ದೇಶದ ಜನತೆಗೆ ಶಾಕ್ ಕೊಟ್ಟ ಕೇಂದ್ರ ಹಣಕಾಸು ಸಚಿವಾಲಯ
ನವದೆಹಲಿ, ಜೂನ್ 5: ಕೊರೊನಾವೈರಸ್ ಹಾವಳಿಯಿಂದ ದೇಶದ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಗರ ಬಡಿದಂತಾಗಿದೆ. ಇದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆತ್ಮಾ ನಿರ್ಭರ್ ಪ್ಯಾಕೇಜ್ ಅಡಿ 21 ಲಕ್ಷ ಕೋಟಿ ರುಪಾಯಿ ಘೋಷಣೆ ಮಾಡಿದೆ.
ಆದರೆ, ಈ ಪ್ಯಾಕೇಜ್ ವಾಸ್ತವವಾಗಿ ಕೊರೊನಾವೈರಸ್ ಲಾಕ್ಡೌನ್ ನಂತರದ ದುಸ್ಥಿತಿ ಸುಧಾರಿಸುವಲ್ಲಿ ಕೆಲಸ ಮಾಡದು ಎಂದು ಕೆಲ ಆರ್ಥಿಕ ತಜ್ಞರು ಆರೋಪಿಸುತ್ತಿದ್ದಾರೆ. ಇನ್ನೂ ಹಣಕಾಸಿನ ಘೋಷಣೆಗಳು ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ.
ಕೊರೊನಾವೈರಸ್ ಲಾಕ್ಡೌನ್: ಮುಜರಾಯಿ ಇಲಾಖೆಯ ಆದಾಯಕ್ಕೆ ದೊಡ್ಡ ಹೊಡೆತ
ಆದರೆ, ಶುಕ್ರವಾರ ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ ಹೇಳಿಕೆ ದೀಗಿಲು ಹುಟ್ಟಿಸುವಂತಿದೆ. ಕೊರೊನಾ ತಡೆಗಟ್ಟಲು ಕಳೆದ 70 ದಿನ ಲಾಕ್ಡೌನ್ ಘೋಷಣೆ ಮಾಡಿದ್ದರೂ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಪರಿಸ್ಥಿತಿ ಹೀಗಿದ್ದರೂ 2020-21 ನೇ ಆರ್ಥಿಕ ವರ್ಷದಲ್ಲಿ ಉಳಿದ ದಿನಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
ಮಂಜೂರಾದ ಹಣವನ್ನು ಬಳಸಲು ಗಮನ
ಆತ್ಮ ನಿರ್ಭರ ಭಾರತ್ ಅಭಿಯಾನ ಮತ್ತು ಇತರ ವಿಶೇಷ ಪ್ಯಾಕೇಜ್ಗಳ ಅಡಿಯಲ್ಲಿ ಈಗಾಗಲೇ ಮಂಜೂರಾದ ಹಣವನ್ನು ಬಳಸಲು ಗಮನ ಹರಿಸಲಾಗುವುದು. ಅಲ್ಲದೇ ಯೋಜನೆಗಳನ್ನು ಘೋಷಿಸಿದವರಿಗೆ ಮಾತ್ರ ಒದಗಿಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಬಜೆಟ್ ಅಡಿಯಲ್ಲಿ ಈಗಾಗಲೇ ಅನುಮೋದಿಸಲಾದ ಯೋಜನೆಗಳು ಮಾರ್ಚ್ 31 ರವರೆಗೆ ಸ್ಥಗಿತಗೊಳ್ಳುತ್ತವೆ ಎಂದು ಅದು ಹೇಳಿದೆ.
ಹೊಸ ಯೋಜನೆಗಳು ಸ್ಟಾಪ್
ಹೊಸ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಗುವುದಿಲ್ಲ. ಈಗಾಗಲೇ ಅನುಮೋದನೆ ಪಡೆದ ಹೊಸ ಯೋಜನೆಗಳ ಪ್ರಾರಂಭವು 2021 ರ ಮಾರ್ಚ್ 31 ರವರೆಗೆ ಒಂದು ವರ್ಷದವರೆಗೆ ಸ್ಥಗಿತಗೊಳ್ಳುತ್ತದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸುತ್ತದೆ.
ಸರ್ಕಾರಗಳಿಗೆ ಆದಾಯ ನಷ್ಟ
ಕೊರೊನಾವೈರಸ್ ಲಾಕ್ಡೌನ್ ಕಾರಣದಿಂದಾಗಿ ಸರ್ಕಾರಗಳು ಆದಾಯ ನಷ್ಟ ಅನುಭವಿಸುತ್ತಿವೆ. ವಿವಿಧ ರಾಜ್ಯ ಸರ್ಕಾರಗಳು ಸಹ ಖರ್ಚನ್ನು ಸ್ಥಗಿತಗೊಳಿಸಿವೆ. ಜನರ ಕೈಯಲ್ಲಿ ಹೆಚ್ಚಿನ ಹಣವನ್ನು ನೀಡಲು ಮತ್ತು ಖರ್ಚನ್ನು ಹೆಚ್ಚಿಸಲು ರಾಜ್ಯ ಸರ್ಕಾರಗಳು ಜನರಿಗೆ ಹಲವು ಪರಿಹಾರ ಪ್ಯಾಕೇಜ್ ಘೋಷಿಸುತ್ತಿವೆ. ಆದರೆ, ಕೇಂದ್ರ ಮಾತ್ರ ಇನ್ಮುಂದೆ ಯಾವುದೇ ಹೊಸ ಪ್ಯಾಕೇಜ್ ಇರುವುದಿಲ್ಲ ಎಂದು ಹೇಳಿರುವುದು ಕೆಲವು ಕ್ಷೇತ್ರಗಳಿಗೆ ನಿರಾಸೆಯಂತೂ ತರಿಸಿದೆ
ಜಿಡಿಪಿ ಕುಸಿತದ ಚಿಂತೆ
ಮೇ 22 ರಂದು ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್, ಕೋವಿಡ್ -19 ಕಾರಣದಿಂದಾಗಿ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಕುಸಿಯಬಹುದು ಎಂದು ಹೇಳಿದ್ದರು. ಕೇವಲ ಒಂದು ತಿಂಗಳ ಹಿಂದೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಈ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಕೇಲವ 1.9% ಎಂದು ಹೇಳಿತ್ತು. ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆಯಂತೂ ಆರ್ಥಿಕ ಪ್ರಗತಿ ಬಗ್ಗೆ ಮತ್ತಷ್ಟು ಚಿಂತೆ ಮಾಡುವಂತೆ ಮಾಡಿದೆ.