ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಬಯೋಕಾನ್ನ ಕಿರಣ್ ಮಜುಂದಾರ್ ಶಾ
ಬಯೋಕಾನ್ ಕಂಪೆನಿ ಸ್ಥಾಪಕಿ, ಬಯೋಕಾನ್ ಪ್ರಸ್ತುತ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಅವರು 2020 ರ ವರ್ಷದ Ernst & Young Entrepreneur of the Year Award (EY Award) ಗೆ ಭಾಜನರಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಭಾರತದ ಔಷಧೀಯ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ಕಿರಣ್ ಮಜುಂದಾರ್ ಶಾ ಅವರು ಈ ಪ್ರಶಸ್ತಿ ಪಡೆಯುವ ಮೂಲಕ ಬ್ಯಾಂಕರ್ ಉದಯ್ ಕೊಟಕ್ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಸಾಲಿಗೆ ಸೇರಿದಂತಾಗಿದೆ.
6,940 ಕೋಟಿ ರುಪಾಯಿಗೆ ಷೇರು ಮಾರಿದ ಉದಯ್ ಕೊಟಕ್
2011 ರಲ್ಲಿ ಸಿಂಗಾಪುರದ ಹೈಫ್ಲಕ್ಸ್ ಲಿಮಿಟೆಡ್ನ ಒಲಿವಿಯಾ ಲುಮ್ ಪ್ರಶಸ್ತಿಯನ್ನು ಗೆದ್ದ ನಂತರ ಶಾ ಈ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಶಾ ಪಾತ್ರರಾಗಿದ್ದಾರೆ.
11,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ
67 ರ ವಯಸ್ಸಿನ ಶಾ ಅವರು, 1978 ರಲ್ಲಿ ಕೇವಲ ಇಬ್ಬರು ಉದ್ಯೋಗಿಗಳೊಂದಿಗೆ ಬೆಂಗಳೂರು ಮೂಲದ ಬಯೋಕಾನ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಪ್ರಸ್ತುತ 50,000 ಕೋಟಿ ರೂ. ಮೌಲ್ಯದ ಕಂಪನಿಯನ್ನು ಅವರು ಮುನ್ನಡೆಸುತ್ತಿದ್ದಾರೆ ಮತ್ತು 11,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ.
ದೊಡ್ಡ ಅವಕಾಶಗಳು ಕಠಿಣ ಸಮಯಗಳಲ್ಲಿ ಉದ್ಭವಿಸುತ್ತವೆ
''ದೊಡ್ಡ ಅವಕಾಶಗಳು ಸಾಮಾನ್ಯವಾಗಿ ಕಠಿಣ ಸಮಯಗಳಲ್ಲಿ ಉದ್ಭವಿಸುತ್ತವೆ. ಅದು ನನ್ನ ಉದ್ಯಮಶೀಲತೆಯ ಪ್ರಯಾಣದುದ್ದಕ್ಕೂ ನನ್ನ ಅನುಭವವಾಗಿದೆ. ನನ್ನ ವ್ಯವಹಾರ ಗಮನ ಜಾಗತಿಕ ಆರೋಗ್ಯ ರಕ್ಷಣೆ ಮತ್ತು ಜೀವ ಉಳಿಸುವ ಕ್ಷೇತ್ರದ್ದಾಗಿದೆ. ಆದಾಗ್ಯೂ, ಉದ್ಯಮಿಯಾಗಿ ನನ್ನ ಜವಾಬ್ದಾರಿ ಷೇರುದಾರರಿಗೆ ಮೌಲ್ಯವನ್ನು ತಲುಪಿಸುವುದಕ್ಕಿಂತ ದೊಡ್ಡದಾಗಿದೆ'' ಎಂದು ಕಿರಣದ ಶಾ ಪ್ರಶಸ್ತಿ ಪಡೆದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಶಾ ಸ್ಪೂರ್ತಿದಾಯಕ ಉದ್ಯಮಿಯಾಗಿದ್ದಾರೆ
ಪ್ರಶಸ್ತಿ ಘೋಷಣೆ ಮಾಡಿದ Ernst & Young Entrepreneur of the Year Award ಸಮಿತಿ, ''ಕಿರಣ್ ಶಾ ಅವರು ಒಬ್ಬ ಸ್ಪೂರ್ತಿದಾಯಕ ಉದ್ಯಮಿಯಾಗಿದ್ದಾರೆ. ಕಳೆದ 30 ವರ್ಷಗಳಲ್ಲಿ ಬೆಳವಣಿಗೆಯನ್ನು ನಿರ್ಮಿಸುವ ಮತ್ತು ಉಳಿಸಿಕೊಳ್ಳುವ ಅವರ ಸಾಮರ್ಥ್ಯದಿಂದ ಹಾಗೂ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಭಾವ ಬೀರಿದ ಅವರ ವ್ಯಕ್ತಿತ್ವದ ಮೇಲೆ ಪ್ರಶಸ್ತಿಯ ತೀರ್ಪುಗಾರರ ಸಮಿತಿಯು ಪ್ರಭಾವಿತವಾಗಿದೆ'' ಎಂದು ಹೇಳಿದೆ.
ಗಣ್ಯರ ಶುಭಾಶಯ
ಇನ್ನು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಕಿರಣ ಶಾ ಅವರಿಗೆ ಟ್ವಿಟ್ಟರ್ನಲ್ಲಿ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಕರ್ನಾಟಕದ ವೈದ್ಯಕೀಯ ಸಚಿವ ಕೆ ಸುಧಾಕರ್ ಅವರೂ ಸಹ ಶುಭಾಶಯ ಕೋರಿದ್ದು, ಕಿರಣ್ ಶಾ ಅವರಂತಹ ದಿಟ್ಟ ಮಹಿಳೆಗೆ ಇನ್ನಷ್ಟು ಸಾಧಿಸಲು ಉತ್ಸಾಹ ಬಂದಂತಾಗಿದೆ ಎಂದು ಹೇಳಿದ್ದಾರೆ.