ನವದೆಹಲಿ, ನ. 24: ಮಿನರಲ್ ವಾಟರ್ ಎಂದರೆ ಬಿಸ್ಲೇರಿ ಎನ್ನುವಷ್ಟು ಜನಪ್ರಿಯತೆ ಪಡೆದುಕೊಂಡ ಈ ಬ್ರ್ಯಾಂಡ್ನ ಕಂಪನಿ ಟಾಟಾ ಸಂಸ್ಥೆಗೆ ಮಾರಾಟವಾಗುತ್ತಿದೆ. ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಸುಮಾರು 6ರಿಂದ 7 ಸಾವಿರ ರೂಪಾಯಿಗೆ ಬಿಸ್ಲೇರಿಯನ್ನು ಖರೀದಿಸುತ್ತಿರುವ ಸುದ್ದಿ ಬಂದಿದೆ. ಈಗಾಗಲೇ ಒಪ್ಪಂದ ಆಗಿದೆ. 82 ವರ್ಷದ ರಮೇಶ್ ಜೆ ಚೌಹಾಣ್ ಮಾಲೀಕತ್ವದ ಬಿಸ್ಲೇರಿ ಈಗಲೂ ಭಾರತದ ಅತಿ ದೊಡ್ಡ ಮಿನರಲ್ ವಾಟರ್ ಕಂಪನಿ ಎನಿಸಿದೆ. ಟಾಟಾಗೆ ಮಾರಾಟವಾದ ಬಳಿಕ ಎರಡು ವರ್ಷಗಳವರೆಗೂ ಬಿಸ್ಲೇರಿಯ ಈಗಿನ ಆಡಳಿತ ಮಂಡಳಿಯೇ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಯಾಕೆ ಮಾರಾಟ?
ಬಿಸ್ಲೇರಿಯ ಮಾಲೀಕ ರಮೇಶ್ ಜೆ ಚೌಹಾಣ್ ಅವರಿಗೆ 82 ವರ್ಷ ವಯಸ್ಸಾಗಿದ್ದು, ಸದ್ಯ ಅನಾರೋಗ್ಯದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಜಯಂತಿ ಎಂಬ ಮಗಳಿದ್ದು, ಅವರಿಗೆ ವ್ಯವಹಾರದಲ್ಲಿ ಆಸಕ್ತಿ ಇಲ್ಲ. ಈ ಕಾರಣಕ್ಕೆ ಕಂಪನಿಯ ನಿರ್ವಹಣೆ ಕಷ್ಟಸಾಧ್ಯವಾದ್ದರಿಂದ ಬಿಸ್ಲೇರಿಯನ್ನು ಟಾಟಾಗೆ ಮಾರಾಟ ಮಾಡುತ್ತಿದ್ದಾರೆ. ಟಾಟಾಗೆ ಮಾರುವುದರಿಂದ ಬಿಸ್ಲೇರಿ ಬ್ರ್ಯಾಂಡ್ ಮತ್ತು ಬ್ಯುಸಿನೆಸ್ ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ ಎಂಬುದು ರಮೇಶ್ ಚೌಹಾಣ್ ಅವರ ವಿಶ್ವಾಸ.
"ಟಾಟಾ ಸಂಸ್ಥೆಯ ಸಂಸ್ಕೃತಿ, ಮೌಲ್ಯ ಮತ್ತು ಪ್ರಾಮಾಣಿಕತೆಯನ್ನು ನಾನು ಇಷ್ಟಪಡುತ್ತೇನೆ. ಬಿಸ್ಲೇರಿ ಕೊಳ್ಳಲು ಬೇರೆ ಕೆಲವರು ತೀವ್ರವಾಗಿ ಪ್ರಯತ್ನಿಸಿದರೂ ಟಾಟಾಗೇ ಮಾರಲು ನಿರ್ಧರಿಸಿದೆ" ಎಂದು ರಮೇಶ್ ಚೌಹಾಣ್ ಹೇಳಿದರೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಎರಡು ವರ್ಷಗಳಿಂದಲೂ ಬಿಸ್ಲೇರಿ ಕೊಳ್ಳಲು ಟಾಟಾ ಮಾತುಕತೆ ನಡೆಸಿತ್ತು. ಆದರೆ, ಟಾಟಾ ಸನ್ಸ್ ಸಂಸ್ಥೆಯ ಛೇರ್ಮನ್ ಎನ್ ಚಂದ್ರಶೇಖರನ್ ಮತ್ತು ಟಾಟಾ ಕನ್ಸೂಮರ್ ಸಿಇಒ ಸುನೀಲ್ ಡಿಸೋಜಾ ಅವರನ್ನು ಕೆಲ ತಿಂಗಳ ಹಿಂದೆ ಭೇಟಿ ಮಾಡಿದ ಬಳಿಕ ರಮೇಶ್ ಜೆ ಚೌಹಾಣ್ ಅವರು ಟಾಟಾಗೆ ಸುಪರ್ದಿಗೆ ಬಿಸ್ಲೇರಿಯನ್ನು ಒಪ್ಪಿಸುವ ನಿರ್ಧಾರ ಮಾಡಿದ್ದಾರೆ. "ನನಗೆ ಅವರು ಇಷ್ಟವಾದರು. ಅವರು ಬಹಳ ಒಳ್ಳೆಯ ಜನ" ಎಂದು ರಮೇಶ್ ಚೌಹಾಣ್ ಹೇಳಿಕೊಂಡಿದ್ದಾರೆ.
ಹೊಸ ವ್ಯವಹಾರ ಆರಂಭಿಸುತ್ತಾರಾ?
ಬಿಸ್ಲೇರಿಯನ್ನು ಮಾರಿದ ಹಣದಲ್ಲಿ ರಮೇಶ್ ಚೌಹಾಣ್ ಹೊಸ ವ್ಯವಹಾರ ಆರಂಭಿಸುತ್ತಾರಾ ಅಥವಾ ಬೇರೊಂದು ಮಿನರಲ್ ವಾಟರ್ ಕಂಪನಿ ಕಟ್ಟುತ್ತಾರಾ ಎಂಬ ಪ್ರಶ್ನೆ ಇದೆ. ಆದರೆ, ಅನಾರೋಗ್ಯದ ಕಾರಣದಿಂದ ಮತ್ತು ಅವರ ಕುಟುಂಬದ ಇತರ ಸದಸ್ಯರಿಗೆ ವ್ಯವಹಾರದಲ್ಲಿ ಅನಾಸಕ್ತಿ ಇರುವುದರಿಂದ ರಮೇಶ್ ಚೌಹಾಣ್ ಹೊಸ ವ್ಯವಹಾರ ಆರಂಭಿಸುವುದಿಲ್ಲ ಎನ್ನಲಾಗಿದೆ. ಆದರೆ, ಅಷ್ಟು ಹಣವನ್ನು ಯಾವುದಕ್ಕೆ ವಿನಿಯೋಗಿಸುತ್ತಾರೆ?
