Budget 2023: ಕೃಷಿ ಉತ್ಪನ್ನಗಳ ರಫ್ತಿಗೆ ನಿಷೇಧ ಬೇಡ; ಕಾರ್ಬನ್ ಕ್ರೆಡಿಟ್ ಮಾರಲು ಬಿಡಿ: ರೈತರ ಒತ್ತಾಯ
ನವದೆಹಲಿ, ನ. 23: ಗೋಧಿ ಇತ್ಯಾದಿ ಕೃಷಿ ಉತ್ಪನ್ನಗಳ ರಫ್ತಿಗೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್ಪಿ) ಕಡಿಮೆ ಬೆಲೆಗೆ ಬರುವ ಕೃಷಿ ಉತ್ಪನ್ನಗಳ ಆಮದಿಗೆ ನಿರ್ಬಂಧ ಹೇರಬೇಕು ಎಂದು ರೈತರ ಸಂಘಟನೆಗಳು ಸಲಹೆ ನೀಡಿವೆ. ಮುಂಬರುವ ಬಜೆಟ್ಗೆ ಮುಂಚೆ ಕೇಂದ್ರ ಸಚಿವಾಲಯದೊಂದಿಗೆ ಸಮಾಲೋಚನೆಯಲ್ಲಿ ಪಾಲ್ಗೊಂಡ ರೈತ ಸಂಘಟನೆಗಳು, ಸ್ಥಳೀಯ ಎಣ್ಣೆಬೀಜಗಳ ಉತ್ಪಾದನೆ ಹೆಚ್ಚಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿವೆ.
ತಾಳೆ (ಪಾಮ್ ಆಯಿಲ್) ಬದಲು ಸರ್ಕಾರ ಸೋಯಾಬೀನ್, ಸಾಸಿವೆ, ಕಡಲೆಕಾಯಿ ಇತ್ಯಾದಿ ದೇಶೀಯವಾಗಿ ಬೆಳೆಯಲಾಗುವ ಎಣ್ಣೆಬೀಜಗಳ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಸಂಸ್ಕರಿತ ಆಹಾರ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಬೇಕು ಎಂದೂ ರೈತ ಸಂಘಟನೆಗಳು ಸಲಹೆ ನೀಡಿವೆ.
ಭಾರತದ ಆರ್ಥಿಕ ಪ್ರಗತಿ; ಅದಾನಿಗಿಂತಲೂ ಅಂಬಾನಿಗೆ ಹೆಚ್ಚು ವಿಶ್ವಾಸ
ಫೆಬ್ರುವರಿ 1ರಂದು ನಡೆಯಲಿರುವ ಬಜೆಟ್ಗೆ ಪೂರ್ವಭಾವಿಯಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ವಿವಿಧ ಉದ್ದಿಮೆ ಮತ್ತು ಕ್ಷೇತ್ರಗಳ ಪರಿಣಿತರೊಂದಿಗೆ ಬಹು ಸುತ್ತುಗಳ ಸಮಾಲೋಚನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಕೃಷಿ ಕ್ಷೇತ್ರದ ಪರಿಣಿತರು ಮತ್ತು ಕೃಷಿ ಸಂಸ್ಕರಣೆ ಉದ್ಯಮದ ಪ್ರತಿನಿಧಿಗಳ ಜೊತೆ ನಿನ್ನೆ ಮಂಗಳವಾರ ನಿರ್ಮಲಾ ಸೀತಾರಾಮನ್ ಆನ್ಲೈನ್ ಮೂಲಕ ಸಮಾಲೋಚನೆ ನಡೆಸಿದರು.
ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಆಮದಾಗುವ ಉತ್ಪನ್ನಗಳಿಗೆ ಅವಕಾಶ ಕೊಡಬಾರದು ಎಂದು ಭಾರತ್ ಕೃಷಿಕ್ ಸಮಾಜ್ ಸಂಘಟನೆಯ ಛೇರ್ಮನ್ ಅಜಯ್ ವೀರ್ ಜಾಖರ್ ಒತ್ತಾಯ ಮಾಡಿದ್ದಾರೆ.
