ಎಲ್ಲವು ಫ್ಲೋಟ್ ಎಂದಾದಾಗ, ಸ್ಥಿರತೆ ಹೇಗೆ ಸಾಧ್ಯ?
ಬ್ಯಾಂಕ್ ಬಡ್ಡಿದರ ಫ್ಲೋಟ್ , ಪೆಟ್ರೋಲ್ ದರ ಫ್ಲೋಟ್, ಬಸ್ ಪ್ರಯಾಣದ ದರ ಫ್ಲೋಟ್, ಗ್ರಾಹಕ ನಿರ್ಧಾರವು ಫ್ಲೋಟ್ ಇಂತಹ ವಾತಾವರಣದಲ್ಲಿ ಪೇಟೆಯು ಸ್ಥಿರತೆ ಕಾಣುವುದು ಸಾಧ್ಯವಿಲ್ಲ. ಎಲ್ಲವು ವಾಸ್ತವಾಂಶ ಆಧಾರಿತವಾಗಿರುತ್ತದೆ.
ಬ್ಯಾಂಕ್ ಬಡ್ಡಿದರ ಫ್ಲೋಟ್ , ಪೆಟ್ರೋಲ್ ದರ ಫ್ಲೋಟ್, ಬಸ್ ಪ್ರಯಾಣದ ದರ ಫ್ಲೋಟ್, ಗ್ರಾಹಕ ನಿರ್ಧಾರವು ಫ್ಲೋಟ್ ಇಂತಹ ವಾತಾವರಣದಲ್ಲಿ ಪೇಟೆಯು ಸ್ಥಿರತೆ ಕಾಣುವುದು ಸಾಧ್ಯವಿಲ್ಲ. ಎಲ್ಲವು ವಾಸ್ತವಾಂಶ ಆಧಾರಿತವಾಗಿರುತ್ತದೆ. ಪೇಟೆಗಳಲ್ಲಿ ಅಸ್ಥಿರತೆ ಹೆಚ್ಚಿದೆ. ಕೆಲವು ವಹಿವಾಟುದಾರರಿಗೆ ಈ ಅಸ್ಥಿರತೆಯೇ ಬಂಡವಾಳವಾಗಿ ಅದರಿಂದ ಲಾಭ ಗಳಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗುವುದನ್ನು ಇತ್ತೀಚಿಗೆ ಹೆಚ್ಚಾಗಿ ಕಾಣುತ್ತಿದ್ದೇವೆ. ಒಂದು ಕಂಪನಿಯ ಷೇರಿನ ಬೆಲೆ ಅತೀವ ಕುಸಿತಕಂಡಾಗಿನ ಸಂದರ್ಭದಲ್ಲಿ ಆ ಕಂಪನಿಯ ಬಗ್ಗೆ ನಕಾರಾತ್ಮಕವಾದ ಸುದ್ಧಿಯು ತೇಲಿಕೊಂಡುಬರುವುದು, ಒಂದು ಷೇರಿನ ಬೆಲೆ ಹೆಚ್ಚಾದಾಗ ಆ ಕಂಪನಿ ಬಗ್ಗೆ ಹೆಚ್ಚು ಸಕಾರಾತ್ಮಕ ಸುದ್ಧಿ ತೇಲಿಸುವುದು ಇಂದಿನ ಚಟುವಟಿಕೆಯ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ವಲಯದ ಕಂಪನಿಗಳ ಬಗ್ಗೆ ವಿಸ್ಮಯಕಾರಿ, ವೈವಿಧ್ಯಮಯ ಸುದ್ಧಿಗಳು ಹೆಚ್ಚು ಪ್ರಚಾರಕ್ಕೆ ಬರುತ್ತಿವೆ, ಈ ಕಾರಣ ಹೂಡಿಕೆದಾರರನ್ನು ಗೊಂದಲಕ್ಕೊಳಗಾಗುವಂತೆ ಮಾಡುತ್ತದೆ. ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳು ಸಹ ಹೆಚ್ಚು ನಕಾರಾತ್ಮಕ ಪ್ರಚಾರ ಪಡೆದುಕೊಳ್ಳುತ್ತಿವೆ. ಇದಕ್ಕೆ ಪೂರಕ ಅಂಶವಾಗಿ ಪರಿಣಮಿಸಿರುವ ಅಂಶವೆಂದರೆ ಆರ್ಥಿಕ ಹಿಂಜರಿತದ ತೂಗುಗತ್ತಿ ಸುದ್ಧಿಯಾಗಿದೆ. ಆಟೋ ವಲಯದಲ್ಲಿ ಆಗುತ್ತಿರುವ ನೌಕರಿ ಕಡಿತ, ಗ್ರಾಹಕ ಬಳಕೆ ಕಂಪನಿಗಳ ಸೇಲ್ಸ್ ಕ್ಷೀಣಿತವಾಗುತ್ತಿರುವುದರಿಂದ ಅವು ತಮ್ಮ ಉತ್ಪನ್ನಗಳ ಬೆಲೆಗಳನ್ನು ಕಡಿತಗೊಳಿಸುತ್ತಿರುವುದು, ಹೆಚ್ಚಿನ ಕಂಪನಿಗಳು ಪ್ರಕಟಿಸುತ್ತಿರುವ ಕ್ಷೀಣಿತ ಸಾಧನೆಯ ಅಂಕಿಅಂಶಗಳು, ಎಲ್ಲಕ್ಕೂ ಬೆಂಬಲವಾಗಿ ವಿವಿಧ ಬ್ರೋಕಿಂಗ್ ಕಂಪನಿಗಳು ನೀಡುವ ರೇಟಿಂಗ್ ಡೌನ್ ಗ್ರೇಡಿಂಗ್ ಸಹ ಪೇಟೆಯ ವಾತಾವರಣವನ್ನು ಕಲುಷಿತಗೊಳಿಸಿ, ಗೊಂದಲವನ್ನು ಹೆಚ್ಚಿಸುತ್ತಿದೆ. ಈ ರೀತಿಯ ಗೊಂದಲಮಯ ವಾತಾವರಣದ ಜಾಲವು ಬುಲಿಯನ್ ಮತ್ತು ಕರೆನ್ಸಿ ಪೇಟೆಗಳಿಗೂ ಹರಡಿಕೊಂಡಿದೆ.
ಸೆನ್ಸೆಕ್ಸ್ ಏರಿಳಿತದ ಫಲ
ಸೆನ್ಸೆಕ್ಸ್ ನ ಭಾಗವಾಗಿರುವ ಯೆಸ್ ಬ್ಯಾಂಕ್ ಇತ್ತೀಚಿಗೆ ಹೆಚ್ಚು ಏರಿಳಿತಗಳನ್ನು ಪ್ರದರ್ಶಿಸುತ್ತಿದೆ. ಈ ಬ್ಯಾಂಕ್ ತನ್ನ ಫಂಡ್ ರೈಸಿಂಗ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿತೆಂಬ ಕಾರಣದಿಂದ ಷೇರಿನ ಬೆಲೆ ರೂ.೮೨ ರವರೆಗೂ ಏರಿಕೆ ಕಂಡು ನಂತರ ಇತರೆ ಕಾರಣಗಳಿಂದ ರೂ. ೫೬ ರವರೆಗೂ ಕುಸಿದಿದೆ. ಈ ಮಧ್ಯೆ ಮೂಡೀಸ್ ಸಂಸ್ಥೆಯು ಎಸ್ ಬ್ಯಾಂಕ್ ನ್ನು ಜಂಕ್ ಹಂತಕ್ಕೆ ಡೌನ್ ಗ್ರೇಡ್ ಮಾಡಿದೆ ಎಂಬ ಸುದ್ಧಿಯು ಮಾಧ್ಯಮದಲ್ಲಿ ಪ್ರಕಟವಾಗಿದೆ. ಕಳೆದ ಒಂದು ತಿಂಗಳಿನಿಂದಲೂ ರೂ.೯೮ ರ ಸಮೀಪದಿಂದ ರೂ.೫೯ರ ಸಮೀಪಕ್ಕೆ ಕುಸಿದ ನಂತರ ಇಂತಹ ಸುದ್ಧಿ ಪ್ರಕಟವಾಗಿದೆ. ಇದೆ ರೀತಿ ಮತ್ತೊಂದು ಖಾಸಗಿ ಬ್ಯಾಂಕ್ ಆರ್ ಬಿ ಎಲ್ ಬ್ಯಾಂಕ್ ಷೇರಿನ ಬೆಲೆ ಹೆಚ್ಚು ಒತ್ತಡಗಳಿಂದ ಕೂಡಿದ್ದು ಬುಧವಾರದಂದು ರೂ.೩೫೬ ರ ಸಮೀಪದಿಂದ ರೂ.೨೮೬ ರ ವರೆಗೂ ಕುಸಿದು ದಿಢೀರ್ ರೂ.