"ಈ ಹಣದಿಂದ ನಾನೇನು ಮಾಡುತ್ತೇನೆ ಎಂಬುದು ನನಗೇ ಗೊತ್ತಿಲ್ಲ. ಬಿಸ್ಲೇರಿಗೆ ಇರುವ ಮೌಲ್ಯ ನನಗೆ ಸಿಕ್ಕಿದೆ. ನಾನು ಎಷ್ಟು ಜತನದಿಂದ ಕಂಪನಿಯನ್ನು ಉಳಿಸಿಕೊಂಡು ಬಂದಿದ್ದೆನೋ ಅಷ್ಟೇ ಉತ್ಕಟನ ಇರುವ ಮಂದಿಯ ಮಡಿಲಿಗೆ ಕಂಪನಿಯನ್ನು ಹಾಕಿದ್ದೇನೆ," ಎಂದು ಬಿಸ್ಲೇರಿ ಮಾಲೀಕ ರಮೇಶ್ ಚೌಹಾಣ್ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ಟಾಟಾ ಗ್ರೂಪ್ ಕೂಡ ತನ್ನದೇ ಪ್ಯಾಕೇಜ್ಡ್ ಮಿನರಲ್ ವಾಟರ್ ಬ್ರ್ಯಾಂಡ್ಗಳನ್ನು ಹೊಂದಿದೆ. ಹಿಮಾಲಯನ್, ಟಾಟಾ ಕಾಪರ್ ಪ್ಲಸ್ ವಾಟರ್, ಟಾಟಾ ಗ್ಲೂಕೋ ಪ್ಲಸ್ ಬ್ರ್ಯಾಂಡ್ನಲ್ಲಿ ಮಿನರಲ್ ವಾಟರ್ ಮಾರಲಾಗುತ್ತಿದೆ. ಆದರೆ, ಮಿನರಲ್ ವಾಟರ್ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲು ಟಾಟಾಗೆ ಸಾಧ್ಯವಾಗಿರಲಿಲ್ಲ. ಈಗ ಬಿಸ್ಲೇರಿ ಸಿಕ್ಕಿರುವುದು ಟಾಟಾದ ಈ ಕ್ಷೇತ್ರದಲ್ಲಿ ಅನೆಬಲ ಬಂದಂತಾಗಿದೆ.
ಸಮಾಜಮುಖಿ ಕೆಲಸಗಳಿಗೆ ಹಣ ವಿನಿಯೋಗ?
ಟಾಟಾ ಸಂಸ್ಥೆಗೆ ಮಾರಾಟ ಮಾಡಿದ ಬಳಿಕ ಬಿಸ್ಲೇರಿಯಲ್ಲಿ ರಮೇಶ್ ಚೌಹಾಣ್ ಅವರ ಪಾಲು ಬಹಳ ಕಡಿಮೆ ಇರಲಿದೆ. ಹೆಚ್ಚಿನ ಪಾಲು ಹೊಂದುವ ಅಗತ್ಯ ತನಗಿಲ್ಲ ಎಂಬುದು ಅವರ ಅನಿಸಿಕೆ.
"ನಾನು ಅಖಾಡದಲ್ಲಿಲ್ಲ ಎಂದ ಮೇಲೆ ಕಂಪನಿಯಲ್ಲಿ ಪಾಲು ಇಟ್ಟುಕೊಂಡು ಏನು ಮಾಡಲಿ?" ಎಂದು ಕೇಳುವ ರಮೇಶ್, ತಮ್ಮ ಸಂಸ್ಥೆಯ ಮಾರಾಟ ಪೂರ್ಣಗೊಂಡ ಬಳಿಕ ಜಲಸಂರಕ್ಷಣೆ, ಪ್ಲಾಸ್ಟಿಕ್ ರೀಸೈಕ್ಸಿಂಗ್, ಬಡವರಿಗೆ ವೈದ್ಯಕೀಯ ಚಿಕಿತ್ಸೆ ಇತ್ಯಾದಿ ಪರಿಸರ ಮತ್ತು ಸಾಮಾಜಿಕ ಕಾಳಜಿಯ ಕಾರ್ಯಗಳಿಗೆ ತಮ್ಮ ಸಂಪನ್ಮೂಲವನ್ನು ವಿನಿಯೋಗಿಸುತ್ತೇನೆ ಎಂದಿದ್ದಾರೆ.