ರಫ್ತಿನಿಂದ ಲಾಭ
ಇನ್ನು, ನಿರ್ಮಲಾ ಸೀತಾರಾಮನ್ ಜೊತೆಗಿನ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ರೈತರ ಸಂಘಟನೆಯ ಒಕ್ಕೂಟ (ಸಿಐಎಫ್ಎ) ಅಧ್ಯಕ್ಷ ರಘುನಾಥ್ ದಾದಾ ಪಾಟೀಲ್ ಮಾತನಾಡಿ, "ಗೋದಿ, ಅಕ್ಕಿಯಂತಹ ಕೃಷಿ ಉತ್ಪನ್ನಗಳ ರಫ್ತಿಗೆ ನಿಷೇಧ ಹೇರಿರುವುದರಿಂದ ರೈತರ ಆದಾಯ ಸಾಧ್ಯತೆಗೆ ಧಕ್ಕೆಯಾಗಿದೆ. ರಫ್ತುಗಳಿಂದ ಫೋರೆಕ್ಸ್ ಮಾರುಕಟ್ಟೆಯಲ್ಲಿ ವಿದೇಶೀ ಕರೆನ್ಸಿ ಪಡೆಯಲೂ ಸಹಾಯವಾಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ಧಾರೆ
ಎಣ್ಣೆ ಆಮದು ಮೇಲೆ ಭಾರತ ಅವಲಂಬಿತವಾಗುವುದನ್ನು ತಪ್ಪಿಸಲು ಸರ್ಕಾರ ಸೋಯಾಬೀನ್, ಸೂರ್ಯಕಾಂತಿ, ಕಡಲೆಕಾಯಿ ಉತ್ಪಾದನೆ ಹೆಚ್ಚಿಸುವತ್ತ ಕ್ರಮ ವಹಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.
ಹಣದುಬ್ಬರ ಏರಲು ಆಹಾರವಸ್ತುಗಳ ಬೆಲೆ ಏರಿಕೆ ಪ್ರಮುಖ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೃಷಿ ಉತ್ಪನ್ನಗಳ ಕೊರತೆ ಹೆಚ್ಚಾಗಿ ಅವುಗಳ ಬೆಲೆ ಹೆಚ್ಚಾಗದಂತೆ ನಿಯಂತ್ರಿಸಲು ಸರ್ಕಾರ ಗೋಧಿ ಮೊದಲಾದ ಆಹಾರವಸ್ತುಗಳ ರಫ್ತಿಗೆ ನಿರ್ಬಂಧ ಹಾಕಿತ್ತು.
ಕಾರ್ಬನ್ ಕ್ರೆಡಿಟ್ ಮಾರಲು ಅನುಮತಿ
ಇದೇ ವೇಳೆ, ಕೃಷಿ ಜಮೀನಿನಲ್ಲಿ ಸಂಗ್ರಹಿಸಿದ ಕಾರ್ಬನ್ ಕ್ರೆಡಿಟ್ ಅನ್ನು ಜಾಗತಿಕವಾಗಿ ಮಾರಾಟ ಮಾಡಲು ರೈತರಿಗೆ ಅನುಮತಿಸಬೇಕು. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಕ್ಕಲು ಸಾಧ್ಯವಾಗುತ್ತದೆ ಎಂದು ಭಾರತ್ ಕೃಷಕ್ ಸಮಾಜ್ ಅಧ್ಯಕ್ಷ ಅಜಯ್ ವೀರ್ ಜಾಖರ್ ಸಲಹೆ ನೀಡಿದ್ದಾರೆ.
ಹಾಗೆಯೇ, ಕೃಷಿ ವಲಯದಲ್ಲಿ ಇನ್ಫ್ರಾಸ್ಟ್ರಕ್ಚರ್ಗಿಂತ ಮಾನವ ಸಂಪನ್ಮೂಲ ಅಭಿವೃದ್ಧಿಯತ್ತ ಸರ್ಕಾರ ಗಮನ ಕೊಡಬೇಕು ಎಂದೂ ಜಾಖರ್ ಒತ್ತಾಯಿಸಿದ್ದಾರೆ.
