ಭಾರತದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು : ಪಿ. ಚಿದಂಬರಂ
2019-20ರ 2ನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಜಿಡಿಪಿ 4.5 ಪರ್ಸೆಂಟ್ಗೆ ಕುಸಿದ ಬಳಿಕ ಕೇಂದ್ರ ಸರ್ಕಾರ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಇದರ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಬಿಜೆಪಿ ವಿರುದ್ಧ ಗದಾ ಪ್ರಹಾರ ನಡೆಸಿದ್ದು, ಭಾರತದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
2ನೇ ತ್ರೈಮಾಸಿಕದಲ್ಲಿ ಜಿಡಿಪಿ ಮತ್ತೂ ಪಾತಾಳಕ್ಕೆ: 4.5 ಪರ್ಸೆಂಟ್ಗೆ ಇಳಿಕೆ
ಭವಿಷ್ಯದಲ್ಲಿ ಆರ್ಥಿಕ ಸೂಚಕವಾಗಿ ಜಿಡಿಪಿಯನ್ನು ಪರಿಗಣಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ಹೇಳಿದ ಬೆನ್ನಲ್ಲೇ, ಪಿ.ಚಿದಂಬರಂ ಬಿಜೆಪಿ ಆರ್ಥಿಕ ನೀತಿಗಳ ಸುಧಾರಣೆಯ ಕ್ರಮಗಳನ್ನು ಟೀಕಿಸಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಚಿದಂಬರಂ, ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸಲು ಬಿಜೆಪಿಯ ಸುಧಾರಣೆಗಳನ್ನು ಟೀಕಿಸಿದ್ದು, ಭಾರತದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ.
ಚಿದಂಬರಂ ಅಷ್ಟೇ ಅಲ್ಲದೆ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಕೂಡ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿಕೆಯನ್ನು ಟೀಕಿಸಿದ್ದು, ನವಭಾರತದ ಇಂತ ಅನನುಭವಿ ಅರ್ಥಶಾಸ್ತ್ರಜ್ಞರಿಂದ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.