೩೧೬ ಕ್ಕೆ ಚೇತರಿಕೆ ಕಂಡಿತು. ಈ ಸಂದರ್ಭದಲ್ಲಿ ಆರ್ ಬಿ ಎಲ್ ಬ್ಯಾಂಕ್ ಷೇರು ಸತತವಾಗಿ ಒತ್ತಡದಿಂದ ಕುಸಿಯಲು ಬ್ಯಾಂಕ್ ನ ನೌಕರರು ಮಾರಾಟಮಾಡಿದ್ದಾರೆಂಬ ನೆಪವು ಪ್ರಮುಖ ಕಾರಣವಾಗಿದೆ ಎಂಬ ಸುದ್ಧಿ ಪ್ರಸಾರವಾಗಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ಚೇರ್ಮನ್ ರಾಜೀನಾಮೆ ಕೊಟ್ಟ ಕಾರಣ ಆ ಷೇರು ಕುಸಿತ ಕಂಡರೆ, ಈ ಬ್ಯಾಂಕ್ ಇಂಡಿಯಾ ಬುಲ್ ಸಿಂಗ್ ಫೈನಾನ್ಸ್ ನೊಂದಿಗೆ ವಿಲೀನಗೊಳ್ಳಲಿರುವುದರಿಂದ ಈ ಕಂಪನಿ ಷೇರು ಸಹ ಹೆಚ್ಚಿನ ಕುಸಿತಕ್ಕೊಳಗಾಗಿದೆ. ಈ ರೀತಿಯ ವಾತಾವರಣವು ಶಾಶ್ವತವಲ್ಲ. ಇದು ತಾತ್ಕಾಲಿಕ ಪರಿಸ್ಥಿತಿಯಾಗಿದೆ.
ಆರ್ಥಿಕ ಸುಧಾರಣೆಗೆ ಕ್ರಮ
ಹಿಂದಿನವಾರ ವಿತ್ತ ಸಚಿವೆಯವರು ಪ್ರಕಟಿಸಿದ ಹಲವಾರು ಆರ್ಥಿಕ ಸಡಲೀಕರಣ ಕ್ರಮಗಳ ಕಾರಣ ತ್ವರಿತ ಏರಿಕೆ ಕಂಡಿದ್ದಂತಹ ಪೇಟೆಯು ವಾರಾಂತ್ಯದಲ್ಲಿ ಕುಸಿತಕ್ಕೊಳಗಾಗಲು ಕಾರಣವೇನಿರಬಹುದು ಎಂಬುದು ಯಕ್ಷಪ್ರಶ್ನೆಯಾಗಿ ಹಲವರಿಗೆ ಕಂಡುಬಂದಿದೆ. ಈ ಪರಿಸ್ಥಿತಿಗೆ ಮುಖ್ಯವಾದ ಕಾರಣ ಸಡಲೀಕರಣ ಕ್ರಮಗಳ ನಂತರವೂ ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಮಾರಾಟದ ಹಾದಿಯಲ್ಲೇ ಮುಂದುವರೆದಿದ್ದಾರೆ. ವಿದೇಶಿ ವಿತ್ತೀಯ ಸಂಸ್ಥೆಗಳು ಸಧ್ಯದ ಮಾರಾಟದ ಹಾದಿಯಿಂದ ಖರೀದಿಯತ್ತ ತಿರುಗಿದಲ್ಲಿ ಪೇಟೆಯ ದಿಶೆಯನ್ನೇ ಬದಲಿಸುತ್ತವೆ. ಪೇಟೆಗಳು ಈಗಾಗಲೇ ತಳಹಂತದಲ್ಲಿರುವುದರಿಂದ ಉತ್ತಮ ಗುಣಮಟ್ಟದ ಕಂಪನಿಗಳನ್ನು ದೀರ್ಘಕಾಲೀನ ಉದ್ದೇಶದಿಂದ ಸಮೃದ್ಧವಾದ ಹೂಡಿಕೆಗುಚ್ಛವಾಗಿ ಶೇಖರಿಸಬಹುದಾಗಿದೆ. ಇಂತಹ ಬದಲಾವಣೆ ಬಂದಲ್ಲಿ ಈಗ ಬರುತ್ತಿರುವ ಡೌನ್ ಗ್ರೇಡ್ ರೇಟಿಂಗ್ ಗಳು ದಿಢೀರ್ ದಿಶೆ ಬದಲಿಸುತ್ತವೆ. ಈ ರೇಟಿಂಗ್ ಗಳಿಗೆ ಸಮಯದ ನಿರ್ಬಂಧವಿಲ್ಲ. ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿರುತ್ತವೆ. ನೆನಪಿನಲ್ಲಿಡಬೇಕಾದ ಅಂಶವೆಂದರೆ ಪ್ರವೇಶಿಸುವಾಗ ಹೂಡಿಕೆಯಾಗಿದ್ದರು ನಂತರದಲ್ಲಿ ಪೇಟೆ ಅನಿರೀಕ್ಷಿತ ಲಾಭದ ಅವಕಾಶ ಕಲ್ಪಿಸಿಕೊಟ್ಟಲ್ಲಿ ವ್ಯಾವಹಾರಿಕವಾಗಿ ನಗದೀಕರಿಸಿಕೊಳ್ಳುವುದು ಸೂಕ್ತ.
