ಸಾಲ ರಿಕವರಿ ಆರಂಭಿಸಿದ್ದು 12 ವರ್ಷದಲ್ಲಿ; ಈಗ 1.5 ಲಕ್ಷ ಕೋಟಿಯ ಜವಾಬ್ದಾರಿ
ಆ ಬಾಲಕನಿಗೆ 12 ವರ್ಷ. ತನ್ನ ಶಾಲೆ ದಿನಗಳಲ್ಲಿ ರಜಾ ಬಂದಾಗ ಊರೂರು ಅಲೆದು ಸಾಲ ವಸೂಲಿ ಮಾಡುತ್ತಿದ್ದ. ಆಂಧ್ರ ಪ್ರದೇಶದ (ಅವಿಭಜಿತ ಆಂಧ್ರಪ್ರದೇಶ) ಪೋಟ್ಲಪಾಡುವಿನಲ್ಲಿ ಆತನ ತಂದೆ ಒಂದು ದಿನಸಿ ಅಂಗಡಿ ನಡೆಸುತ್ತಿದ್ದರು. ಅವರಿಗೆ ಬರಬೇಕಾಗಿದ್ದ ಸಾಲವನ್ನು ಈ ಬಾಲಕ ವಸೂಲಿ ಮಾಡಿಕೊಂಡು ಬರುತ್ತಿದ್ದ. ಆ ಬಾಲಕನ ಹೆಸರು ಚಲ್ಲಾ ಶ್ರೀನಿವಾಸುಲು ಶೆಟ್ಟಿ. 42 ವರ್ಷದ ನಂತರವೂ ಸಾಲ ವಸೂಲಿಯ ದೊಡ್ಡ ಜವಾಬ್ದಾರಿ ಮುಂದುವರಿದಿದೆ.
ಆದರೆ, ಈಗ ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇರುವ ಮೂವರು ಮ್ಯಾನೇಜಿಂಗ್ ಡೈರೆಕ್ಟರ್ ಗಳಲ್ಲಿ ಅವರೂ ಒಬ್ಬರು. ಅವರಿಗೆ ಈಗಿರುವ ಅತಿ ಮುಖ್ಯ ಜವಾಬ್ದಾರಿ ಅಂದರೆ ಬ್ಯಾಂಕ್ ಗೆ ಬರಬೇಕಾಗಿರುವ 1.5 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಸಾಲವನ್ನು ವಸೂಲಿ ಮಾಡುವುದು.
ಅಂದ ಹಾಗೆ ಶೆಟ್ಟರು ಇನ್ನೂ ಒಂದು ಮಾತನ್ನು ಹೇಳಿಕೊಂಡಿದ್ದಾರೆ. ಸುಗ್ಗಿ ಕಾಲದಲ್ಲಿ ನೂರೈವತ್ತರಷ್ಟಿದ್ದ ಕುಟುಂಬಗಳು ಇರುತ್ತಿದ್ದ ಹಳ್ಳಿಗಳಿಗೆ ತೆರಳಿ ರೈತರಿಂದ ಸಾಲದ ವಸೂಲಿ ಮಾಡಬೇಕಿತ್ತಂತೆ. ಇದು ಶೆಟ್ಟರು ಮತ್ತವರ ಸೋದರ ಇಬ್ಬರದೂ ಜವಾಬ್ದಾರಿ ಆಗಿರುತ್ತಿತ್ತು. ಹೆಚ್ಚು ವಸೂಲಾಗುತ್ತಿದ್ದುದು ಶ್ರೀನಿವಾಸುಲು ಶೆಟ್ಟರಿಗೇ. ಅವರ ಸೋದರ ಮೃದು ಸ್ವಭಾವದವರಾಗಿದ್ದಂತೆ. ಜತೆಗೆ ಊರಲ್ಲಿ ತುಂಬ ಹೆಸರು ಮಾಡಿದ್ದರಂತೆ. ಆ ಕಾರಣಕ್ಕೆ ಅವರಿಗಿಂತ ಇವರ ಸಾಲ ವಸೂಲಿ ಪ್ರಮಾಣ ಹೆಚ್ಚಿರುತ್ತಿತ್ತಂತೆ.
ಸಾಲ ವಸೂಲಿ ಮಾಡುವಾಗ ಕಲಿತ ಎರಡು ಪಾಠ
ಆದರೆ, ಈ ಬಾರಿ ಶೆಟ್ಟರ ಹಾದಿ ಸಲೀಸಲ್ಲ. ಅವರು ಶಾಲೆಗೆ ಹೋಗುತ್ತಿದ್ದ ದಿನಗಳಿಂದಲೂ ಇಲ್ಲಿ ತನಕ ದೇಶ ಕಂಡ ಗಂಭೀರವಾದ ಮೊದಲ ಆರ್ಥಿಕ ಕುಸಿತ ಇದು. ಬ್ಯಾಡ್ ಲೋನ್ ಪ್ರಮಾಣ ಹೆಚ್ಚಿರುವ ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ ಭಾರತವೂ ಒಂದಾಗಿದೆ. ಯಾವಾಗ ಕೊರೊನಾ ಬಿಕ್ಕಟ್ಟು ಉದ್ಭವಿಸಿತೋ, ವ್ಯಾಪಾರ- ವ್ಯವಹಾರ ನೆಲಕಚ್ಚಿ, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಶೆಟ್ಟಿ ಅವರ ಮುಂದೆ ದೊಡ್ಡ ಸವಾಲಿದೆ. ತಮ್ಮ ತಂದೆಯ ಪರವಾಗಿ ಸಾಲ ವಸೂಲಿ ಮಾಡುವ ವೇಳೆ ಎರಡು ಮುಖ್ಯ ಪಾಠ ಕಲಿತಿದ್ದಾಗಿ ಹೇಳುತ್ತಾರೆ. ಅದರಲ್ಲಿ ಒಂದು ಸಮಯದ ಬೆಲೆ. ಎಷ್ಟು ಬೇಗ ಸಾಲ ವಸೂಲಿ ಮಾಡುತ್ತೀರೋ ಅಷ್ಟು ಮುಖ್ಯ. ಇನ್ನು ಎರಡನೆಯದು ಫಾಲೋ ಅಪ್. ಇದರ ಪ್ರಾಮುಖ್ಯತೆ ಬಗ್ಗೆ ಈಗ ಒತ್ತು ಕೊಟ್ಟು ವಿವರಣೆ ನೀಡುವ ಅಗತ್ಯವೇ ಇಲ್ಲ ಎನ್ನುತ್ತಾರೆ ಅವರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 32 ವರ್ಷ
ಶ್ರೀನಿವಾಸುಲು ಶೆಟ್ಟಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೇ 32 ವರ್ಷ ಕಳೆದಿದ್ದಾರೆ. ಅದರಲ್ಲಿ ವಿದೇಶದಲ್ಲಿನ ಸಾಲ ವಸೂಲಾತಿ ಕೂಡ ಒಳಗೊಂಡಿದೆ. ಅಂದರೆ ಬ್ಯಾಡ್ ಲೋನ್ ಗಳನ್ನು ವಸೂಲಿ ಮಾಡುವುದು ಸಹ ಸೇರಿರುತ್ತದೆ. ಇದರ ಜತೆಗೆ ರೀಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ನೇತೃತ್ವವನ್ನು ಕೂಡ ವಹಿಸಿಕೊಂಡಿದ್ದಾರೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬರಬೇಕಾದ ಒಟ್ಟು ಸಾಲದ ಮೊತ್ತದಲ್ಲಿ ಐದನೇ ಒಂದು ಭಾಗದಷ್ಟು, ಅಂದರೆ 1.37 ಲಕ್ಷ ಕೋಟಿ ಅಮೆರಿಕನ್ ಡಾಲರ್ (ಒಂದು ಡಾಲರ್ ಗೆ ಭಾರತದ ರುಪಾಯಿ ಮೌಲ್ಯ ಜೂನ್ 19ಕ್ಕೆ 76.174) ಇದೆ. ಇನ್ನು ಈ ಸಾಲ ಪಡೆದು ವ್ಯಾಜ್ಯ ಆಗಿರುವಂಥದ್ದಕ್ಕೆ ಒನ್ ಟೈಮ್ ಸೆಟ್ಲ್ ಮೆಂಟ್ (OTS) ಆದ್ಯತೆ ನೀಡುವುದಾಗಿ ಹೇಳುವ ಅವರು, ಸರಿಯಾದ ಸಮಯಕ್ಕೆ ನಗದು ಪಡೆಯುವ ಮಾರ್ಗ ಇದು ಎನ್ನುತ್ತಾರೆ. "ಸಣ್ಣ ಹಾಗೂ ಮಧ್ಯಮ ಗಾತ್ರದ ಖಾತೆಗಳವರು ಸಾಲ ನೀಡದಿದ್ದಲ್ಲಿ ಫಾಲೋ ಬಹಳ ಮುಖ್ಯ" ಎನ್ನುತ್ತಾರೆ.
