋಟಿ, ಬಂದರು ವಲಯಕ್ಕೆ ರೂ. 3 ಲಕ್ಷ ಕೋಟಿ ಹಂಚಿಕೆ ಮಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ರೈಲ್ವೆ, ಬಂದರು, ಏರ್ಪೋರ್ಟ್ಗಳ ಜೊತೆಗೆ ಶಿಕ್ಷಣ, ಆರೋಗ್ಯ, ಕೃಷಿ ವಲಯಗಳಿಗೂ ಹೆಚ್ಚಿನ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ.