ಇನ್ನೆರಡು ತಿಂಗಳಿಗೆ ಹುದ್ದೆಯಿಂದ ನಿರ್ಗಮಿಸಲಿರುವ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕ ಆದಿತ್ಯ ಪುರಿ ಅವರು ಈಚೆಗೆ 842.87 ಕೋಟಿ ರುಪಾಯಿ ಮೌಲ್ಯದ ತಮ್ಮ ಪಾಲಿನ ಷೇರನ್ನು ಮಾರಾಟ ಮಾಡಿದ್ದರು. ಆ ಬಗ್ಗೆ ನಾನಾ ಮಾತುಗಳು ಕೇಳಿಬಂದಿದ್ದವು. "ಷೇರು ಮಾರಾಟಕ್ಕೂ ಬ್ಯಾಂಕ್ ಜತೆಗಿನ ನನ್ನ ಬಾಂಧವ್ಯ, ಹಣಕಾಸು ಸ್ಥಿತಿಗೂ ಏನೂ ಸಂಬಂಧ ಇಲ್ಲ" ಎಂದಿದ್ದಾರೆ ಆದಿತ್ಯ ಪುರಿ.
ಹಾಗಿದ್ದರೆ 78 ಲಕ್ಷ ಷೇರುಗಳನ್ನು ಆದಿತ್ಯ ಪುರಿ ಅವರು ಮಾರಿದ್ದೇಕೆ? ಉತ್ತರ ಬಹಳ ಸಿಂಪಲ್ ಆಗಿದೆ. "ನನ್ನ ನಿವೃತ್ತಿ ಜೀವನಕ್ಕೆ ಹಣ ಬೇಕಿದೆ. ಅದಕ್ಕೋಸ್ಕರ ಷೇರು ಮಾರಿದ್ದೇನೆ" ಎಂದು CNBC- TV18ಗೆ ತಣ್ಣಗೆ ಉತ್ತರ ನೀಡಿದ್ದಾರೆ ಪುರಿ. ಜುಲೈ 21ರಿಂದ 23ರ ಮಧ್ಯೆ 0.14 ಪರ್ಸೆಂಟ್ ನಷ್ಟು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳನ್ನು ಮಾರಿದ್ದಾರೆ. ಸದ್ಯಕ್ಕೆ ಪುರಿ ಬಳಿ ಬ್ಯಾಂಕ್ ನ 0.01 ಪರ್ಸೆಂಟ್ ನಷ್ಟು, ಅಂದರೆ 3.76 ಲಕ್ಷ ಷೇರುಗಳು ಮಾತ್ರ ಇವೆ.
ಶಶಿಧರ್ ಜಗದೀಶನ್ ನೇಮಕಕ್ಕೆ ಆರ್ ಬಿಐ ಒಪ್ಪಿಗೆ
ಇನ್ನು ಆದಿತ್ಯ ಪುರಿ ಸ್ಥಾನಕ್ಕೆ ಶಶಧರ್ ಜಗದೀಶನ್ ರನ್ನು ನೇಮಕ ಮಾಡುವುದಕ್ಕೆ ಸೋಮವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. ಸದ್ಯಕ್ಕೆ ಜಗದೀಶನ್ ಅವರು ಬ್ಯಾಂಕ್ ನಲ್ಲಿ ಮಾನವ ಸಂಪನ್ಮೂಲ ಹಾಗೂ ಹಣಕಾಸು ವಿಭಾಗದ ಮುಖ್ಯಸ್ಥರು ಮತ್ತು ಹೆಚ್ಚುವರಿ ನಿರ್ದೇಶಕರಾಗಿದ್ದಾರೆ.
ಇನ್ನು ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಬ್ಯಾಂಕ್ ಗೆ ಇದೆ
ಶಶಿಧರ್ ಜಗದೀಶನ್ ಆಯ್ಕೆ ಮಾಡಿರುವುದು ಬಹಳ ಸಂತೋಷ ತಂದಿದೆ. ಬ್ಯಾಂಕ್ ಮುನ್ನಡೆಸಲು ಅಗತ್ಯ ಇರುವ ಕೌಶಲ ಅವರಲ್ಲಿದೆ. ಕಾರ್ಯಗಳನ್ನು ತುಂಬ ಚೆನ್ನಾಗಿ ಅನುಷ್ಠಾನ ತರಬಲ್ಲ ಸಾಮರ್ಥ್ಯ ಅವರಲ್ಲಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಗೆ ಇನ್ನೂ ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಇದೆ ಎಂದು ಆದಿತ್ಯ ಪುರಿ ಹೇಳಿದ್ದಾರೆ.
ಎಚ್ ಡಿಎಫ್ ಸಿ ಬ್ಯಾಂಕ್ ಗೆ ಮೂರು ಆದ್ಯತೆ
"ಬ್ಯಾಂಕ್ ಗೆ ಮೂರು ಆದ್ಯತೆಗಳಿವೆ. ಡಿಜಿಟಲೈಸ್ ಮಾಡುವುದು, ದೇಶದಾದ್ಯಂತ ಸೇವೆ ವಿಸ್ತರಿಸುವುದು, ಅರೆ ಪಟ್ಟಣ ಮತ್ತು ಗ್ರಾಮೀಣ ಭಾರತದಲ್ಲಿ ಬ್ಯಾಂಕ್ ವಿಸ್ತರಣೆಗೆ ಜನರಿಗೆ ತರಬೇತಿ ನೀಡುವುದು ಮತ್ತು ನಾನಾ ಬಗೆ ಉತ್ಪನ್ನಗಳನ್ನು ಪರಿಚಯಿಸುವುದು" ಎಂದು ಆದಿತ್ಯ ಪುರಿ ತಿಳಿಸಿದ್ದಾರೆ.


Click it and Unblock the Notifications