ಭಾರತದ ಆರ್ಥಿಕ ಪ್ರಗತಿ; ಅದಾನಿಗಿಂತಲೂ ಅಂಬಾನಿಗೆ ಹೆಚ್ಚು ವಿಶ್ವಾಸ
ನವದೆಹಲಿ, ನ. 23: ಭಾರತದ ಆರ್ಥಿಕತೆ ಮುಂದಿನ ಮೂರು ದಶಕದಲ್ಲಿ 30 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಏರುತ್ತದೆ ಎಂದು ಕೆಲ ದಿನಗಳ ಹಿಂದೆ ಭಾರತದ ನಂಬರ್ ಒನ್ ಶ್ರೀಮಂತ ಗೌತಮ್ ಅದಾನಿ ಹೇಳಿದ್ದರು. ಈಗ ಭಾರತದ ಎರಡನೇ ಅತಿದೊಡ್ಡ ಸಿರಿವಂತ ಎನಿಸಿದ ಮುಕೇಶ್ ಅಂಬಾನಿ ಭಾರತದ ಆರ್ಥಿಕತೆ ಬಗ್ಗೆ ಇನ್ನೂ ಹೆಚ್ಚು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಆಗಿರುವ ಮುಕೇಶ್ ಅಂಬಾನಿ 2047ರಷ್ಟರಲ್ಲಿ ಭಾರತವು 40 ಟ್ರಿಲಿಯನ್ ಡಾಲರ್ (3200 ಲಕ್ಷ ಕೋಟಿ ರೂಪಾಯಿ) ಆರ್ಥಿಕತೆಯ ದೇಶವಾಗಿ ಬೆಳೆಯುತ್ತದೆ ಎಂದಿದ್ದಾರೆ.
ಅಂಬಾನಿ ಮಾತು ನಿಜವೇ ಆದಲ್ಲಿ ಮುಂದಿನ 25 ವರ್ಷದಲ್ಲಿ ಭಾರತದ ಆರ್ಥಿಕತೆ 13 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸುತ್ತದೆ. ಸದ್ಯ ಭಾರತದ ಜಿಡಿಟಿ 3 ಟ್ರಿಲಿಯನ್ ಡಾಲರ್ ಇದೆ. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ನಂತರ ಅತಿಹೆಚ್ಚು ಜಿಡಿಪಿ ಇರುವ ದೇಶವೆನಿಸಿದೆ ಭಾರತ. ಮುಕೇಶ್ ಅಂಬಾನಿ ನಿರೀಕ್ಷಿಸಿದ ರೀತಿಯಲ್ಲಿ ಭಾರತ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಬೆಳೆದರೆ ಮತ್ತು ಅದೇ ವೇಳೆ ಚೀನಾದಂಥ ದೇಶ ಭಾರತಕ್ಕಿಂತ ಕಡಿಮೆ ವೇಗದಲ್ಲಿ ಬೆಳೆದಲ್ಲಿ 2047ರಲ್ಲಿ ಭಾರತ ವಿಶ್ವದ ನಂಬರ್ ಒನ್ ದೇಶವೆನಿಸಬಹುದು.
ಟೆಲಿಕಾಂ ಜಾಲ ಬಳಸುವ ವಾಟ್ಸಾಪ್ ಹಣ ಭರಿಸಬೇಕು: ಸಿಒಎಐ ಒತ್ತಾಯ
ರಿಲಾಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ ಪ್ರಕಾರ ಮುಂಬರುವ ದಶಕಗಳಲ್ಲಿ ಸ್ವಚ್ಛ ಇಂಧನ ಕ್ರಾಂತಿ ಮತ್ತು ಡಿಜಿಟಲ್ ಕ್ರಾಂತಿಯು ಭಾರತದ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಕೊಡುತ್ತದೆಯಂತೆ.
