ಹಬ್ಬದ ಋತು: ಅಗರಬತ್ತಿ ಮಾರಾಟ ಶೇ 30ರಷ್ಟು ಹೆಚ್ಚಳ ನಿರೀಕ್ಷೆ
ಬೆಂಗಳೂರು, ಅಕ್ಟೋಬರ್ 16: ಹಬ್ಬದ ಋತುಗಳು ಹತ್ತಿರದಲ್ಲಿಯೇ ಇರುವಂತೆಯೇ ಈ ಅವಧಿಯಲ್ಲಿ ಅಗರಬತ್ತಿಗಳ ಬಳಕೆಯ ಪ್ರಮಾಣ ಶೇ 30ರಷ್ಟು ಏರಿಕೆಯಾಗಲಿದೆ ಎಂದು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಅಂದಾಜು ಮಾಡಿದೆ. ಈ ಬೆಳವಣಿಗೆಯು ಅಗರಬತ್ತಿ ಉತ್ಪಾದಕರರಲ್ಲಿ ಸಂತಸವನ್ನು ಮೂಡಿಸಿದ್ದು, ಈ ಮೂಲಕ ಈ ಉದ್ಯಮವನ್ನೇ ನಂಬಿಕೊಂಡಿರುವ ಲಕ್ಷಾಂತರ ಕೆಳಹಂತದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಆಶಿಸಲಾಗಿದೆ.
ಈ ಕುರಿತು ಮಾತನಾಡಿದ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ದ ಅಧ್ಯಕ್ಷ ಅರ್ಜುನ ರಂಗಾ ಅವರು, ''ಗಣೇಶ ಚತುರ್ಥಿಯಿಂದ ಆರಂಭವಾದಂತೆ ಹೊಸ ವರ್ಷದವರೆಗೂ ಅಗರಬತ್ತಿ ಉದ್ಯಮಕ್ಕೆ ನಿರ್ಣಾಯವಾದ ಅವಧಿಯಾಗಿದೆ. ಸಾರ್ವಜನಿಕ ಸಮಾರಂಭಗಳು, ಪೂಜಾ ಕಾರ್ಯಗಳ ಮೇಲೆ ನಿಬಂಧನೆಗಳು ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆಯ ಮೇಲೆ ಕೆಲವೊಂದು ಪರಿಣಾಮ ಬೀರಬಹುದಾಗಿದೆ. ಜನರು ತಮ್ಮ ಮನೆಗಳಲ್ಲಿ ಪೂಜಾ ಕಾರ್ಯದಲ್ಲಿ ತೊಡಗಿದ್ದು, ಪ್ರಾರ್ಥನೆಯಲ್ಲಿ ತೊಡಗಲಿದ್ದಾರೆ. ಹೀಗಾಗಿ, ಮುಂದಿನ ಮೂರು ತಿಂಗಳು ಅಗರಬತ್ತಿ, ಧೂಪ ಮತ್ತು ಸಂಬಂಧಿತ ಇತರೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯು ಕಂಡುಬರಲಿದೆ'' ಎಂದು ಅರ್ಜುನ ರಂಗಾ ಹೇಳಿದರು.
ಉತ್ತಮ ಮುಂಗಾರು, ದೇಶಿ ಉದ್ಯಮಗಳಿಗೆ ಉತ್ತೇಜನ
''ಅಲ್ಲದೆ, ಉತ್ತಮ ಮುಂಗಾರು ಕಾರಣದಿಂದ ಗ್ರಾಮೀಣ ಭಾಗದಲ್ಲಿ ಚೇತರಿಕೆ ಕಂಡಿರುವುದು, ದೇಶಿ ಉದ್ಯಮಗಳಿಗೆ ಉತ್ತೇಜನ ನೀಡುವ ಸರ್ಕಾರದ ಕ್ರಮಗಳು ಒಟ್ಟಾರೆ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡಲಿವೆ. ಈ ಹಬ್ಬದ ಋತುವಿನಲ್ಲಿ ಒಟ್ಟಾರೆ ಬೇಡಿಕೆಯ ಪ್ರಮಾಣ ಶೇ 30ರಷ್ಟು ಹೆಚ್ಚಲಿದೆ ಎಂಬುದು ನಮ್ಮ ಆಶಯವಾಗಿದೆ''ಎಂದು ಅರ್ಜುನ ರಂಗಾ ಹೇಳಿದರು.
