ಪೌರತ್ವ ತಿದ್ದುಪಡಿ ಕಾಯ್ದೆ ನಂತರ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಭರ್ತಿ ಹೊಡೆತ
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅತಿ ದೊಡ್ಡ ಪೆಟ್ಟು ಬಿದ್ದಿರುವುದು ಪ್ರವಾಸೋದ್ಯಮಕ್ಕೆ ಎನ್ನುತ್ತಿವೆ ಅಂಕಿ- ಅಂಶಗಳು. ಕನಿಷ್ಠ ಏಳು ದೇಶಗಳು ತಮ್ಮ ನಾಗರಿಕರಿಗೆ ಭಾರತಕ್ಕೆ ತೆರಳದಂತೆ ಎಚ್ಚರಿಕೆ ನೀಡಿವೆ. ಇದರ ಪರಿಣಾಮವಾಗಿ ಪ್ರವಾಸೋದ್ಯಮದ ಮೂಲಕ ದೇಶಕ್ಕೆ ಬರುತ್ತಿದ್ದ ವರಮಾನಕ್ಕೆ ಹೊಡೆತ ಬಿದ್ದಿದೆ.
ಅಂದ ಹಾಗೆ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ನಂತರ ಏರ್ಪಟ್ಟ ಗಲಭೆ- ಹಿಂಸಾಚಾರದಲ್ಲಿ ಕನಿಷ್ಠ ಇಪ್ಪತ್ತೈದು ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಭಟನೆಗಳು ಮುಂದುವರಿದಿವೆ. ಅಧಿಕೃತ ಅಂಕಿ- ಅಂಶಗಳ ಪ್ರಕಾರ, ಕಳೆದ ಎರಡೇ ವಾರದಲ್ಲಿ ತಾಜ್ ಮಹಲ್ ಗೆ ಭೇಟಿ ನೀಡಬೇಕಿದ್ದ ಎರಡು ಲಕ್ಷದಷ್ಟು ದೇಶೀಯ- ಅಂತರರಾಷ್ಟ್ರೀಯ ಪ್ರವಾಸಿಗರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಅಥವಾ ಮುಂದೂಡಿದ್ದಾರೆ.
ಈ ವರ್ಷ ಡಿಸೆಂಬರ್ ನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಅರವತ್ತರಷ್ಟು ಕಡಿಮೆ ಆಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಷ್ಟು ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದೆ. "ಭಾರತೀಯ ಮತ್ತು ವಿದೇಶಿ ಪ್ರವಾಸಿಗರು ನಮ್ಮ ಕಂಟ್ರೋಲ್ ರೂಮ್ ಗೆ ಕರೆ ಮಾಡಿ, ಭದ್ರತಾ ವ್ಯವಸ್ಥೆ ಬಗ್ಗೆ ವಿಚಾರಿಸುತ್ತಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಯುರೋಪ್ ನಿಂದ ಬಂದ ಪ್ರವಾಸಿಗರ ತಂಡವೊಂದು ತಮ್ಮ ಪ್ರವಾಸದ ಅವಧಿಯನ್ನು ಇಪ್ಪತ್ತು ದಿನಗಳ ಕಾಲ ಕಡಿತಗೊಳಿಸಿದೆ ಎಂದು ಮಾಧ್ಯಮ ಸಂಸ್ಥೆಯೊಂದು ಅವರ ಜತೆ ಮಾತನಾಡಿ, ವರದಿ ಮಾಡಿದೆ.
ಉತ್ತರಪ್ರದೇಶದ ಆಗ್ರಾದಲ್ಲಿ ಇರುವ ತಾಜ್ ಮಹಲ್ ಗೆ ಪ್ರತಿ ವರ್ಷ ಅರವತ್ತೈದು ಲಕ್ಷ ಮಂದಿ ಭೇಟಿ ನೀಡುತ್ತಾರೆ. ವಾರ್ಷಿಕವಾಗಿ ಸಾವಿರ ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ಆದರೆ ಅಲ್ಲಿನ ಆದಾಯದಲ್ಲಿ ಇಳಿಕೆಯಾಗಿದೆ. ಇನ್ನು ಹಿಂಸಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಆಗ್ರಾದಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಬ್ರಿಟನ್, ರಷ್ಯಾ, ಇಸ್ರೇಲ್, ಸಿಂಗಾಪೂರ್, ಕೆನಡಾ ಮತ್ತು ಥೈವಾನ್ ನಿಂದ ತಮ್ಮ ದೇಶದ ಪ್ರವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಸ್ಸಾಂನಲ್ಲಂತೂ ಶೇಕಡಾ ತೊಂಬತ್ತರಷ್ಟು ಮಂದಿ ಪ್ರವಾಸಿಗರು ಕಡಿಮೆ ಆಗಿದ್ದಾರೆ.