ಈಗಿನ ಷೇರುಪೇಟೆಯಲ್ಲಿ ಚಟುವಟಿಕೆ ನಿರ್ವಹಣೆ
ಕಾರ್ಪೊರೇಟ್ ಪದ್ಧತಿಯಲ್ಲಿ ನಂಬಿಕೆಯ ಪಾತ್ರ ಅತಿ ಮುಖ್ಯವಾದುದು. ಯಾರೋ ಪರಿಚಯವಿಲ್ಲದವರು ನಿರ್ವಹಿಸುವ ಚಟುವಟಿಕೆಯಲ್ಲಿ, ಅವರ ಮೇಲಿನ ನಂಬಿಕೆಯಿಂದ, ಅವರ ಯೋಜನೆ ಫಲಿಸುವುದೆಂಬ ಭಾವನೆಯಿಂದ ಹಣ ತೊಡಗಿಸುವುದು ಷೇರುಪೇಟೆ ವಿಸ್ಮಯಕಾರಿ ಗುಣವಾಗಿದೆ.
ಕಾರ್ಪೊರೇಟ್ ಪದ್ಧತಿಯಲ್ಲಿ ನಂಬಿಕೆಯ ಪಾತ್ರ ಅತಿ ಮುಖ್ಯವಾದುದು. ಯಾರೋ ಪರಿಚಯವಿಲ್ಲದವರು ನಿರ್ವಹಿಸುವ ಚಟುವಟಿಕೆಯಲ್ಲಿ, ಅವರ ಮೇಲಿನ ನಂಬಿಕೆಯಿಂದ, ಅವರ ಯೋಜನೆ ಫಲಿಸುವುದೆಂಬ ಭಾವನೆಯಿಂದ ಹಣ ತೊಡಗಿಸುವುದು ಷೇರುಪೇಟೆ ವಿಸ್ಮಯಕಾರಿ ಗುಣವಾಗಿದೆ. ಇದಕ್ಕನುಗುಣವಾಗಿ ಪೇಟೆಯ ನಿಯಂತ್ರಕರು ಆಗಿಂದಾಗ್ಗೆ ಹಲವಾರು ಪೂರಕ ನಿಯಮಗಳನ್ನು ಜಾರಿಗೊಳಿಸಿ ಕ್ರಮಬದ್ಧತೆಗೆ ಆಧ್ಯತೆ ನೀಡಿ ನಿಗಾ ವಹಿಸುತ್ತದೆ. ಸಧ್ಯದಲ್ಲಿ ಷೇರುಪೇಟೆಯಲ್ಲಿ ಹೆಚ್ಚಿನ ಷೇರಿನ ಬೆಲೆಗಳು ಕ್ಷೀಣಿತಗೊಂಡಿವೆ. ಹೂಡಿಕೆದಾರರ ಹಣವು ಕಲ್ಪನಾತೀತವಾಗಿ ಕರಗುತ್ತಿದೆ. ಒಂದರಮೇಲೊಂದು ನಕಾರಾತ್ಮಕ ಬೆಳವಣಿಗೆಗಳು ಮೂಗು ತೂರಿಸುತ್ತಿವೆ. ಜನಸಾಮಾನ್ಯರು ಮ್ಯೂಚುವಲ್ ಫಂಡ್ ಸಹಿ ಎಂಬ ಪ್ರಚಾರಕ್ಕೆ ಮರುಳಾಗಿ ಕೈಲಿದ್ದ ಹಣವನ್ನು ವಿನಿಯೋಗಿಸಿಯಾಗಿದೆ, ಅದು ಸಹ ಕರಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ನಡೆ ಹೇಗಿರಬೇಕು ಎಂಬುದು ಚಿಂತನೆಯಾಗಿದೆ. ಎಲ್ಲದಕ್ಕೂ ಅಂತ್ಯವೆಂಬುದಿದೆ. ಸಹನೆ ಅಗತ್ಯ.
