ಏರ್ ಇಂಡಿಯಾ ಸೇಲ್: ಮೋದಿಯನ್ನು ಕೋರ್ಟಿಗೆ ಎಳೆಯುತ್ತೇನೆ ಎಂದ ಬಿಜೆಪಿ ಸಂಸದ
ಸರಕಾರೀ ಸ್ವಾಮ್ಯದ ವಿಮಾನ ಸಂಸ್ಥೆ ಏರ್ ಇಂಡಿಯಾ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದು ಗೂತ್ತಿರುವ ವಿಚಾರ. ಈಗ, ಅದರ ಸಂಪೂರ್ಣ ಶೇರ್ ಅನ್ನು ಕೇಂದ್ರ ಸರಕಾರ ಮಾರಾಟ ಮಾಡಲು ಬಿಡ್ ಕರೆದಿದೆ.
ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಂಪೆನಿಗಳನ್ನು 2020ರ ಮಾರ್ಚ್ ವೇಳೆಗೆ ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡು ತಿಂಗಳ ಹಿಂದೆನೇ ತಿಳಿಸಿದ್ದರು.
ಏರ್ ಇಂಡಿಯಾ ಅಲ್ಲದೇ, ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾಗೂ 50 ಪರ್ಸೆಂಟ್ ಪಾಲುದಾರಿಕೆ ಹೊಂದಿರುವ ಏರ್ ಇಂಡಿಯಾ ಎಸ್ಎಟಿಎಸ್ ಏರ್ಫೋರ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮಾರಾಟಕ್ಕೂ ಸರ್ಕಾರ ಮುಂದಾಗಿದ್ದು, ಆಸಕ್ತದಾರರಿಗೆ ಬಿಡ್ ಮಾಡಲು ಆಹ್ವಾನಿಸಿದೆ.
ಏರ್ ಇಂಡಿಯಾ ಸಂಪೂರ್ಣ ಪಾಲು ಮಾರಾಟಕ್ಕೆ ಬಿಡ್ ಆಹ್ವಾನಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರಕಾರದ ಈ ಕ್ರಮದ ವಿರುದ್ದ ಬಿಜೆಪಿ ಮುಖಂಡರೇ ಅಸಮಾಧಾನ ಹೊರಹಾಕುತ್ತಿದ್ದಾರೆ. "ಇದೊಂದು ದೇಶದ್ರೋಹದ ಕೆಲಸ" ಎಂದು ಬಿಜೆಪಿ ಸಂಸದರೊಬ್ಬರು ದೂರಿದ್ದಲ್ಲದೇ, ನ್ಯಾಯಾಲಯದ ಕಟಕಟೆಗೆ ಎಳೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ಒಟ್ಟು ಸಾಲ 60,074 ಕೋಟಿ
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಎರಡೂ ಸಂಸ್ಥೆಗಳ ಒಟ್ಟು ಸಾಲ 60,074 ಕೋಟಿ ಇದ್ದು, ಬಿಡ್ ಮಾಡಿ ಖರೀದಿಸುವವರು 23,286 ಕೋಟಿ ಸಾಲ ಹೊರೆ ಹೊರಬೇಕಾಗುತ್ತದೆ. ಉಳಿದ 27,000 ಕೋಟಿ ಸಾಲವನ್ನು ಸರಕಾರವೇ ಭರಿಸಲಿದೆ. ಈ ಬೃಹತ್ ಬಿಡ್ ಪ್ರಕ್ರಿಯೆಗೆ ಮಾರ್ಚ್ 17 ಕೊನೆಯ ದಿನಾಂಕವಾಗಿದೆ. ಬಿಡ್ನ ಅಂತಿಮ ಫಲಿತಾಂಶ ಮಾರ್ಚ್ 31ರೊಳಗೆ ಹೊರಬೀಳಲಿದೆ.
ಮೋದಿ ವಿರುದ್ದ ಕಪಿಲ್ ಸಿಬಲ್ ಆಕ್ರೋಶ
"ಕೇಂದ್ರ ಸರಕಾರ ದಿವಾಳಿಯಾಗಿದೆ, ಯಾವುದಕ್ಕೂ ದುಡ್ಡಿಲ್ಲದೇ ಇರುವುದರಿಂದ ಏರ್ ಇಂಡಿಯಾ ಹರಾಜಿಗೆ ಮೋದಿ ಸರಕಾರ ಮುಂದಾಗಿದೆ. ನರೇಗಾ ಸೇರಿದಂತೆ ಕೋಟ್ಯಾಂತರ ಹಣ ಪಾವತಿಸುವುದು ಬಾಕಿಯಿದೆ. ರಾಜ್ಯಗಳ ಪಾಲಿನ ಜಿಎಸ್ಟಿ ಮೊತ್ತವೂ ಸರಿಯಾಗಿ ಪಾವತಿಯಾಗುತ್ತಿಲ್ಲ"ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಮೋದಿ ಸರಕಾರವನ್ನು ದೂರಿದ್ದರು.
'ನಾನು ಸಚಿವ ಆಗಿರದಿದ್ದರೆ ಏರ್ ಇಂಡಿಯಾ ಖರೀದಿಗೆ ಬಿಡ್ ಮಾಡ್ತಿದ್ದೆ'
ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ತೀವ್ರ ವಿರೋಧ
ಏರ್ ಇಂಡಿಯಾ ಮಾರಾಟಕ್ಕೆ ಬಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. 'ಇದೊಂದು ರಾಷ್ಟ್ರದ್ರೋಹದ ಕೆಲಸ. ಈ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿಯದೇ ಇದ್ದಲ್ಲಿ, ಮೋದಿ ಸರಕಾರವನ್ನು ಕೋರ್ಟಿಗೆ ಎಳೆಯಲು ನಾನು ಮುಂದಾಗಬೇಕಾಗುತ್ತದೆ" ಎಂದು ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಮೋದಿ ಸರಕಾರ, ಈ ನಡೆಯಿಂದ ಹಿಂದಕ್ಕೆ ಸರಿಯಲಿ
"ನಮ್ಮ ಮನೆಯ ವಸ್ತುವನ್ನು ನಾವು ಮಾರಾಟ ಮಾಡುವುದು ತರವೇ" ಎಂದು ಪ್ರಶ್ನಿಸಿರುವ ಸ್ವಾಮಿ, "ಕಳೆದ ಎಂಟು ತಿಂಗಳಿಗೆ ಹೋಲಿಸಿದರೆ ಏರ್ ಇಂಡಿಯಾದ ನಷ್ಟದ ಪ್ರಮಾಣ ಕಮ್ಮಿಯಾಗಿದೆ. ಇಂತಹ ಸಮಯದಲ್ಲಿ ಸಂಸ್ಥೆಯನ್ನು ಬೆಳೆಸುವುದು ಬಿಟ್ಟು, ಮಾರಾಟ ಮಾಡುವುದಕ್ಕೆ ನನ್ನ ವಿರೋಧವಿದೆ. ಮೋದಿ ಸರಕಾರ, ಈ ನಡೆಯಿಂದ ಹಿಂದಕ್ಕೆ ಸರಿಯಲಿ" ಎನ್ನುವ ಸಲಹೆಯನ್ನು ಸುಬ್ರಮಣಿಯನ್ ಸ್ವಾಮಿ ನೀಡಿದ್ದಾರೆ.