1 ಲಕ್ಷ ಟನ್ ಈರುಳ್ಳಿ ಆಮದಿಗೆ ಮುಂದಾದ ಕೇಂದ್ರ ಸರ್ಕಾರ
ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಬೆಲೆಯಲ್ಲಿ ಭಾರೀ ಏರಿಳಿತ ಕಾಣುತ್ತಿರುವುದರಿಂದ 1 ಲಕ್ಷ ಟನ್ ಈರುಳ್ಳಿ ಆಮದಿಗೆ ಮುಂದಾಗಿದೆ. ಈ ಕುರಿತು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ದೇಶದ ಹಲವೆಡೆ ಈರುಳ್ಳಿ ದರ ಗಗನಕ್ಕೇರಿದೆ. ಅದರಲ್ಲೂ ದೆಹಲಿಯಲ್ಲಿ ಚಿಲ್ಲರೆ ಮಾರಾಟ ದರ ಕೆ.ಜಿಗೆ 100 ರುಪಾಯಿ ಸಮೀಪಿಸಿದೆ. ದೇಶದ ಹಲವಾರು ನಗರಗಳಲ್ಲಿ ಶೇಕಡಾ 40ರಷ್ಟು ದರ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಗಿದೆ.
ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ನೆರೆಯಿಂದಾಗಿ ಉಂಟಾದ ಬೆಳೆ ನಷ್ಟ ಹಾಗೂ ಪೂರೈಕೆ ವ್ಯತ್ಯಯವು ಬೆಲೆ ಏರಿಕೆಗೆ ಕಾರಣವಾಗಿದೆ. ಬಹುತೇಕ ರಾಜ್ಯಗಳಲ್ಲಿ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ಫಸಲು ಬರುವುದು ವಿಳಂಬವಾಗಿದ್ದು, ನವೆಂಬರ್ ಅಂತ್ಯದೊಳಗೆ ಮಾರುಕಟ್ಟೆ ತಲುಪಲಿದೆ.
ಕರ್ನಾಟಕದಲ್ಲಿ ಈರುಳ್ಳಿ ಬೆಳೆ ಬಾರದಿದ್ದಕ್ಕೆ ಉತ್ತರ ಭಾರತದಲ್ಲಿ ಬೆಲೆಗೆ ಬೆಂಕಿ
ಹೀಗಾಗಿ ಸರ್ಕಾರಿ ಸ್ವಾಮ್ಯದ ವ್ಯಾಪಾರ ಸಂಸ್ಥೆ ಎಂಎಂಟಿಸಿ 1 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಿದೆ. ನಾಫೆಡ್ ಸಂಸ್ಥೆಯು ನವೆಂಬರ್ 15ರಿಂದ ಡಿಸೆಂಬರ್ 15ರ ಅವಧಿಯಲ್ಲಿ ಈರುಳ್ಳಿಯನ್ನು ದೇಶೀಯ ಮಾರುಕಟ್ಟೆಗೆ ವಿತರಿಸಲಿದೆ.