ಕೊರೊನಾ ಎಫೆಕ್ಟ್: ದೇಶದಲ್ಲಿ ವೇಗದಲ್ಲಿ ಸಾಗುತ್ತಿದೆ ಡಿಜಿಟಲೀಕರಣ
ಕೊರೊನಾವೈರಸ್ ಪರಿಣಾಮ ದೇಶದೆಲ್ಲೆಡೆ ಉದ್ಯಮಗಳೆಲ್ಲಾ ನೆಲಕಚ್ಚಿದ್ದು, ಇದರ ನಡುವೆ ಸದ್ದಿಲ್ಲದೆ ಡಿಜಿಟಲೀಕರಣ ಸಾಗುತ್ತಿದೆ. ಹೌದು ಈ ಹಿಂದೆ ಕೇಂದ್ರ ಸರ್ಕಾರ ಡಿಜಿಟಲೀಕರಣಕ್ಕೆ ಒತ್ತು ನೀಡಿ ನಾನಾ ಯೋಜನೆಗೆ ಮುಂದಾಗಿತ್ತು. ಆದರೆ ಕೊರೊನಾವೈರಸ್ ಕಾರಣ ಜನರು ತಮ್ಮಷ್ಟಕ್ಕೆ ತಾವೇ ಡಿಜಿಟಲೀಕರಣ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಯೊಂದರ ವರದಿಯಿಂದ ತಿಳಿದುಬಂದಿದೆ.
ಮಾತಿನ ಮೂಲಕವೇ ಕೆಲಸ ಮಾಡುವ ಆ್ಯಪ್ಗಳು
ಕೊರೊನಾವೈರಸ್ ಬಂದ ಮೇಲೆ ಜನರಿಗೆ ವಸ್ತುಗಳನ್ನು, ವ್ಯಕ್ತಿಗಳನ್ನು ಮುಟ್ಟುವುದೆಂದರೆ ಬಹಳ ಹೆದರಿಕೆ. ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದ್ದರಿಂದ ಜನರು ಕೆಲವು ವಿಶೇಷ ತಂತ್ರಜ್ಞಾನಗಳಿಗೆ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿರುವುದು ವಾಯ್ಸ ಬೇಸ್ಡ್ ಇಂಟರ್ಫೇಸ್. ಅಂದರೆ ಇಲ್ಲಿ ಸ್ಪರ್ಶವಿಲ್ಲದೇ, ನಮ್ಮ ಮಾತಿನ ಮೂಲಕ ಕೆಲಸ ಮಾಡಿಸಬಹುದಾದ ಸಾಧನಗಳಿಗೆ ಆದ್ಯತೆ. ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ನಂತವು ಇಂತಹ ಸಾಧನಗಳ ಬಳಕೆ ಹೆಚ್ಚಿದೆ. ಮೊಬೈಲ್ನಲ್ಲೂ ಅಂತಹ ಆ್ಯಪ್ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಮೊಬೈಲ್ ಪಾವತಿಗೆ ಹೆಚ್ಚಿದ ಆದ್ಯತೆ
ಜನ ವಸ್ತುಗಳನ್ನು ಖರೀದಿಸಲು ಹೋದಾಗ, ಮನೆಗೆ ತರಿಸಿಕೊಂಡಾಗ ನಗದು ಅಥವಾ ಕಾರ್ಡ್ ನೀಡಲು ಬಯಸುತ್ತಿದ್ದರು. ಈ ಮಾದರಿಯಲ್ಲಿ ಸ್ಪರ್ಶ ಅನಿವಾರ್ಯ. ಆದ್ದರಿಂದ ಮೊಬೈಲ್ ಆ್ಯಪ್ಗಳ ಮೂಲಕ ನೇರವಾಗಿ ಖಾತೆಗೆ ಹಣ ರವಾನಿಸುವ ಸ್ವಭಾವ ಜಾಸ್ತಿಯಾಗಿದೆ. 90 ಪರ್ಸೆಂಟ್ರಷ್ಟು ಮಂದಿ ಈ ದಾರಿಯನ್ನೇ ಆಯ್ದುಕೊಳ್ಳುತ್ತಿದ್ದಾರೆಂದು ಕ್ಯಾಪ್ಜೆಮಿನಿ ಹೇಳಿದೆ.
ಸಂಪರ್ಕರಹಿತ ಸೇವೆಗೆ ಗ್ರಾಹಕರ ಆದ್ಯತೆ
ಬಹುತೇಕ ಗ್ರಾಹಕರು ಕೋವಿಡ್ ಕಾರಣದಿಂದ ಸಂಪರ್ಕರಹಿತ ಸೇವೆಯನ್ನು ಬಯಸುತ್ತಿದ್ದಾರೆ. ಇದನ್ನು ಎಲ್ಲ ಕಂಪನಿಗಳು, ಸೇವಾ ಸಂಸ್ಥೆಗಳು ಗಮನಿಸಿವೆ. ಉದಾಹರಣೆಗೆ ಕಾರು ಕಂಪನಿಗಳು, ಸಂಪೂರ್ಣ ಪ್ರಕ್ರಿಯೆಯನ್ನು ಅಂತರ್ಜಾಲದ ಮುಖೇನ ಮುಗಿಸಿ, ಕಾರನ್ನು ತಾವೇ ಖುದ್ದಾಗಿ, ಗರಿಷ್ಠ ಸ್ವಚ್ಛತಾ ನಿಯಮ ಅನುಸರಿಸಿ ಮನೆಗೆ ತಲುಪಿಸಿ ಬರುತ್ತಿವೆ. ಇದೇ ರೀತಿಯಲ್ಲಿ ಹಲವು ಕಂಪನಿಗಳು ಸೇವೆಯನ್ನು ಆದಷ್ಟು ಅಂತರ್ಜಾಲದ ಮೂಲಕ, ಡಿಜಿಟಲೀಕರಣದ ಮೂಲಕ ಗ್ರಾಹಕರನ್ನು ತಲುಪುತ್ತಿವೆ.