ಬೇಡಿಕೆ ಕಡಿಮೆ- ಆರ್ಥಿಕ ಹಿಂಜರಿತವಲ್ಲ
ಗೃಹಬಳಕೆಯ ಪದಾರ್ಥಗಳಲ್ಲಿ ಬೇಡಿಕೆ ಕಡಿಮೆಯಾಗಿ ಆ ವಲಯದ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಇಳಿಸಿವೆ ಎಂಬುದನ್ನು ಕೆಲವು ವಲಯಗಳಲ್ಲಿ ಇದು ಆರ್ಥಿಕ ಹಿಂಜರಿತದ ಮುನ್ಸೂಚನೆ ಎಂದು ಬಿಂಬಿಸಲಾಗುತ್ತಿದೆ. ವಾಸ್ತವವೆಂದರೆ, ಈ ವಲಯದ ಕಂಪನಿಗಳು ತಮ್ಮ ಉತ್ಪನ್ನಗಳ ಮಾರಾಟದ ಉಮೇದಿನಲ್ಲಿ ಜನಸಾಮಾನ್ಯರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಿ ಹಿಂದಿನ ದಿನಗಳಲ್ಲಿ ಅದರ ಲಾಭಪಡೆದುಕೊಂಡಿವೆ. ಅಂದರೆ ಈ ಹಿಂದೆ ನಮಗ ಅಗತ್ಯವಿದ್ದ ದಿನಬಳಕೆಯ ಸಾಮಾಗ್ರಿಯಾದ ಸೋಪು, ಪೇಸ್ಟ್ ಮುಂತಾದವನ್ನು ಬಳಸುತ್ತಿರುವುದು ಕಾಲಿಯಾದಾಗ ಹೊಸದನ್ನು ಖರೀದಿಸುವ ಕಾಲದಿಂದ ಒಂದು ಕೊಂಡರೆ ಒಂದು ಫ್ರಿ, ಮೂರೂ ಕೊಂಡರೆ ಎರಡು ಫ್ರಿ, ಮುಂತಾದ ಯೋಜನೆಗಳ ಮೂಲಕ ಪ್ರತಿ ಗ್ರಾಹಕರ ಐದಾರು ತಿಂಗಳುಗಳ ಅಗತ್ಯದ ಪದಾರ್ಥಗಳನ್ನು ಒಮ್ಮೆಲೇ ತುಂಬಿಸಿಕೊಟ್ಟಿರುವ ಕಾರಣ ಅವುಗಳ ಅಗತ್ಯದ ಪರಿಸ್ಥಿತಿಗೆ ಸ್ವಲ್ಪ ಸಮಯ ಬೇಕಾಗುವುದು. ಬೇಡಿಕೆ ಕಡಿಮೆಯಾಗಲು ಇದು ಒಂದು ಪ್ರಮುಖ ಕಾರಣ. ಇದನ್ನು ಆರ್ಥಿಕ ಹಿಂಜರಿತಕ್ಕೆ ಹೋಲಿಸುವುದು ಸರಿಯಲ್ಲ.