ಪೇಟೆಯ ಬಂಡವಾಳೀಕರಣ ಮೌಲ್ಯ
2008ನೇ ಜನವರಿ 10 ರಂದು ಸೆನ್ಸೆಕ್ಸ್ ಪ್ರಥಮ ಭಾರಿ 21,206 ಪಾಯಿಂಟುಗಳನ್ನು ತಲುಪಿ ಅಂದಿನ ಸರ್ವಕಾಲೀನ ದಾಖಲೆ ನಿರ್ಮಿಸಿ ರೂ. 71.41 ಲಕ್ಷ ಕೋಟಿಯಷ್ಟು ಪೇಟೆಯ ಬಂಡವಾಳೀಕರಣ ಮೌಲ್ಯವನ್ನು ತಲುಪಿತ್ತು. ಆದರೆ 2009 ರ ಜನವರಿ 23 ರಂದು ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್ 8,631 ಕ್ಕೆ ಕುಸಿದು 8,674 ರಲ್ಲಿ ಕೊನೆಗೊಂಡಿತು. ಅಂದರೆ ಕೇವಲ ಒಂದೇ ವರ್ಷದಲ್ಲಿ ಸೆನ್ಸೆಕ್ಸ್ 12,575 ಪಾಯಿಂಟುಗಳಷ್ಟು ಕುಸಿತ ಕಂಡು ಆತಂಕಮಯ ವಾತಾವರಣ ಸೃಷ್ಟಿಸಿತು. ಆದರೆ 2010 ರ ಜನವರಿ 6 ರಂದು 17,790 ಕ್ಕೆ ಜಿಗಿತ ಕಂಡಿತು. ಅಂದರೆ ಸೆನ್ಸೆಕ್ಸ್ ಕಂಡ ಭಾರಿ ಇಳಿಕೆಯಿಂದ ಚೇತರಿಕೆ ಕಂಡ ರೀತಿಯು ಸಹ ತ್ವರಿತವಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೆನ್ಸೆಕ್ಸ್ ಜೊತೆಗೆ ಕೆಲವು ಅಗ್ರಮಾನ್ಯ ಶ್ರೇಣಿಯ ಕಂಪನಿಗಳ ಷೇರಿನ ಬೆಲೆಗಳು ಹೆಚ್ಚು ರಭಸವಾದ ಏರಿಳಿತಗಳನ್ನು ಪ್ರದರ್ಶಿಸುತ್ತಿರುವುದು ಅಲ್ಪಕಾಲೀನ ಹೂಡಿಕೆಗೆ ಅವಕಾಶಮಾಡಿಕೊಟ್ಟಂತಾಗಿದೆ. ಅಗ್ರಮಾನ್ಯ ಕಂಪನಿಗಳೊಂದಿಗೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು ಸಹ ಇಳಿಕೆಗೊಳಪಟ್ಟಿರುವುದರಿಂದ ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶವಾಗುತ್ತದೆ. ಸಾಧ್ಯವಾದಷ್ಟು ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಷೇರುಗಳ ವ್ಯಾಮೋಹ ತೊರೆದು ಅಗ್ರಮಾನ್ಯ ಕಂಪೆನಿಗಳತ್ತ ಆಧ್ಯತೆ ನೀಡುವುದು ಉತ್ತಮ. ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು ಒಂದು ರೀತಿಯ ಹೂವಿನಷ್ಟು ಮೃದುವಾಗಿದ್ದು ಈಗಿನ ಒತ್ತಡದಲ್ಲಿ ಸುಲಭವಾಗಿ ನಲುಗಿಹೋಗುವ ಸಾಧ್ಯತೆ ಇರುತ್ತದೆ. ಒಮ್ಮೆ ಆರ್ಥಿಕ, ಆಂತರಿಕ ಒತ್ತಡಕ್ಕೊಳಗಾದಮೇಲೆ ಈಗಿನ ವಾತಾವರಣದಲ್ಲಿ ಚೇತರಿಕೆ ಕಾಣುವುದು ಸುಲಭವಲ್ಲ. ಅಗ್ರಮಾನ್ಯ ಕಂಪನಿಗಳು ತಮ್ಮ ಗಾತ್ರದ ಕಾರಣ ಹಿಂಜರಿತದ ಪ್ರಭಾವವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವು ಒಂದು ರೀತಿಯ 'ಡ್ರೈ ಫ್ರೂಟ್ಸ್' ತರಹ ದೀರ್ಘಾಯುಷ್ಯವನ್ನು ಸೃಷ್ಟಿಸಿಕೊಳ್ಳುವ ಶಕ್ತಿ ಹೊಂದಿರುತ್ತದೆ. ಹಾಗಾಗಿ ಚೇತರಿಕೆಗೆ ಅವಕಾಶ ಹೆಚ್ಚಿರುತ್ತದೆ.
