ನೋಟ್ ಬ್ಯಾನ್ ಯಾಕಾಯ್ತು? ಕೊನೆಗೂ ಬಂತು ಅಧಿಕೃತ ಉತ್ತರ; ಸರ್ಕಾರ ಹೇಳಿದ್ದೇನು?
ನವದೆಹಲಿ, ನ. 17: ಬಹಳ ವಿವಾದಕ್ಕೆ ಒಳಗಾಗಿದ್ದ ಮತ್ತು ಬಹಳಷ್ಟು ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದ ನೋಟು ಅಪನಗದೀಕರಣ (Note demonetisation) ಪ್ರಕ್ರಿಯೆ ಆಗಿ 6 ವರ್ಷ ಗತಿಸಿವೆ. ಸರ್ಕಾರದ ಈ ವಿವಾದಿತ ನಿರ್ಧಾರಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಈಗ ಅಧಿಕೃತ ಉತ್ತರ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಹಣಕಾಸು ಸಚಿವಾಲಯ ತನ್ನ ನಿರ್ಧಾರಕ್ಕೆ ಕಾರಣ ಏನೆಂದು ನಿನ್ನೆ ಬುಧವಾರ ತಿಳಿಸಿದೆ.
ಕೇಂದ್ರ ಸರ್ಕಾರದ ಪರಿವರ್ತನೀಯ ಆರ್ಥಿಕ ನೀತಿಯ (Transformational economic policy) ಸರಣಿ ಕ್ರಮಗಳ ಒಂದು ಭಾಗವಾಗಿ 2016ರ ನವೆಂಬರ್ನಲ್ಲಿ ಡೀಮಾನಿಟೈಸೇಶನ್ ಕ್ರಮ ತೆಗೆದುಕೊಳ್ಳಲಾಯಿತು. ನೋಟು ಅಪನಗದೀಕರಣದ ಪರಿಣಾಮವಾಗಿ ದೇಶದಲ್ಲಿ ನಕಲಿ ಕರೆನ್ಸಿ ಕಡಿಮೆ ಆಯಿತು, ಡಿಜಿಟಲ್ ವಹಿವಾಟು ಊಹಿಸಲೂ ಅಸಾಧ್ಯವಾದಷ್ಟು ಹೆಚ್ಚಾಯಿತು. ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಯಿತು ಎಂದು ಸರ್ಕಾರ ಸುಪ್ರೀಮ್ ಕೋರ್ಟ್ಗೆ ವಿವರ ನೀಡಿದೆ.
ಒಡೆದುಹೋಗುತ್ತಿದೆ ಹಿಂದೂಜಾ ಸಾಮ್ರಾಜ್ಯ; ಈ ತಿಂಗಳೊಳಗೆ ಆಗಬೇಕು ಆಸ್ತಿ ಹಂಚಿಕೆ
ನೋಟ್ ಬ್ಯಾನ್
2016 ನವೆಂಬರ್ 8ರಂದು ರಾತ್ರೋರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ಕ್ರಮ ಪ್ರಕಟಿಸಿದ್ದರು. ಆಗ ಅತಿಹೆಚ್ಚು ಚಲಾವಣೆಯಲ್ಲಿದ್ದ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳು ಅಮಾನ್ಯವೆಂದು ಘೋಷಿಸಲಾಯಿತು. ಈ ನೋಟುಗಳನ್ನು ಹೊಂದಿದ್ದವರು ಅದನ್ನು ಬ್ಯಾಂಕಿಗೆ ಮರಳಿಸಬೇಕೆಂದು ಸೂಚಿಸಲಾಯಿತು. ಬ್ಯಾಂಕ್ನಿಂದ ಹಣ ವಿತ್ಡ್ರಾ ಮಾಡಲು ಮಿತಿ ಹಾಕಲಾಯಿತು. ಹಲವು ದಿನಗಳ ಕಾಲ ಜನರಿಗೆ ಹಣ ಸಿಗದೇ ಪರದಾಡಿದ್ದು ಹೌದು.
ಆದರೆ, ದೇಶದ ಒಳಿತಿಗಾಗಿ ಕೆಲ ಕಹಿ ಗುಳಿಗೆಗಳನ್ನು ಪಡೆಯಬೇಕಾಗುತ್ತದೆ ಎಂಬುದು ಸರ್ಕಾರದ ನಿಲುವಾಗಿತ್ತು. ಕಪ್ಪು ಹಣ ಹೊರತೆಗೆಯಲು ನೋಟ್ ಬ್ಯಾನ್ ಮಾಡಬೇಕಾಯಿತು ಎಂದು ಆಡಳಿತ ಪಕ್ಷದ ನಾಯಕರುಗಳು ಕಾರಣಗಳನ್ನು ಕೊಟ್ಟಿದ್ದರು.. ಆದರೆ ಕಾಕತಾಳೀಯವೋ ಅಥವಾ ನೋಟ್ ಬ್ಯಾನ್ ಪರಿಣಾಮವೋ, 2016ರಿಂದ ಭಾರತದ ಆರ್ಥಿಕ ಬೆಳವಣಿಗೆ ಮಂದಗೊಂಡಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಸರ್ಕಾರದ ಸಮರ್ಥನೆ ಏನು?
