ನಬಾರ್ಡ್ ನೂತನ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅಧಿಕಾರ ಸ್ವೀಕಾರ
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅವರು ಬೆಂಗಳೂರಿನಲ್ಲಿರುವ ನಬಾರ್ಡ್ನ ಕೇಂದ್ರ ಕಚೇರಿಯಲ್ಲಿ ಮೇ 27 ರಿಂದ ಅನ್ವಯವಾಗುವಂತೆ ಅಧಿಕಾರ ಸ್ವೀಕರಿಸಿದರು. ಇದುವರೆಗೆ ಚಿಂತಲ ಅವರು ನಬಾರ್ಡ್ನ ಅಂಗಸಂಸ್ಥೆಯಾಗಿರುವ ಎನ್ಎಬಿಎಫ್ಐಎನ್ಎಸ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಚಿಂತಲ ಅವರು ನವದೆಹಲಿಯಲ್ಲಿರುವ ದೇಶದ ಪ್ರತಿಷ್ಠಿತ ಇಂಡಿಯನ್ ಅಗ್ರಿಕಲ್ಚರ್ ರೀಸರ್ಚ್ ಇನ್ಸಿಟ್ಯೂಟ್ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಬಾರ್ಡ್ ಕೇಂದ್ರ ಕಚೇರಿಯಲ್ಲಿ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಅನುಭವವನ್ನು ಹೊಂದಿದ್ದಾರೆ. ಇದಲ್ಲದೇ, ಅವರು ಮುಂಬೈ, ಅಂಡಮಾನ್ & ನಿಕೋಬಾರ್, ಹೈದ್ರಾಬಾದ್, ಚಂಡೀಘಡ, ಲಕ್ನೋ, ನವದೆಹಲಿ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿರುವ ಪ್ರಾದೇಶಿಕ ಕಚೇರಿಗಳಲ್ಲಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.
ಹೈದ್ರಾಬಾದ್ನ ಅಗ್ರಿ-ಬ್ಯುಸಿನೆಸ್ ಫೈನಾನ್ಸ್ ಲಿಮಿಟೆಡ್ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರು, ಲಕ್ನೋದಲ್ಲಿರುವ ಗ್ರಾಮೀಣಾಭಿವೃದ್ಧಿ ಬ್ಯಾಂಕರ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಈ ಹಿಂದೆಯೇ 2006 ರಲ್ಲಿ ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಮಾಡುವ ಬಗ್ಗೆ ರೂಪುರೇಷೆಯನ್ನು ಸಿದ್ಧಪಡಿಸಿದ್ದರು.