BSNL ಸಂಸ್ಥೆಯನ್ನು ನಂಬರ್ 1 ಕಂಪೆನಿಯಾಗಿಸುವುದೇ ನಮ್ಮ ಗುರಿ: ರವಿಶಂಕರ್ ಪ್ರಸಾದ್
ಈಗಾಗಲೇ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಯನ್ನು ದೇಶದ ಅಗ್ರಗಣ್ಯ ಕಂಪೆನಿಯನ್ನಾಗಿಸುವುದೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಙಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
''ಬಿಎಸ್ಎನ್ಎಲ್ ಕೇವಲ ಮೊಬೈಲ್ ಅಥವಾ ಟೆಲಿಫೋನ್ ಸೇವೆ ನೀಡುವ ಕಂಪೆನಿಯಲ್ಲ. ವಿವಿಧ ಯೋಜನೆಗಳಲ್ಲಿ, ಕಾರ್ಯಾಚರಣೆಗಳಲ್ಲಿ ಸರಕಾರ ಅಳವಡಿಸಿಕೊಳ್ಳುವ ತಂತ್ರಗಾರಿಕೆಯ ಬೆನ್ನಲುಬು'' ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಚೆನ್ನೈ ನಡುವೆ ಸಾಗರದಾಳದಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ''ಬಿಎಸ್ಎನ್ಎಲ್ ನಮ್ಮ ಸರಕಾರದ ಆಸ್ತಿ. ಅದನ್ನು ನಷ್ಟದಿಂದ ಮೇಲೆತ್ತಿ, ದೇಶದ ಅಗ್ರಗಣ್ಯ ಕಂಪೆನಿಗಳಲ್ಲೊಂದಾಗಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ'' ಎಂದರು.
ಇದೇ ವೇಳೆ ''ಬಿಎಸ್ಎನ್ಎಲ್ ದೇಶದ ಆಸ್ತಿಯಾಗಿದ್ದು, ತಮಿಳುನಾಡಿನಲ್ಲಿ ಜನರು ಪ್ರವಾಹದಿಂದ ಬಳಲುತ್ತಿದ್ದಾಗ ಅಂತಿಮವಾಗಿ ರಕ್ಷಣೆಗೆ ಬಂದಿದ್ದು ಬಿಎಸ್ಎನ್ಎಲ್, ನೇಪಾಳದಲ್ಲಿ ಭೂಕಂಪ ಸಂಭವಿಸಿ ಭಾರತೀಯರು ಸಿಲುಕಿಕೊಂಡಾಗ ಉಚಿತ ಸೇವೆ ನೀಡಿದವರು ಯಾರು? ಅದು ಬಿಎಸ್ಎನ್ಎಲ್'' ಎಂದು ಹೇಳಿದರು.
ಚೆನ್ನೈ-ಲಕ್ಷದ್ವೀಪದ ನಡುವೆ ಸಮುದ್ರದಾಳದಲ್ಲಿ 1,224 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುವ ಆಪ್ಟಿಕಪ್ ಫೈಬರ್ ಕೇಬಲ್ ಯೋಜನೆಯ ಹೊಣೆಯನ್ನೂ ಬಿಎಸ್ಎನ್ಎಲ್ ಹೊತ್ತಿದೆ' ಎಂದು ತಿಳಿಸಿದ್ದಾರೆ.