ನೋಟು ಅಮಾನ್ಯೀಕರಣ ಕ್ರಮವು ದೇಶದ ಆರ್ಥಿಕತೆಗೆ ಶಿಷ್ಟಾಚಾರ ತರುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿತ್ತು. ಆರ್ಥಿಕತೆಯ ಪರಿಧಿಯ ಹೊರಗುಳಿದಿದ್ದ ಲಕ್ಷಾಂತರ ಜನರಿಗೆ ಅವಕಾಶಗಳನ್ನು ನಿರ್ಮಿಸುವ ಉದ್ದೇಶ ಇತ್ತು. ನಗದು ಆಧಾರಿತ ಅನೌಪಚಾರಿಕ ಆರ್ಥಿಕತೆಯನ್ನು ವಿಧ್ಯುಕ್ತ ಆರ್ಥಿಕತೆಯ ಪರಿಧಿಗೆ ತರಬೇಕಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
2016ರಲ್ಲಿ ಡೀಮಾನಿಟೈಸೇಶನ್ಗೆ ಐದು ವರ್ಷ ಮುಂಚೆ ಇದ್ದ ಸ್ಥಿತಿಯನ್ನು ಉಲ್ಲೇಖಿಸಿರುವ ಸರ್ಕಾರ, ಈ ಐದು ವರ್ಷದಲ್ಲಿ 500 ರೂ ಮತ್ತು 1 ಸಾವಿರ ರೂ ಮುಖಬೆಲೆಯ ನೋಟುಗಳು ತೀವ್ರವಾಗಿ ಹೆಚ್ಚಾಗಿದ್ದವು. ಈ ಅವಧಿಯಲ್ಲಿ 500 ರೂ ಮುಖಬೆಲೆಯ ನೋಟು ಶೇ. 76.4ರಷ್ಟು ಹೆಚ್ಚಾಗಿದೆ. 1000 ರೂ ಮುಖಬೆಲೆಯ ನೋಟುಗಳ ಸಂಖ್ಯೆ ಶೇ. 100ಕ್ಕಿಂತ ಹೆಚ್ಚಾಗಿತ್ತು. ಕಪ್ಪು ಹಣ, ನಕಲಿ ಹಣ ಎಲ್ಲವೂ ಸೃಷ್ಟಿಯಾಗಿತ್ತು. ಅದನ್ನು ನಿಯಂತ್ರಿಸಲು 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಬೇಕಾಯಿತು ಎಂದು ಸರ್ಕಾರ ವಾದಿಸಿದೆ.
ಡಿಜಿಟಲ್ ಪರಿವರ್ತನೆ
ಅಪನಗದೀಕರಣ ಕ್ರಮದಿಂದ ಆರ್ಥಿಕತೆಗೆ ಹಿನ್ನಡೆಯಾಗಿತ್ತು ಎಂಬ ವಾದವನ್ನು ಈ ಸಂದರ್ಭದಲ್ಲಿ ಸರ್ಕಾರ ತಳ್ಳಿಹಾಕಿದೆ. 2016-17ರ ಹಣಕಾಸು ವರ್ಷದಲ್ಲಿ ನೈಜ ಬೆಳವಣಿಗೆ ದರ ಶೇ. 8.2 ಇತ್ತು. 2017-18ರಲ್ಲಿ ಶೇ. 6.8 ಇತ್ತು. ಕೋವಿಡ್ ಮುಂಚಿನ ದಶಕದ ಆರ್ಥಿಕ ಬೆಳವಣಿಗೆಯ ಶೇ. 6.6ರ ದರಕ್ಕಿಂತ ಆ ಎರಡು ವರ್ಷ ಹೆಚ್ಚು ಬೆಳವಣಿಗೆ ಆಗಿತ್ತು ಎಂದು ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠಕ್ಕೆ ನಿನ್ನೆ ಸರ್ಕಾರ ಕೊಟ್ಟಿರುವ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಇನ್ನು, ನೋಟ್ ಬ್ಯಾನ್ ನಂತರ ದೇಶದಲ್ಲಿ ಡಿಜಿಟಲ್ ಪರಿವರ್ತನೆ ಸುಗಮವಾಯಿತು ಎಂದು ಸರ್ಕಾರ ಹೇಳಿದೆ. 2016ರ ಇಡೀ ವರ್ಷದಲ್ಲಿ 6,952 ಕೋಟಿ ರೂ ಮೌಲ್ಯದ 1.09 ಲಕ್ಷ ಡಿಜಿಟಲ್ ಪೇಮೆಂಟ್ ಟ್ರಾನ್ಸಾಕ್ಷನ್ ನಡೆದಿತ್ತು. ಅದೇ 2022ರ ಅಕ್ಟೋಬರ್ ತಿಂಗಳೊಂದರಲ್ಲೇ 12 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 730 ಕೋಟಿ ಡಿಜಿಟಲ್ ವಹಿವಾಟು ನಡೆದಿದೆ ಎಂದು ಸರ್ಕಾರ ಅಂಕಿ ಅಂಶ ಮುಂದಿಟ್ಟಿದೆ.