ಕಚ್ಚಾ ವಸ್ತುಗಳ ಲಭ್ಯತೆಯೂ ನಿರ್ಣಾಯಕ
ಬಹುತೇಕ ಉತ್ಪಾದಕರು ಈಗಾಗಲೇ ಮಾರುಕಟ್ಟೆಯ ಬೇಡಿಕೆಯನ್ನು ಈಡೇರಿಸಲು ಉತ್ಪನ್ನಗಳನ್ನು ಪೂರೈಸಿದ್ದಾರೆ. ಚಾರ್ಕೊಲ್, ಬಿದಿರು, ಜಾಸ್ ಪೌಡರ್ ಸೇರಿದಂತೆ ಕಚ್ಚಾ ವಸ್ತುಗಳ ಲಭ್ಯತೆಯೂ ನಿರ್ಣಾಯಕವಾದುದು. ಹಬ್ಬದ ಋತು ಹತ್ತಿರದಲ್ಲಿಯೇ ಇರುವುದರಿಂದ ಉತ್ಪನ್ನಗಳು ಸರಾಗವಾಗಿ ಲಭ್ಯವಾಗುವಂತೆ ಮಾಡುವುದು ಸಾಧ್ಯವಾಗಲಿದೆ. ಸರ್ಕಾರಗಳು ಕೂಡಾ ಹಬ್ಬದ ಆಚರಣೆ ಮತ್ತು ಸಂಪ್ರದಾಯಗಳನ್ನು ಉಳಿಸಲು ಅಗತ್ಯ ಸಹಕಾರವನ್ನು ನೀಡಲಿವೆ ಎಂದು ಅರ್ಜುನ ರಂಗಾ ಅವರು ಅಭಿಪ್ರಾಯಪಟ್ಟರು.
ಪಾರಿಜಾತ ಹೆಸರಾಂತ ಸುಗಂಧದ್ರವ್ಯಕ್ಕೂ ಬೇಡಿಕೆ
ಈ ಅವಧಿಯು ಉದ್ಯಮವು ಹೊಸ ಉತ್ಪನ್ನಗಳು ಹಾಗೂ ಸುಗಂಧ ದ್ರವ್ಯಗಳನ್ನು ಬಿಡುಗಡೆ ಮಾಡುವ ಅವಧಿಯೂ ಆಗಿದೆ. ಗುಲಾಬಿ, ಶ್ರೀಗಂಧ ಮತ್ತು ಪಾರಿಜಾತ ಹೆಸರಾಂತ ಸುಗಂಧದ್ರವ್ಯವಾಗಿದೆ. ವಿಶೇಷವಾದ ವೂಡಿ ಆ್ಯಂಬರ್ ಮತ್ತು ಫ್ರೂಟಿ ಫ್ಲೋರಲ್ ಸುಗಂಧಗಳು ಈ ವರ್ಷ ಗ್ರಾಹಕರನ್ನು ಸೆಳೆಯುವ ಸಂಭವವಿದೆ.
ಮೈಸೂರು ಊದುಬತ್ತಿ ಉತ್ಪಾದಕರ ಸಂಘ
1949ರಲ್ಲಿ ಮೈಸೂರು ಊದುಬತ್ತಿ ಉತ್ಪಾದಕರ ಸಂಘದ (ಎಂಒಎಂಎ) ಹೆಸರಿನಲ್ಲಿ ಏಳು ಜನರು ಸಂಘವನ್ನು ಸ್ಥಾಪಿಸಿದರು. ಅಂದಿನಿಂದ ಎಐಎಎಂಎ ಅನಿಯಮಿತವಾಗಿ ಅಗರಬತ್ತಿ ಉತ್ಪಾದನೆಗೆ ಪ್ರೋತ್ಸಾಹಿಸಲು ಶ್ರಮಿಸುತ್ತಿದೆ. 80ರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಉತ್ಪಾದಕರು ಉದ್ಯಮದತ್ತ ಆಸಕ್ತಿ ತೋರಿದ್ದು, ಎಂಒಎಂಎ ಅನ್ನು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಎಂದು ಮರುನಾಮಕರಣ ಮಾಡಲಾಯಿತು. ಉದ್ಯಮ ಅನಿಯಮಿತವಾಗಿ ಉದ್ಯಮದ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದೇಶದಾದ್ಯಂತ ಒಟ್ಟು 700 ಅಗರಬತ್ತಿ ಉತ್ಪಾದಕ ಸಂಸ್ಥೆಗಳು ಅಜೀವ ಸದಸ್ಯತ್ವ ಹೊಂದಿವೆ. ಸಂಸ್ಥೆಯು ಉದ್ಯಮವು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಎದುರಿಸುವ ಕ್ರಮವಾಗಿ ವಿವಿಧ ಸಂಸ್ಥೆಗಳು, ನೀತಿ ನಿರೂಪಕರು, ಸರ್ಕಾರದ ಸಂಸ್ಥೆಗಳ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ, ಅಗರಬತ್ತಿ ಉದ್ಯಮದ ಒಟ್ಟು ಪ್ರಗತಿಗೆಹಾಗೂ ರಫ್ತು ವಹಿವಾಟು ಹೆಚ್ಚಿಸುವ ನಿಟ್ಟಿನಲ್ಲಿ ತನ್ನ ಗಮನವನ್ನು ಹೆಚ್ಚಾಗಿ ಕೇಂದ್ರೀಕರಿಸಿದೆ.