ಯಾರೂ ಖರೀದಿ ಮಾಡದಿದ್ರೆ ಏರ್ ಇಂಡಿಯಾ ಮುಚ್ಚುವುದೊಂದೇ ದಾರಿ
ಈಗಾಗಲೇ ತೀವ್ರ ನಷ್ಟಕ್ಕೆ ತುತ್ತಾಗಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸದಿದ್ದರೆ ಮುಚ್ಚಲೇಬೇಕಾದ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದಾರೆ.
ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿರುವ ಹರಿದೀಪ್ ಸಿಂಗ್ ಪುರಿ ಏರ್ ಇಂಡಿಯಾದ ಖಾಸಗೀಕರಣದ ಅಗತ್ಯತೆಯನ್ನು ವಿವರಿಸಿದ್ದಾರೆ. ಏರ್ ಇಂಡಿಯಾ ಆರ್ಥಿಕ ಬಿಕ್ಕಟ್ಟಿನಿಂದ ವಿವಿಧ ಉದ್ಯೋಗಿಗಳ ಶೇಕಡಾ 25ರಷ್ಟು ವೇತನವನ್ನು ತಡೆಹಿಡಿಯಲಾಗಿದೆ. ಖಾಸಗೀಕರಣ ಅಥವಾ ಹೂಡಿಕೆ ಪೂರ್ಣಗೊಳ್ಳುವ ಮೊದಲು ಈ ಶೇಕಡಾ 25ರಷ್ಟು ವೇತನವನ್ನು ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸರ್ಕಾರಿ ಸ್ವಾಮ್ಯ ಸಂಸ್ಥೆಯಾಗಿರುವ ಏರ್ ಇಂಡಿಯಾ ಖಾಸಗೀಕರಣದ ವೇಳೆ ಯಾವುದೇ ಉದ್ಯೋಗ ನಷ್ಟವಾಗುವುದಿಲ್ಲ ಎಂದು ಸಹ ಸಚಿವರು ಭರವಸೆ ನೀಡಿದ್ದಾರೆ. ಉದ್ಯೋಗಿಗಳ ರಕ್ಷಣೆ ಹಾಗೂ ಅವರ ಆರೋಗ್ಯ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದೇವೆ ಎಂದಿದ್ದಾರೆ.
'2020ರ ಮಾರ್ಚ್ ನೊಳಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಮ್ ಮಾರಾಟ'
ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಮಾರ್ಚ್ ವೇಳೆಗೆ ಏರ್ ಇಂಡಿಯಾವನ್ನು ಖಾಸಗೀಕರಣ ಮಾಡುವುದಾಗಿ ತಿಳಿಸಿದ್ದರು.