ಕೊರೊನಾದಿಂದ ವಿಮಾನ ಹಾರಾಟಕ್ಕೆ ನಿರ್ಬಂಧ; ಚಿನ್ನ ಕಳ್ಳ ಸಾಗಣೆಗೆ ಬಿತ್ತು ಬ್ರೇಕ್
ಚಿನ್ನದ ಲೋಹಕ್ಕೆ ವಿಶ್ವದ ಎರಡನೇ ಅತಿ ದೊಡ್ಡ ಗ್ರಾಹಕ ದೇಶ ಭಾರತಕ್ಕೆ ಕೊರೊನಾ ಬಿಕ್ಕಟ್ಟಿನಿಂದ ದೊಡ್ಡ ಮಟ್ಟಿಗೆ ಬ್ರೇಕ್ ಬಿದ್ದಿದೆ. ಕಾನೂನು ಬಾಹಿರವಾಗಿ ಭಾರತಕ್ಕೆ ಈ ವರ್ಷ ಬಂದಿರುವ ತಿಂಗಳ ಸರಾಸರಿ ಅಂದಾಜು ಚಿನ್ನ 2 ಟನ್. ಈ ವರ್ಷದಲ್ಲಿ ಒಟ್ಟಾರೆ 25 ಟನ್ ಗಿಂತ ಸ್ವಲ್ಪ ಹೆಚ್ಚಿದೆ ಎಂದು ಆಲ್ ಇಂಡಿಯಾ ಜೆಮ್ ಅಂಡ್ ಜ್ಯುವೆಲ್ಲರಿ ಡೆಮೆಸ್ಟಿಕ್ ಕೌನ್ಸಿಲ್ ಅಧ್ಯಕ್ಷ ಎನ್. ಅನಂತ ಪದ್ಮನಾಭನ್ ಹೇಳಿದ್ದಾರೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಕಳೆದ ವರ್ಷ ಅಂದಾಜು 120 ಟನ್ ಅಥವಾ ದೇಶದ ಒಟ್ಟು ಬೇಡಿಕೆಯ 17%ನಷ್ಟು ಕಾನೂನು ಬಾಹಿರವಾಗಿ ಭಾರತದೊಳಕ್ಕೆ ಬಂದಿತ್ತು. ಆದರೆ ಕಳೆದ ಮಾರ್ಚ್ ನಲ್ಲಿ ಭಾರತದಲ್ಲಿ ಕಠಿಣ ಲಾಕ್ ಡೌನ್ ಹಾಕಿದ ಮೇಲೆ ಅಂತರರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ಹಾಕಲಾಗಿತ್ತು. ಇದರಿಂದ ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆ ಕುಗ್ಗಿತ್ತು. ಒಟ್ಟಾರೆ ಚಿನ್ನದ ಬೇಡಿಕೆ ನೆಲ ಕಚ್ಚಿದೆ.
ವಿಮಾನ ತೈಲದಲ್ಲಿ ಬೆಲೆ ಇಳಿದು, ಹಡಗುಗಳಿಗೆ ಆ ಪದಾರ್ಥಗಳೇ ಬಳಕೆ
ನಿಧಾನಕ್ಕೆ ನಿರ್ಬಂಧ ತೆರವುಗೊಳಿಸುತ್ತಾ ಬಂದರೂ ಈಗಲೂ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲ. "ಕಳೆದ ಆರು ತಿಂಗಳಲ್ಲಿ ಯಾವುದೇ ವಿಮಾನ ಹಾರಾಟ ಆಗಿಲ್ಲ. ಆದ್ದರಿಂದ ಕಳ್ಳಸಾಗಣೆಯ ಮೊತ್ತವು ಬಹಳ ಕಡಿಮೆ ಆಗಿದೆ. ಆದರೂ ಈಗ ಎಷ್ಟು ಪ್ರಮಾಣದಲ್ಲಿ ಚಿನ್ನ ಕಳ್ಳ ಸಾಗಣೆ ಆಗುತ್ತಿದೆಯೋ ಅದು ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಭೂ ಗಡಿಗಳಿಂದ ಆಗುತ್ತಿದೆಯೇ ಹೊರತು ವಿಮಾನ ನಿಲ್ದಾಣಗಳಿಂದಲ್ಲ," ಎಂದು ಅನಂತಪದ್ಮನಾಭನ್ ಹೇಳಿದ್ದಾರೆ.
