ICICI - Videocon Loan Fraud Case: ಚಂದಾ ಕೋಚರ್ ಹಾಗೂ ಪತಿಗೆ ಜಾಮೀನು ಮಂಜೂರು
ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣರದಲ್ಲಿ ಬಾಂಬೆ ಹೈಕೋರ್ಟ್ ಸೋಮವಾರ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೋಚರ್ ಹಾಗೂ ಅವರ ಪತಿ ದೀಪಕ್ ಕೋಚರ್ಗೆ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 23ರಂದು ಐಸಿಐಸಿಐ ಬ್ಯಾಂಕ್ನ ಸುಮಾರು 3,000 ಕೋಟಿ ಸಾಲ ವಂಚನೆ ಪ್ರಕರಣದಲ್ಲಿ ದಂಪತಿಯನ್ನು ಬಂಧನ ಮಾಡಲಾಗಿತ್ತು.
ಕಾನೂನು ಪ್ರಕಾರವಾಗಿ ಇಬ್ಬರ ಬಂಧನವನ್ನು ಮಾಡಲಾಗಿಲ್ಲ ಎಂಬ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಡಿಸೆಂಬರ್ 23ರಂದು ಚಂದಾ ಕೋಚರ್ ಹಾಗೂ ಅವರ ಪತಿ ದೀಪಕ್ ಕೋಚರ್ರನ್ನು ಕೇಂದ್ರಿಯಾ ತನಿಖಾ ದಳ (ಸಿಬಿಐ) ಬಂಧನ ಮಾಡಿದೆ. ವಿಡಿಯೋಕಾನ್-ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣ: ವಿಡಿಯೋಕಾನ್ ಸಿಇಒ ವೇಣುಗೋಪಲ್ ಬಂಧನ
ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಮತ್ತು ಪಿಕೆ ಚಾವನ್ರನ್ನು ಒಳಗೊಂಡ ಪೀಠವು ಇಬ್ಬರು ತಲಾ ಒಂದು ಲಕ್ಷ ರೂಪಾಯಿ ಅಥವಾ ಹೆಚ್ಚಿನ ಮೊತ್ತವನ್ನು ಪಾವತಿಸಿ ಜಾಮೀನನ್ನು ಪಡೆಯಬೇಕು ಎಂದು ಹೇಳಿದೆ. ಹಾಗೆಯೇ ಅರ್ಜಿದಾರರ ಬಂಧನವು ಕಾನೂನು ಪ್ರಕಾರವಾಗಿ ನಡೆದಿಲ್ಲ ಎಂದು ಪೀಠವು ಉಲ್ಲೇಖಿಸಿದೆ.
ಬಾಂಬೆ ಹೈಕೋರ್ಟ್ ದ್ವಿಸದಸ್ಯ ಪೀಠ ಹೇಳಿದ್ದೇನು?
"ಅರ್ಜಿದಾರರು ಬಂಧನವು ಕಾನೂನು ಪ್ರಕಾರವಾಗಿ ನಡೆದಿಲ್ಲ ಎಂಬುವುದು ನಮಗೆ ತಿಳಿದು ಬಂದಿದೆ," ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಮತ್ತು ಪಿಕೆ ಚಾವನ್ರನ್ನು ಒಳಗೊಂಡ ದ್ವಿಸದಸ್ಯ ಪೀಠ ಹೇಳಿದೆ. ಹಾಗೆಯೇ ಹೈಕೋರ್ಟ್ ಕೋಚರ್ ದಂಪತಿಗಳು ತಮ್ಮ ಪಾಸ್ಪೋರ್ಟ್ ಅನ್ನು ಸಿಬಿಐಗೆ ಹಸ್ತಾಂತರ ಮಾಡುವಂತೆ ತಿಳಿಸಿದೆ. ತಮ್ಮ ಬಂಧನವನ್ನು ಪ್ರಶ್ನಿಸಿ ಕೋಚರ್ ದಂಪತಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಚಂದಾ ಕೋಚರ್, ಆಕೆಯ ಪತಿ ದೀಪಕ್ ಕೋಚರ್ ಹಾಗೂ ವಿಡಿಯೋಕಾನ್ ಗ್ರೂಪ್ ಪ್ರೊಮೋಟರ್ ವೇಣುಗೋಪಲ್ ದೂತ್ ಭ್ರಷ್ಟಾಚಾರ ಮಾಡಿದ್ದಾರೆ ಹಾಗೂ ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಮೂವರನ್ನು ಕೂಡಾ ಬಂಧನ ಮಾಡಲಾಗಿದೆ. ಸಾಲ ವಂಚನೆ ಪ್ರಕರಣದ ಎಫ್ಐಆರ್ನಲ್ಲಿ ನುಪವರ್ ರಿನಿವೇಬಲ್ಸ್ (ಎನ್ಆರ್ಎಲ್), ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರು ಕೂಡಾ ಉಲ್ಲೇಖವಾಗಿದೆ.