ಏನಿದು ಕಾರ್ಬನ್ ಕ್ರೆಡಿಟ್?
ಭೂಮಿಗೆ ಅಪಾಯವಾಗುವ ಗ್ರೀನ್ ಹೌಸ್ ಗ್ಯಾಸ್ಗಳಲ್ಲಿ ಕಾರ್ಬನ್ ಡೈ ಆಕ್ಸೈಸ್ ಅನಿಲವೂ ಒಂದು. ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಅನ್ನು ಇಂಗಿಸುವ ತಂತ್ರಜ್ಞಾನ ಲಭ್ಯ ಉಂಟು. ಇದನ್ನೆ ಕೃಷಿ ಭೂಮಿಯಲ್ಲಿ ಅಳವಡಿಸಬಹುದು. ನಿರ್ದಿಷ್ಟ ಪ್ರಮಾಣದ ಇಂಗಾಲ ಡೈ ಆಕ್ಸೈಡ್ ಅನಿಲವನ್ನು ಇಂಗಿಸಿದರೆ ಇಂತಿಷ್ಟು ಕಾರ್ಬನ್ ಕ್ರೆಡಿಟ್ ಎಂದು ಗಣನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿಯಲ್ಲಿ 2-4 ಕಾರ್ಬನ್ ಕ್ರೆಡಿಟ್ ಪಡೆಯಲು ಸಾಧ್ಯ ಎನ್ನುತ್ತಾರೆ ಪರಿಣಿತರು. ಸರ್ಕಾರ ಒಂದು ಕಾರ್ಬನ್ ಕ್ರೆಡಿಟ್ಗೆ ಸುಮಾರು 700 ರೂಪಾಯಿಗೂ ಹೆಚ್ಚು ಹಣ ಕೊಡುತ್ತದೆ.
ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆಯ ಶೃಂಗದಲ್ಲಿ ಕಾರ್ಬನ್ ಕ್ರೆಡಿಟ್ ಅಳವಡಿಸುವಂತೆ ಎಲ್ಲಾ ದೇಶಗಳಿಗೂ ಸೂಚಿಸಲಾಗಿದೆ. ಹೀಗಾಗಿ, ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡುವ ಕಾರ್ಯದಲ್ಲಿ ಜನತೆಯನ್ನು ಉತ್ತೇಜಿಸಲು ಸರ್ಕಾರಗಳು ಆಂತರಿಕವಾಗಿ ಕಾರ್ಬನ್ ಕ್ರೆಡಿಟ್ ಅನ್ನು ಖರೀದಿಸುತ್ತವೆ. ವಿವಿಧ ಸಂಸ್ಥೆಗಳೂ ಇದನ್ನು ಖರೀದಿಸುತ್ತವೆ. ಅಮೇಜಾನ್, ಮೈಕ್ರೋಸಾಫ್ಟ್ ಮುಂತಾದ ದೊಡ್ಡ ದೊಡ್ಡ ಸಂಸ್ಥೆಗಳು ತಮ್ಮಿಂದ ಆಗುವ ಮಾಲಿನ್ಯಕ್ಕೆ ಪರ್ಯಾಯವಾಗಿ ಕಾರ್ಬನ್ ಕ್ರೆಡಿಟ್ ಖರೀದಿಸುತ್ತವೆ. ಒಟ್ಟಾರೆ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುವುದು ಜಾಗತಿಕ ಗುರಿ.
ಇದೇ ವೇಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023ರ ಫೆಬ್ರುವರಿ 1ರಂದು ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಇದು ಈ ಬಾರಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಿರುತ್ತದೆ. 2024ರಲ್ಲಿ ಚುನಾವಣೆ ಇರುವುದರಿಂದ ಆ ವರ್ಷ ಬಜೆಟ್ ಬದಲು ವೋಟ್ ಆಫ್ ಅಕೌಂಟ್ ಇರುತ್ತದೆ.