ಬ್ಲೂಮ್ ಬರ್ಗ್ ಲೆಕ್ಕಾಚಾರದಂತೆ ಹಣಕಾಸು ಸಚಿವಾಲಯ ಮಾಹಿತಿಯಂತೆ, ಭಾರತೀಯ ವಿಮಾನ ನಿಲ್ದಾಣದ ತಿಂಗಳ ಸರಾಸರಿ ಚಿನ್ನದ ಕಳ್ಳ ಸಾಗಣೆಯು ಏಪ್ರಿಲ್ ನಿಂದ ಆರಂಭವಾದಂತೆ ಆರು ವರ್ಷದ ಸರಾಸರಿ ಕನಿಷ್ಠ ಮಟ್ಟದ 20.6 ಕಿಲೋ ಗ್ರಾಮ್ ಮುಟ್ಟಿದೆ.
ಚಿನ್ನದ ಕಳ್ಳ ಸಾಗಣೆ ಮಾಡುವವರಿಗೆ ದಾಖಲೆಯ ಎತ್ತರದ ಬೆಲೆಯಿಂದ ದೊಡ್ಡ ಲಾಭವಾಗುತ್ತಿದೆ. ಭಾರತದಲ್ಲಿ 12.5 ಪರ್ಸೆಂಟ್ ಆಮದು ಸುಂಕ ಹಾಗೂ 3% ಜಿಎಸ್ ಟಿ ಮತ್ತಿತರ ಸ್ಥಳೀಯ ತೆರಿಗೆ ಬೀಳುತ್ತದೆ. ಆದ್ದರಿಂದ ಕಾನೂನು ಬಾಹಿರ ಖರೀದಿ ಅಗ್ಗವಾಗುತ್ತದೆ. ಆದ್ದರಿಂದ ಆಮದು ತೆರಿಗೆಯನ್ನು ಕನಿಷ್ಠ ಐವತ್ತು ಪರ್ಸೆಂಟ್ ಇಳಿಸುವಂತೆ ವರ್ತಕರು ಮನವಿ ಮಾಡುತ್ತಿದ್ದಾರೆ.
ಒಂದು ಸಲಕ್ಕೆ ವಿಮಾನ ಹಾರಾಟ ಮತ್ತೆ ಆರಂಭವಾದಲ್ಲಿ ಚಿನ್ನದ ಕಳ್ಳ ಸಾಗಣೆ ಹೆಚ್ಚಾಗುವ ಸಾಧ್ಯತೆ ಇದೆ. ಚಿನ್ನದ ಮೇಲೆ ಆಮದು ಸುಂಕವನ್ನು ತೆಗೆಯಲು ಶ್ರೀಲಂಕಾ ನಿರ್ಧರಿಸಿರುವುದರಿಂದ ಕಳ್ಳಸಾಗಣೆ ಹೆಚ್ಚಾಗಬಹುದು ಎಂದು ಪದ್ಮನಾಭನ್ ಅಭಿಪ್ರಾಯ ಪಡುತ್ತಾರೆ.
ಶ್ರೀಲಂಕಾದಿಂದ ಭಾರತದ ದಕ್ಷಿಣಕ್ಕೆ ಬರುವುದು ನಲವತ್ತೈದು ನಿಮಿಷದ ಪ್ರಯಾಣ. ಅವರೆಲ್ಲ ಶೀಘ್ರವಾಗಿ ಕಾರ್ಯಾಚರಣೆ ಆರಂಭಿಸುತ್ತಾರೆ ಎನ್ನುತ್ತಾರೆ ಪದ್ಮನಾಭನ್.