ಏನಿದು ಪ್ರಕರಣ?
ಸಿಬಿಐ ಪ್ರಕಾರ ವಿಡಿಯೋಕಾನ್ ಗ್ರೂಪ್ ಸಂಸ್ಥೆಗೆ 3,250 ಕೋಟಿ ರೂಪಾಯಿ ಸಾಲ ಮಂಜೂರು ಆಗಿದೆ. ಆದರೆ ಈ ಸಾಲವನ್ನು ಮಂಜೂರು ಮಾಡುವಾಗ ಆರ್ಬಿಐ ನಿಯಮ ಹಾಗೂ ಐಸಿಐಸಿಐ ಬ್ಯಾಂಕ್ಸ್ ಕ್ರೆಡಿಟ್ ಪಾಲಿಸಿಯನ್ನು ಉಲ್ಲಂಘನೆ ಮಾಡಲಾಗಿದೆ. ವಿಡಿಯೋಕಾನ್ ಗ್ರೂಪ್ ಹಾಗೂ ಅದಕ್ಕೆ ಸಂಬಂಧಿಸಿ ಸಂಸ್ಥೆಗೆ ಐಸಿಐಸಿಐ ಬ್ಯಾಂಕ್ನಿಂದ 1,875 ಕೋಟಿ ರೂಪಾಯಿಯನ್ನು ಆರು ಬಾರಿ ಸಾಲ ರೂಪದಲ್ಲಿ ನೀಡಲಾಗಿದೆ. 2009ರಿಂದ 2011ರ ನಡುವೆ ಈ ಸಾಲವನ್ನು ನೀಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಇನ್ನು ಚಂದಾ ಕೋಚರ್ ಇದ್ದ ಸಾಲ ಮಂಜೂರು ಮಾಡುವ ಕಮಿಟಿಯೂ 300 ಕೋಟಿ ರೂಪಾಯಿ ಹಾಗೂ 750 ಕೋಟಿ ರೂಪಾಯಿಯ ಸಾಲವನ್ನು ಮಂಜೂರು ಮಾಡಿದೆ.
ವೇಣುಗೋಪಲ್ ದೂತ್ 300 ಕೋಟಿ ರೂಪಾಯಿ ಸಾಲವನ್ನು ಪಡೆದ ಬೆನ್ನಲ್ಲೇ 2009ರ ಸೆಪ್ಟೆಂಬರ್ನಲ್ಲಿ 64 ಕೋಟಿ ರೂಪಾಯಿಯನ್ನು ನುಪವರ್ಗೆ ವರ್ಗಾವಣೆ ಮಾಡಿದ್ದಾರೆ. ಚಂದಾ ಕೋಚರ್ ಐಸಿಐಸಿಐ ಬ್ಯಾಂಕ್ನ ಎಂಡಿ ಹಾಗೂ ಸಿಇಒ ಆಗಿ ಮೇ 2009ರಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಾಲವನ್ನು ನಾನ್-ಪರ್ಫಾರ್ಮಿಂಗ್ ಅಸೆಟ್ ಆಗಿ ಪರಿಗಣಿಸಲಾಗಿದೆ. ಬ್ಯಾಂಕ್ ಸುಮಾರು 1,730 ಕೋಟಿ ರೂಪಾಯಿಯ ನಷ್ಟವನ್ನು ಹೊಂದಿದೆ. "ಎನ್ಆರ್ಎಲ್ (ನುಪವರ್ ರಿನಿವೇಬಲ್) ಮೊದಲ ಬಾರಿಗೆ ಇಷ್ಟು ಹೂಡಿಕೆ ಮಾಡಿದೆ. ಚಂದಾ ಕಚೋರ್ ಕಾನೂನುಬಾಹಿರವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ," ಎಂದು ಆರೋಪಿಸಲಾಗಿದೆ.