ಕಾರ್ಪೊರೇಟ್ ಗಿಂತ ರೀಟೇಲ್ ಸಾಲ ವಸೂಲಿ ಓಕೆ
ಕಾರ್ಪೊರೇಟ್ ಸಾಲಕ್ಕಿಂತ ರೀಟೇಲ್ ಸಾಲ ವಸೂಲಿ ಆಶಾದಾಯಕವಾಗಿ ಇದೆ ಎನ್ನುತ್ತಾರೆ ಶೆಟ್ಟಿ. ಆದ್ದರಿಂದ ನಯವಾಗಿ ಮಾತನಾಡುವ ತಂಡಗಳು "ಫಾಲೋ ಅಪ್" ಸಿದ್ಧಾಂತದಲ್ಲಿ ತೊಡಗಿವೆಯಂತೆ. ಸಾಮಾನ್ಯವಾಗಿ ಸಾಲ ವಸೂಲಿಯನ್ನು ಖಾಸಗಿಯವರಿಗೆ ವಹಿಸಲಾಗುತ್ತದೆ. ಆದರೆ ಈ ಕೆಲಸವನ್ನು ಶೆಟ್ಟರು ಎಸ್ ಬಿಐ ಉದ್ಯೋಗಿಗಳಿಗೇ ವಹಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಕರೆ ಮಾಡಿ, ಸಾಲ ಮರುಪಾವತಿಯಿಂದ ವಿನಾಯಿತಿ ಪಡೆದರೆ ಅದರ ಪರಿಣಾಮ ಏನಾಗಲಿದೆ ಎಂದು ವಿವರಿಸಲಾಗಿದೆ. ಇದು ಸಾಲ ಮನ್ನಾ ಅಲ್ಲ. ನಿಮ್ಮಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಿದೆಯೇ ಎಂಬುದನ್ನು ಮತ್ತೊಮ್ಮೆ ಮಗದೊಮ್ಮೆ ಕೇಳಲಾಗಿದೆ. "ಬಹಳ ಮಂದಿ ಗ್ರಾಹಕರ ಬಳಿ ಹಣ ಇತ್ತು. ಆದರೆ ಅನಿಶ್ಚಿತತೆ ಎಂಬ ಕಾರಣಕ್ಕೆ ಹಣ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಇದು ಕರೆ ಮಾಡಿದ ಮೇಲೆ ಗೊತ್ತಾದ ಸಂಗತಿ" ಎನ್ನುತ್ತಾರೆ ಶೆಟ್ಟರು.
98 ಮಾನದಂಡಗಳನ್ನು ಗಮನಿಸಲಾಗುತ್ತದೆ
ಆದರೆ, ಕಂಪೆನಿಗಳಿಂದ ಸಾಲ ವಸೂಲಿ ಮಾಡುವುದಕ್ಕೆ ಇಂಥದ್ದೇ ಮಾರ್ಗ ಎಂದು ಹೇಳುವುದು ಕಷ್ಟ ಎಂಬುದು ಅವರ ಅನುಭವದ ಮಾತು. ಆಯಾ ಕಂಪೆನಿಯ ಸನ್ನಿವೇಶ ನೋಡಿ, ನಿರ್ಧಾರ ಮಾಡಿಕೊಳ್ಳಬೇಕೇ ವಿನಾ ಇದು ಹೀಗೇ ಎನ್ನಲು ಸಾಧ್ಯವಿಲ್ಲ ಎನ್ನುತ್ತಾರೆ. ಎಸ್ ಬಿಐನಿಂದ ಕಾರ್ಪೊರೇಟ್ ಸಾಲ ನೀಡುವಾಗ 98 ಮಾನದಂಡಗಳನ್ನು ಗಮನಿಸಲಾಗುತ್ತದೆ. ಅದರಲ್ಲಿ ಷೇರು ಅಡಮಾನ, ಲೆಟರ್ ಆಫ್ ಕ್ರೆಡಿಟ್ ಗೆ ತಡವಾಗಿ ಹಣ ನೀಡುವುದು ಇವೆಲ್ಲ ಇರುತ್ತದೆ ಎನ್ನುತ್ತಾರೆ. ಬ್ಯಾಂಕ್ ನ ವಸೂಲಾತಿ ಪ್ರಮಾಣ ಡಬಲ್, ಅಂದರೆ 14 ಪರ್ಸೆಂಟ್ ಆಗಿದೆ. ಇದಕ್ಕೆ ಹೊಸ ದಿವಾಳಿ ಕಾನೂನು ಮತ್ತು ಇತರ ನಿಯಮಗಳು ಕೂಡ ಕಾರಣ. ಆದರೂ ಈ ಹಣಕಾಸು ವರ್ಷದಲ್ಲಿ ಕಂಪೆನಿಗಳು ನಿಜವಾಗಲೂ ಕಷ್ಟದಲ್ಲಿವೆ. ಆದ್ದರಿಂದ ವಸೂಲಾತಿ ಕಡಿಮೆ ಆಗಿದೆ ಎನ್ನುತ್ತಾರೆ ಶೆಟ್ಟಿ. ಅಂದ ಹಾಗೆ, ಸಾಲ ವಸೂಲಾತಿ ಕಷ್ಟ ಎನ್ನಿಸುವಂಥದ್ದನ್ನು ವಸೂಲಿ ಮಾಡುವ ಸಲುವಾಗಿಯೇ ಶೆಟ್ಟರ ನೇತೃತ್ಬದಲ್ಲಿ 1800 ಮಂದಿಯ ತಂಡ ಕೆಲಸ ಮಾಡುತ್ತಿದೆ. ಸಾಲ ಮರುಪಾವತಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅವಕಾಶವನ್ನು ಬ್ಯಾಂಕ್ ನೀಡುತ್ತಿದೆ.
ಬೆಳ್ಳಂಬೆಳಗ್ಗೆ ರೈತರ ಮನೆ ಮುಂದೆ ನಿಂತಿರುತ್ತಿದ್ದರು
ಮೊದಲಿಗೆ ಸಾಲ ಪಡೆದವರಿಗೆ ಏನು ಸಮಸ್ಯೆ ಆಗಿದೆ ಎಂದು ತಿಳಿದುಕೊಂಡರೆ ಅವರಿಗೆ ಸಹಾಯ ಮಾಡಬಹುದು ಅಥವಾ ಕಠಿಣ ಕ್ರಮಕ್ಕೆ ಯೋಜನೆ ರೂಪಿಸಬಹುದು. ನಾವು ಪ್ರವರ್ತಕರ ಜತೆ ಕೂತು, ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎನ್ನುತ್ತಾರೆ ಶೆಟ್ಟಿ. ಹನ್ನೆರಡು ವರ್ಷದ ಶೆಟ್ಟರಿಗೆ ಈಗಲೂ ತಮ್ಮ ಬಾಲ್ಯದ ನೆನಪು ಆಳವಾಗಿ ಬೇರೂರಿದೆ. ತಮ್ಮ ಮಗ ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು ಎಂಬುದು ಆ ತಂದೆಯ ಆಸೆಯಾಗಿತ್ತು. ಈಗ ಅದೇ ಕೆಲಸದಲ್ಲಿ ಇದ್ದಾರೆ ಶೆಟ್ಟಿ. ಆ ದಿನಗಳಲ್ಲಿ ಹಳ್ಳಿಯಲ್ಲಿ ಕಲಿತ ಪಾಠದ ಬೆಲೆ ತನಗೆ ಈಗ ಗೊತ್ತಾಗುತ್ತಿದೆ ಎನ್ನುತ್ತಾರೆ. ಪ್ರತಿ ದಿನ ಶೆಟ್ಟಿ ಮತ್ತು ಅವರ ಸೋದರ ಬೆಳ್ಳಂಬೆಳಗ್ಗೆ ರೈತರ ಮನೆ ಮುಂದೆ ನಿಂತಿರುತ್ತಿದ್ದರಂತೆ. ಜಮೀನಿಗೆ ಹೋಗುವ ಮುನ್ನ ಇವರೇ ಕಾಣಬೇಕು. ಅಲ್ಲಿಂದ ತೆರಳಬೇಕು ಅಂದರೆ, ಇವರಿಬ್ಬರನ್ನು ದಾಟಿ ಹೋಗಬೇಕು. ಅದಾಗಬೇಕು ಅಂದರೆ ಹಣ ಪಾವತಿಸಬೇಕು. ಇದನ್ನು ಅವರ ಮಾತಿನಲ್ಲಿ ನೆನಪಿಸಿಕೊಳ್ಳುತ್ತಾರೆ.