ರೈಲುಗಳಲ್ಲಿ ಖಾಲಿ ಇರುವ ಆಸನಗಳನ್ನು ತುಂಬಲು ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ದರದಲ್ಲಿ ಪ್ರಯಾಣಿಕರಿಗೆ ಶೇಕಡಾ 25 ರವರೆಗೆ ರಿಯಾಯಿತಿ ನೀಡಲು ನಿರ್ಧರಿಸಿದೆ.
ರೈಲು, ವಿಮಾನಗಳಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು, ರೈಲು ಮತ್ತು ವಿಮಾನಯಾನ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆ-ಸವಾಲುಗಳನ್ನು ಹತೋಟಿಗ ತರಲು ಅನೇಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ರೈಲುಗಳಲ್ಲಿ ಖಾಲಿ ಇರುವ ಆಸನಗಳನ್ನು ತುಂಬಲು ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ದರದಲ್ಲಿ ಪ್ರಯಾಣಿಕರಿಗೆ ಶೇಕಡಾ 25 ರವರೆಗೆ ರಿಯಾಯಿತಿ ನೀಡಲು ನಿರ್ಧರಿಸಿದೆ.
ಯಾವ ರೈಲುಗಳಿಗೆ ಅನ್ವಯ
ಭಾರತೀಯ ರೈಲ್ವೆ ಪ್ರಕಾರ, ಎಲ್ಲಾ ರೈಲುಗಳ ಎಸಿ ಕ್ಲಾಸ್ ಮತ್ತು ಎಸಿ ಚೇರ್ ಕಾರ್ ಪ್ರಯಾಣಿಕರಿಗೆ ಅನ್ವಯವಾಗಲಿದೆ. ಶತಾಬ್ದಿ ಎಕ್ಸ್ಪ್ರೆಸ್, ಗತಿಮಾನ್ ಎಕ್ಸ್ಪ್ರೆಸ್, ತೇಜಸ್ ಎಕ್ಸ್ಪ್ರೆಸ್, ಡಬಲ್ ಡೆಕ್ಕರ್ ಮತ್ತು ಇಂಟರ್ಸಿಟಿ ಎಕ್ಸ್ಪ್ರೆಸ್ ಒಳಗೊಂಡಂತೆ ಇನ್ನಿತರೆ ರೈಲುಗಳ ಸೀಟುಗಳ ದರದಲ್ಲಿ ಶೇ. ೨೫ವರೆಗೆ ರಿಯಾಯಿತಿ ಸೌಲಭ್ಯ ಸಿಗಲಿದೆ.
ಖಾಲಿ ಆಸನಗಳನ್ನು ಭರ್ತಿ ಮಾಡುವ ಸವಾಲು
ಖಾಲಿ ಇರುವ ಆಸನಗಳನ್ನು ಭರ್ತಿ ಮಾಡಲು ಮತ್ತು ಕಡಿಮೆ ದರದ ರಸ್ತೆ ಸಾರಿಗೆ ಹಾಗೂ ವಿಮಾನ ಪ್ರಯಾಣ ಸೇವೆಗಳ ಜೊತೆ ಸ್ಪರ್ಧಿಸುವ ನಿಟ್ಟಿನಲ್ಲಿ ಭಾರತೀಯ ರೇಲ್ವೆ ಈ ಯೋಜನೆಯನ್ನು ಪ್ರಕಟಿಸಿದೆ. ರೇಲ್ವೆ ಇಲಾಖೆ ಮೂಲ ದರದ ಮೇಲೆ ಶೇ. 25 ರವರೆಗೆ ರಿಯಾಯತಿ ನೀಡಲಿದೆ. ಇದರಲ್ಲಿ ರಿಸರ್ವೇಶನ್ ಫೀ, ಸೂಪರ್ ಫಾಸ್ಟ್ ಚಾರ್ಜ್ ಮತ್ತು ಜಿಎಸ್ಟಿ ಶುಲ್ಕ ಪ್ರತ್ಯೇಕವಾಗಿರುತ್ತದೆ.
ತತ್ಕಾಲ್ ಕೋಟಾಕ್ಕೆ ಅನ್ವಯವಾಗಲ್ಲ
ಕಳೆದ ಸಾಲಿನ ಮಾಸಿಕ ಶೇ. 50 ಕ್ಕಿಂತ ಕಡಿಮೆ ಪ್ರಯಾಣಿಕರು ಪಯಣಿಸಿದ್ದ ರೈಲುಗಳಿಗೆ ಈ ರಿಯಾಯತಿ ಸೌಲಭ್ಯ ಅನ್ವಯವಾಗಲಿದೆ ಎಂದು ಭಾರತೀಯ ರೈಲ್ವೇ ಇಲಾಖೆ ತಿಳಿಸಿದೆ. ಶತಾಬ್ದಿ ರೈಲು ಪ್ರಯಾಣ ದರದ ಮೇಲೆ ಶೇ. 10 ರಷ್ಟು ರಿಯಾಯತಿ ಇದ್ದರೂ, ತತ್ಕಾಲ್ ಕೋಟಾದಡಿ ಬುಕ್ ಮಾಡುವ ಟಿಕೆಟ್ ಗಳಿಗೆ ಈ ರಿಯಾಯತಿ ದರ ಅನ್ವಯವಾಗುವುದಿಲ್ಲ.
ಪೈಲಟ್ ಯೋಜನೆಯಡಿ ಶೇ. 10 ರಷ್ಟು ದರ
ಪೈಲಟ್ ಯೋಜನೆಯಡಿ ನಿರ್ದಿಷ್ಟ ರೈಲ್ವೆ ಮಾರ್ಗಗಳ ನಡುವೆ ಶೇ. 10 ರಷ್ಟು ಶುಲ್ಕ ಅಥವಾ ನಿಗದಿತ ದರವನ್ನು ಒದಗಿಸುತ್ತಿದೆ.
- ಬೆಂಗಳೂರು-ಮೈಸೂರು ವಿಭಾಗದ ನಡುವೆ ಚೆನ್ನೈ-ಮೈಸೂರು ಶತಾಬ್ದಿ ಎಕ್ಸ್ಪ್ರೆಸ್
- ಜೈಪುರ-ಅಜ್ಮೀರ್ ಮಾರ್ಗದ ನಡುವೆ ದೆಹಲಿ-ಅಜ್ಮೀರ್ ಶತಾಬ್ದಿ ಎಕ್ಸ್ಪ್ರೆಸ್
- ಕಾನ್ಪುರ್-ಲಕ್ನೋ ಮಾರ್ಗದ ನಡುವೆ ದೆಹಲಿ-ಲಕ್ನೋ ಶತಾಬ್ದಿ ಎಕ್ಸ್ಪ್ರೆಸ್
- ಮಾಲ್ಡಾ-ನ್ಯೂ ಜಲ್ಪೈಗುಡಿ ನಡುವಿನ ನ್ಯೂ ಜಲ್ಪೈಗುಡಿ-ಹೌರಾ ಶತಾಬ್ದಿ ಎಕ್ಸ್ಪ್ರೆಸ್


Click it and Unblock the Notifications