ಅಸ್ಸಾಂನಲ್ಲಿ ಚಿಕನ್ ಕೇಜಿಗೆ 500 ರುಪಾಯಿ, ಈರುಳ್ಳಿಗೆ 250 ರುಪಾಯಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯು ಅಸ್ಸಾಂನ ರಾಜಧಾನಿ ಗುವಾಹತಿಯಲ್ಲಿ ಸಾಮಾನ್ಯ ಜನ ಜೀವನಕ್ಕೆ ಹೊಡೆತ ಕೊಟ್ಟಿದ್ದಷ್ಟೇ ಅಲ್ಲ, ಆರ್ಥಿಕತೆ ಮೇಲೂ ಬರೆ ಎಳೆದಿದೆ. ಆಹಾರ ಪದಾರ್ಥಗಳ ಕೊರತೆ, ಆಕಾಶಕ್ಕೆ ಏರಿರುವ ಬೆಲೆಗಳು, ಖಾಲಿ- ಖಾಲಿ ಎಟಿಎಂಗಳು, ಕೆಲಸವೇ ಮಾಡದ ಸ್ವೈಪಿಂಗ್ ಮಶೀನ್ ಗಳು ಎಲ್ಲೆಲ್ಲೂ ಕಂಡುಬರುತ್ತಿವೆ.
ಇನ್ನು ಪೆಟ್ರೋಲ್ ಬಂಕ್ ಗಳಲ್ಲಂತೂ ತೈಲವೇ ಇಲ್ಲ. ಏಕೆಂದರೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜತೆಗೆ ನಗದು ಕೊರತೆ ಮತ್ತು ಇಂಟರ್ ನೆಟ್ ಸಮಸ್ಯೆ ಎದುರಾಗಿದೆ. ಆಹಾರ ಪದಾರ್ಥಗಳ ಬೆಲೆಯಂತೂ ವಿಪರೀತ ಹೆಚ್ಚಳವಾಗಿದೆ. ಕೇಜಿ ಈರುಳ್ಳಿಗೆ 250 ರುಪಾಯಿ, ಆಲೂಗಡ್ಡೆ ಕೇಜಿಗೆ 60ರಂತೆ ಶನಿವಾರ ಮಾರಾಟವಾಗಿದೆ.
ಅದೇ ರೀತಿ ಚಿಕನ್ ಕೇಜಿಗೆ 500 ರುಪಾಯಿ, ರೋಹು ಮೀನು ಕೇಜಿಗೆ 420 ರುಪಾಯಿ, ಸಾಮಾನ್ಯವಾಗಿ 10 ರುಪಾಯಿಯಂತೆ ಮಾರಾಟವಾಗುವ ಸೊಪ್ಪು 60 ರುಪಾಯಿಗೆ ಮಾರಾಟವಾಗಿದೆ. ಗುವಾಹತಿಗೆ ನಗರ ಹೊರಭಾಗದಿಂದ ತರಕಾರಿಗಳು ಪೂರೈಕೆ ಆಗುತ್ತವೆ. ನಂತರ ನಗರದ ಸಗಟು ಮಾರಾಟಗಾರರಿಂದ ಚಿಲ್ಲರೆ ಮಾರಾಟಗಾರರು ಖರೀದಿ ಮಾಡುತ್ತಾರೆ.
ತರಕಾರಿ ಮಾರಾಟಗಾರರಿಗೂ ಅಲ್ಪ ಪ್ರಮಾಣದಲ್ಲಿ ಸರಕು ದೊರೆಯುತ್ತಿದೆ. ಖರೀದಿ ಮಾಡಿದ ಕೆಲವೇ ಗಂಟೆಗಳಲ್ಲಿ ಮಾರಾಟ ಆಗಿದೆ. ಕೃಷಿ ಉತ್ಪನ್ನಗಳನ್ನು ಹೊತ್ತು ತಂದಿರುವ ಟ್ರಕ್ ಗಳು ಕಳೆದ ಶನಿವಾರದಿಂದ ಪ.ಬಂಗಾಲ- ಅಸ್ಸಾಂ ಗಡಿಯಲ್ಲೇ ನಿಂತಿವೆ. ಸರ್ಕಾರ ಮಧ್ಯಪ್ರವೇಶಿಸಿ, ಸೇವೆಯು ಮುಂಚಿನಂತೆ ಆಗಲು ಅನುವು ಮಾಡಿಕೊಡಬೇಕು ಎಂದು ಅಸ್ಸಾಂ ವಾಣಿಜ್ಯ ಮಂಡಳಿಯು ಮನವಿ ಮಾಡಿಕೊಂಡಿದೆ.