ಬೆಂಗಳೂರು, ಜೂನ್ 6: ಕೊರೊನಾವೈರಸ್ ಲಾಕ್ಡೌನ್ ಪರಿಣಾಮವಾಗಿ ಕರ್ನಾಟಕ ಸರ್ಕಾರ ಕೂಡ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಆರ್ಥಿಕ ಮಿತವ್ಯಯ ಸಾಧಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೆಣಗಾಡುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಿಲ್ಲ ಎಂದು ಈಗಾಗಲೇ ಬಿ ಎಸ್ ಯಡಿಯೂರಪ್ಪ ಕೂಡ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೆಲ ಇಲಾಖೆಗಳನ್ನು ವಿಲೀನ ಮಾಡಿ ಆರ್ಥಿಕ ಹಿಡಿತ ಸಾಧಿಸಬಹುದು ಎಂದು ಕೆಲವರು ಸಿಎಂ ಗೆ ಸಲಹೆ ನೀಡಿದ್ದಾರೆ.
ಆರ್ಥಿಕ ತಜ್ಞರು, ಹಿರಿಯ ಅಧಿಕಾರಿಗಳು ಇಂತಹದೊಂದು ಐಡಿಯಾವನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಯಾವ ಯಾವ ಇಲಾಖೆಗಳ ವಿಲೀನ?
ಆರ್ಥಿಕ ತಜ್ಞರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಸಲಹೆ ಮೇರೆಗೆ ಇಲಾಖೆಗಳನ್ನು ವಿಲೀನ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸದ್ಯ ಸಚಿವ ಸಿಟಿ ಅವರೇ ಚಾಲನೇ ನೀಡಿದ ಹಾಗೇ ಕಾಣುತ್ತದೆ. ಅವರು, ಕನ್ನಡ ಮತ್ತು ಸಂಸ್ಕೃತಿ, ಕ್ರಿಡಾ, ಪ್ರವಾಸೋದ್ಯಮ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳನ್ನು ಒಂದೇ ಸಚಿವಾಲಯದಡಿ ವಿಲೀನ ಮಾಡುವಂತೆ ಮನವಿ ಸಲ್ಲಿಸಿದ್ದಾರ
ಕಂದಾಯ ಸಚಿವರ ಭೇಟಿ
ಶುಕ್ರವಾರ ಸಿಟಿ ರವಿ ಅವರು ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಅವರು, ಆರ್ಥಿಕ ಮಿತವ್ಯಯಕ್ಕೆ ಈ ಕೆಲಸ ಮಾಡಲೇಬೇಕಾಗಿದೆ ಎಂದು ಅಶೋಕ್ ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.
ವಿಲೀನಕ್ಕೆ ಸಮಿತಿ ರಚನೆ
ಇಲಾಖೆಗಳನ್ನು ವಿಲೀನ ಮಾಡುವ ಸಂಬಂಧ ತಜ್ಞರ ವರದಿ ಅನುಸಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಂದಾಯ ಸಚಿವ ಆರ್ ಅಶೋಕ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದೆ. ಯಾವ ಯಾವ ನಿರ್ದೇಶನಾಲಯಗಳನ್ನು ಯಾವ ಯಾವ ಸಚಿವಾಲಯದಡಿ ತರಬೇಕು ಎಂಬುದನ್ನು ಸಮಿತಿ ನಿರ್ಧಾರ ಮಾಡಲಿದೆ.
ಬೊಕ್ಕಸ ಖಾಲಿಯಾಗಿದೆ
ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಕೋವಿಡ್ 19 ರಿಂದ ಸಂಭವಿಸಿರುವ ಆರ್ಥಿಕ ಬಿಕ್ಕಟ್ಟು ಸರ್ಕಾರವನ್ನು ಕಂಗಾಲುಗೊಳಿಸಿದೆ. ಲಾಕ್ಡೌನ್ ನಿಂದ ತೊಂದರೆಗೊಳಗಾದವರಿಗೆ ಪರಿಹಾರವಾಗಿ ಈಗಾಗಲೇ 2100 ಕೋಟಿ ರುಪಾಯಿಯನ್ನು ಸಿಎಂ ಯಡಿಯೂರಪ್ಪ ವಿವಿಧ ಯೋಜನೆಗಳಿಗೆ ಘೋಷಣೆ ಮಾಡಿದ್ದಾರೆ. ಇನ್ಮುಂದೆ ಯಾವುದೇ ಹೊಸ ಘೋಷಣೆಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.


Click it and Unblock the Notifications