ಆರ್ಥಿಕ ಹಿಂಜರಿತ-ಮಾರಾಟ ಪ್ರಕ್ರಿಯೆ
ಇದುವರೆಗೂ ಸತತವಾದ ಮಾರಾಟದ ಹಾದಿಯಲ್ಲಿದ್ದ ವಿದೇಶಿ ವಿತ್ತೀಯ ಸಂಸ್ಥೆಗಳು ಸ್ವಲ್ಪಮಟ್ಟಿನ ದಣಿವನ್ನು ಕಂಡಂತ್ತಿದ್ದು ಜುಲೈ ಒಂದರಂದು ಖರೀದಿ ಮಾಡಿದ ನಂತರ ನಿರಂತರವಾಗಿ ಮಾರಾಟದ ಹಾದಿಯಲ್ಲಿದ್ದು ಆಗಸ್ಟ್ 9 ರಂದು ರೂ.203 ಕೋಟಿಯಷ್ಟು ಖರೀದಿ ಮಾಡಿದವು ಮತ್ತೆ 14 ರಂದು ರೂ. 1,614 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿ ಗಮನ ಸೆಳೆದವು. ಮತ್ತೊಮ್ಮೆ ಮಂಗಳವಾರದಂದು ರೂ. 373ಕೋಟಿಯಷ್ಟು ಮೌಲ್ಯದ ಷೇರುಗಳನ್ನು ಖರೀದಿಸಿವೆ. ಅಂದರೆ ನಿಧಾನವಾಗಿ ಮೌಲ್ಯಾಧಾರಿತ ಖರೀದಿಗೆ ವಿದೇಶಿ ವಿತ್ತೀಯ ಸಂಸ್ಥೆಗಳು ಮುಂದಾಗಿವೆ ಎಂಬ ಭಾವನೆ ಮೂಡಿಸುತ್ತದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಖರೀದಿ ಮಾಡುವುದಕ್ಕಿಂತ ಮೊದಲು ಅವು ಮಾರಾಟ ಪ್ರಕ್ರಿಯೆ ನಿಲ್ಲಿಸಿದರೆ ಸಾಕು ಪೇಟೆ ಚೇತರಿಕೆ ಕಾಣುವುದು. ಹಾಗಾಗಿ ಸಧ್ಯದ ಪೇಟೆಯಲ್ಲಿ ಮೌಲ್ಯಾಧಾರಿತ ಖರೀದಿಯನ್ನು ನಿಯಮಿತವಾಗಿ ನಡೆಸಬಹುದು ಎನಿಸುತ್ತದೆ. ವಿಶ್ವವು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಈ ಹಿಂಜರಿತವು ನಮ್ಮ ದೇಶದ ಮೇಲೆ ಬೀರುವ ಪ್ರಭಾವವು ಅಷ್ಟು ಹೆಚ್ಚಾಗಿರುವುದಿಲ್ಲ. ಕಾರಣ ನಮ್ಮ ದೇಶದ ಗ್ರಾಹಕ ಸಂಪತ್ತು. ಅಂದರೆ ನಮ್ಮಲ್ಲಿ ಆಂತರಿಕವಾಗಿ ಬಳಕೆದಾರರಿರುವುದರಿಂದ ಪರದೇಶಗಳ ಅವಲಂಬನೆ ಮಿತವಾಗಿರುತ್ತದೆ.
ಹೂಡಿಕೆಗೆ ಕಂಪನಿಗಳ ಆಯ್ಕೆ
ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಎಂತಹ ಕಂಪನಿಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇದಕ್ಕೆ ಉತ್ತರವೆಂದರೆ ಇತ್ತೀಚಿನ ಪೇಟೆಯ ಕುಸಿತಕ್ಕಿಂತ ಮೊದಲೇ ಇಳಿಮುಖದಲ್ಲಿದ್ದು, ಪೇಟೆಯ ಕುಸಿತದ ಸಂದರ್ಭದಲ್ಲಿ ಸ್ವಲ್ಪ ಸ್ಥಿರತೆಯಿಂದ ಕುದಿದ್ದಂತಹ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಉದಾಹರಣೆಗೆ ಗೇಲ್ ಇಂಡಿಯಾ ಕಂಪನಿ ಇಟ್ತಚೆಗೆ 1:1ರ ಅನುಪಾತದ ಬೋನಸ್ ಷೇರು ವಿತರಿಸಿದ ನಂತರ ರೂ.125 ರ ಸಮೀಪವಿದೆ.
*ಇಂಡಿಯನ್ ಆಯಿಲ್ ಕಾರ್ಪೊರೇಷನ್ ರೂ.122 ರ ಸಮಿಪವಿದೆ.
*ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ರೂ.335 ರ ಸಮೀಪವಿದ್ದು ಲಾಭಾಂಶದ ನಂತರದಲ್ಲಿ ಮತ್ತಷ್ಟು ಕುಸಿದಿದೆ.