ಥಮ್ಸ್ ಅಪ್, ಲಿಮ್ಕಾ ಕೂಡ ಇವರದ್ದೇ ಆಗಿತ್ತು
ರಮೇಶ್ ಚೌಹಾಣ್ ಅವರು ತಮ್ಮ ವ್ಯಾವಹಾರಿಕ ವೃತ್ತಿಜೀವನದಲ್ಲಿ ಕೇವಲ ಬಿಸ್ಲೇರಿ ಕಂಪನಿ ಮಾತ್ರವಲ್ಲ, ಹಲವು ದೊಡ್ಡ ದೊಡ್ಡ ಬ್ರ್ಯಾಂಡ್ಗಳನ್ನು ಕಟ್ಟಿದ್ದಾರೆ. ತೊಂಬತ್ತರ ದಶಕದಲ್ಲಿ ಬಹಳ ದೊಡ್ಡ ಖ್ಯಾತಿ ಹೊಂದಿದ್ದ ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾ, ಸಿಟ್ರಾ, ರಿಮ್ಜಿಮ್, ಮಾಜಾ ಇತ್ಯಾದಿ ಕಾರ್ಬೊನೇಟೆಡ್ ಪಾನೀಯಗಳ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಸ್ಥಾಪಿಸಿದ್ದರು. 1993ರಲ್ಲಿ ಅವೆಲ್ಲವನ್ನೂ ಕೋಕ-ಕೋಲಾಗೆ ಮಾರಿದ್ದರು.
ಅದಾದ ಬಳಿಕ ಬಿಸ್ಲೇರಿ ನೀರಿನ ವ್ಯವಹಾರವನ್ನು ಮಾತ್ರ ರಮೇಶ್ ಮುಂದುವರಿಸಿದ್ದರು. ಕುತೂಹಲವೆಂದರೆ ಬಿಸ್ಲೇರಿಯು ರಮೇಶ್ ಚೌಹಾಣ್ ಆರಂಭಿಸಿದ ಬ್ರ್ಯಾಂಡ್ ಅಲ್ಲ. ಮೂಲತಃ ಇದು ಇಟಲಿಯ ಕಂಪನಿಯ ಬ್ರ್ಯಾಂಡ್. 1965ರಲ್ಲಿ ಬಿಸ್ಲೇರಿ ಭಾರತದಲ್ಲಿ ವ್ಯವಹಾರ ಆರಂಬಿಸಿತು. ಆದರೆ, 1969ರಲ್ಲಿ ರಮೇಶ್ ಚೌಹಾಣ್ ಅವರು ಬಿಸ್ಲೇರಿ ಕಂಪನಿಯನ್ನು ಖರೀದಿಸಿದ್ದರು. ನಂತರ ಭಾರತದ ನಂಬರ್ ಒನ್ ಮಿನರಲ್ ವಾಟರ್ ಕಂಪನಿಯಾಗಿ ಐದು ದಶಕಗಳ ಕಾಲ ವಿಜೃಂಭಿಸುವಂತೆ ರಮೇಶ್ ಚೌಹಾಣ್ ಶ್ರಮ ಬಹಳ ಮುಖ್ಯವಾದದು.
ಬಿಸ್ಲೇರಿಗೆ ರಮೇಶ್ ಚೌಹಾಣ್ ಛೇರ್ಮನ್ ಅಗಿದ್ದರೆ, ಏಂಜೆಲೋ ಜಾರ್ಜ್ ಎಂಬುವವರು ಸಿಇಒ ಆಗಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಬಿಸ್ಲೇರಿಯ ವಾರ್ಷಿಕ ವಹಿವಾಟು 2,500 ಕೋಟಿ ರೂ ಹಾಗೂ ಲಾಭ 220 ಕೋಟಿ ಬಂದಿದೆ. ಇದೀಗ ಟಾಟಾ ಸಂಸ್ಥೆ ಈ ಲಾಭದಾಯಕ ಕಂಪನಿಯನ್ನು 6000-7000 ರೂಪಾಯಿಗೆ ಖರೀದಿಸುವ ಮೂಲಕ ಪ್ಯಾಕೇಜ್ಡ್ ಮಿನರಲ್ ವಾಟರ್ ಕ್ಷೇತ್ರದಲ್ಲಿ ಮುಂಚೂಣಿಯ ಆಟಗಾರ ಎನಿಸಲಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications