ಕೊರೊನಾ ಬಿಕ್ಕಟ್ಟು: ರಿಲಯನ್ಸ್ ಇಂಡಸ್ಟ್ರೀಸ್ ಉದ್ಯೋಗಿಗಳ ವೇತನ ಕಡಿತ, ಇಡೀ ಸಂಬಳವನ್ನೇ ತ್ಯಾಗ ಮಾಡಿದ ಮುಕೇಶ್
ದೇಶಾದ್ಯಂತ ಕೊರೊನಾ ಬಿಕ್ಕಟ್ಟು ಭಾರೀ ನಷ್ಟವನ್ನೇ ಸೃಷ್ಟಿಸಿದ್ದು, ಏಷ್ಯಾದ ಶ್ರೀಮಂತ ಮುಕೇಶ್ ಅಂಬಾನಿಯನ್ನು ಬಿಡಲಿಲ್ಲ. ಇವರ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಸಂಸ್ಥೆಯ ಲಾಭಾಂಶದಲ್ಲಿ 39 ಪರ್ಸೆಂಟ್ರಷ್ಟು ಅಂದರೆ ಸುಮಾರು 4,267 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಾರಿ ಒಟ್ಟು 10,813 ಕೋಟಿ ಹೊಂದಾಣಿಕ ಲಾಭದ ಕುರಿತು ಲೆಕ್ಕಾಚಾರ ಹಾಕಲಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಆಡಳಿತ ಮಂಡಳಿ ಪ್ರತಿ ಷೇರಿಗೆ 1,275 ದರದಲ್ಲಿ ಹಂಚಿಕೆಗೆ ಅನುಮೋದನೆ ನೀಡಿದೆ. ಇದರಿಂದ 53,000 ಕೋಟಿ ರುಪಾಯಿ ಏರಿಕೆಯಾಗಿದೆ.
ಇನ್ನು ಕೊರೋನಾ ಮಹಾಮಾರಿಯಿಂದಾಗಿ ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ತಮ್ಮ ಇಡೀ ಸಂಬಳವನ್ನೇ ತ್ಯಾಗ ಮಾಡಿದ್ದಾರೆ. ಜೊತೆಗೆ ಆರ್ಐಎಲ್ನ ಕಾರ್ಯನಿರ್ವಾಹಕ ನಿರ್ದೇಶಕರು, ಸದಸ್ಯರು ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತಮ್ಮ ಸಂಬಳ ಭತ್ಯೆಯಲ್ಲಿ 30ರಿಂದ 50 ಪರ್ಸೆಂಟ್ರಷ್ಟು ತ್ಯಾಗ ಮಾಡಿದ್ದಾರೆ. ಮತ್ತು ವಾರ್ಷಿಕ 15 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿರುವ ರಿಲಯನ್ಸ್ನ ಎಲ್ಲ ಉದ್ಯೋಗಿಗಳು 10 ಪರ್ಸೆಂಟ್ರಷ್ಟು ಸಂಬಳ ಬಿಟ್ಟುಕೊಡಲಿದ್ದಾರೆ.
ಇನ್ನು ಲಾಕ್ ಡೌನ್ ಹೊರತಾಗಿಯೂ ರಿಲಯನ್ಸ್ ಜಿಯೋ ಲಾಭಾಂಶ 177 ಪರ್ಸೆಂಟ್ರಷ್ಟು ಏರಿಕೆಯಾಗಿದ್ದು, 2,331 ಕೋಟಿ ರುಪಾಯಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 840 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.