*ಪವರ್ ಫೈನಾನ್ಸ್ ಕಂಪನಿ ರೂ.103 ರ ಸಮೀಪವಿದೆ.
*ಬ್ಯಾಂಕಿಂಗ್ ವಲಯದಲ್ಲಿ ಕರ್ನಾಟಕ ಬ್ಯಾಂಕ್ ವಾರ್ಷಿಕ ಕನಿಷ್ಠ ರೂ 75 ರ ಸಮೀಪವಿದೆ.
*ಫಾರ್ಮ ವಲಯದ ಬಯೋಕಾನ್ ವಾರ್ಷಿಕ ಕನಿಷ್ಟದಲ್ಲಿದೆ.
*ಅದೇ ರೀತಿ ಐ ಟಿ ಸಿ ಕಂಪನಿ ಷೇರಿನ ಬೆಲೆ ರೂ .242 ರ ವಾರ್ಷಿಕ ಕನಿಷ್ಠ ಬೆಲೆ ಸಮೀಪವಿದೆ , ಎನ್ ಎಂ ಡಿ ಸಿ ಕಂಪನಿ ಸಹ ವಾರ್ಷಿಕ ಕನಿಷ್ಠದ ಸಂಪವಿದೆ.
*ಆಯಿಲ್ ಇಂಡಿಯಾ ಕಂಪನಿ ಸಹ ರೂ.146 ರಲ್ಲಿ ವಾರ್ಷಿಕ ಕನಿಷ್ಟದಲ್ಲಿದೆ.
*ಅಂತೆಯೇ ಕ್ಯಾಸ್ಟ್ರಾಲ್ ಇಂಡಿಯಾ, ಕೋಲ್ ಇಂಡಿಯಾದಂತಹ ಕಂಪನಿಗಳು ಯೋಗ್ಯ ಬೆಲೆಗೆ ಲಭ್ಯವಿರುವಂತೆ ಕಾಣುತ್ತದೆ.
ಷೇರುಗಳ ಚಲನೆ
ಇಲ್ಲಿ ಒಂದು ಮುಖ್ಯ ಅಂಶವನ್ನು ಹೂಡಿಕೆದಾರರು ಗಮನಿಸುವುದು ಅತ್ಯವಶ್ಯಕ. ಅದೆಂದರೆ ಷೇರುಪೇಟೆಯ ಚಟುವಟಿಕೆಯಲ್ಲಿ ಷೇರುಗಳ ಚಲನೆಯನ್ನು ಮುಂಚಿತವಾಗಿ ನಿಖರವಾಗಿ ನಿರ್ಧರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಹೂಡಿಕೆದಾರರು ಪೇಟೆಯ ವಾತಾವರಣವನ್ನವಲಂಭಿಸಿ ಷೇರುಗಳನ್ನು ಹಂತ ಹಂತವಾಗಿ ಪ್ರತಿ ಕುಸಿತದಲ್ಲಿ ಶೇಖರಿಸಿ ತಮ್ಮ ಹೂಡಿಕೆಗುಚ್ಛವನ್ನು ಬಲಪಡಿಸಿಕೊಳ್ಳುವುದು ಸರಿಯಾದ ಕ್ರಮ. ಅಲ್ಲದೆ ಎಸ ಐ ಪಿ ಮಾಧರಿಯ ಹೂಡಿಕೆಗೆ ಇದು ಸೂಕ್ತ ಸಮಯವಾಗಿದೆ.
ಮುಂದಿನ ದಿನಗಳಲ್ಲಿ ಷೇರುಪೇಟೆಯೊಂದೇ ಆಕರ್ಷಕ ಹೂಡಿಕೆಯಾಗಿರುತ್ತದೆ. ಕಾರಣ ಇಲ್ಲಿನ ದಿಢೀರ್ ನಗದೀಕರಣ ವ್ಯವಸ್ಥೆ. ಶೇರುಪೇಟೆ ಪ್ರವೇಶದ ಸಂದರ್ಭದಲ್ಲಿ ದೀರ್ಘಕಾಲೀನ ಚಿಂತನೆ ನಂತರದಲ್ಲಿ ವ್ಯಾವಹಾರಿಕ ಶೈಲಿಯಲ್ಲಿ ದೊರೆತಂತ ಲಾಭವನ್ನು ಕೈಗೆಟುಕಿಸಿಕೊಳ್ಳುವುದು ಸೂಕ್ತ. ಅರಿತು ನಿರ್ಧರಿಸಿರಿ ಅನುಸರಿಸಬೇಡಿ.