ಗುಜರಾತ್ನ ಗಾಂಧಿನಗರದಲ್ಲಿ ನಿನ್ನೆ ಮಂಗಳವಾರ ನಡೆದ ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿಯ 10ನೇ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ಅವರು, "ಸ್ವಚ್ಛ ಇಂಧನ ಕ್ರಾಂತಿ, ಜೈವಿಕ ಶಕ್ತಿ ಕ್ರಾಂತಿ, ಡಿಜಿಟಲ್ ಕ್ರಾಂತಿ - ಈ ಮೂರು ಮಹಾಪರಿವರ್ತನೀಯ ಕ್ರಾಂತಿಗಳು ಭಾರತದ ಪ್ರಗತಿಗೆ ಕಾರಣವಾಗುತ್ತವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಕ್ಲೀನ್ ಎನರ್ಜಿ ಕ್ರಾಂತಿ ಮತ್ತು ಬಯೋ ಎನರ್ಜಿ ಕ್ರಾಂತಿಯಿಂದ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಇಂಧನ (ಶಕ್ತಿ) ಉತ್ಪಾದನೆ ಮಾಡಬಹುದು. ಡಿಜಿಟಲ್ ಕ್ರಾಂತಿಯಿಂದ ಶಕ್ತಿಯ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ. ಈ ಮೂರು ಕ್ರಾಂತಿಯಿಂದ ಈ ಭೂಮಿಯನ್ನು ಹವಾಮಾನ ಬಿಕ್ಕಟ್ಟಿನಿಂದ ಪಾರು ಮಾಡಲು ಸಾಧ್ಯ" ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಸ್ವಚ್ಛ ಶಕ್ತಿಗೆ ಮೂರು ಅಸ್ತ್ರಗಳು
ಇದೇ ವೇಳೆ, ಮುಕೇಶ್ ಅಂಬಾನಿ ಅವರು ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಯಶಸ್ಸಿನ ಹಾದಿಗೆ ಮೂರು ಮಂತ್ರಗಳನ್ನು ತಿಳಿಸಿಕೊಟ್ಟಿದ್ದಾರೆ. "ದೊಡ್ಡ ಆಲೋಚನೆ, ಪರಿಸರಸ್ನೇಹಿ ಆಲೋಚನೆ, ಮತ್ತು ಡಿಜಿಟಲ್ ಆಲೋಚನೆ" ಇವೇ ಅಂಬಾನಿ ತಿಳಿಸಿದ ಮೂರು ಯಶಸ್ಸಿನ ಗುಟ್ಟು. ಈ ಮೂರು ಮಂತ್ರಗಳನ್ನು ಅಂಬಾನಿ ಈ ಕೆಳಗಿನಂತೆ ವಿವರಿಸಿದ್ದಾರೆ.
"ಈ ಜಗತ್ತಿನಲ್ಲಿ ನಿರ್ಮಾಣವಾಗಿರುವ ಶ್ರೇಷ್ಠ ವಸ್ತು ಎಲ್ಲವೂ ಒಂದು ಕಾಲದಲ್ಲಿ ಕನಸನಲ್ಲಿ ಮಾತ್ರ ಕಲ್ಪಿಸಿಕೊಳ್ಳಲು ಸಾಧ್ಯವಿದ್ದಂಥವು. ಧೈರ್ಯದಿಂದ ನಿಮ್ಮ ಕನಸಿನ ಬೆನ್ನತ್ತಿ ಹೋಗಿ ನನಸಾಗಿಸಿ.... ಈ ಭೂಮಾತೆಗೆ ಹಾನಿಯಾಗದ ರೀತಿಯಲ್ಲಿ ಶಕ್ತಿ ಉತ್ಪಾದಿಸುವ ಮಾರ್ಗಗಳನ್ನು ಅವಲೋಕಿಸಿ.
"ಸ್ವಚ್ಛ ಶಕ್ತಿ ವಿಚಾರದಲ್ಲಿ ಭಾರತ ಮುಂಚೂಣಿಗೆ ಬರಬೇಕಾದರೆ ಡಿಜಿಟಲೀಕರಣದ ನೆರವು ಅಗತ್ಯ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಮುಂತಾದ ಡಿಜಿಟಲ್ ತಂತ್ರಜ್ಞಾನಗಳು ಸ್ವಚ್ಛ ಶಕ್ತಿಯ ಸಮರ್ಪಕ ಬಳಕೆಗೆ ಸಹಾಯವಾಗುತ್ತದೆ. ಈ ಮೂರು ಮಂತ್ರಗಳು ಭಾರತವನ್ನು ಜಾಗತಿಕ ಸ್ವಚ್ಛ ಶಕ್ತಿಯ ನಾಯಕನಾಗಿ ಮಾಡುವ ನಿಮ್ಮ ಗುರಿಗೆ ಅಸ್ತ್ರಗಳಾಗಬಲ್ಲುವು" ಎಂದು ಮುಕೇಶ್ ಅಂಬಾನಿ ಕಿವಿಮಾತು ಹೇಳಿದ್ದಾರೆ.
ಭಾರತದ ಆರ್ಥಿಕ ಪ್ರಗತಿ ಆಶಾದಾಯಕ ಎಂದ ಒಇಸಿಡಿ
ಆರ್ಥಿಕ ಹಿಂಜರಿತದ ಮಧ್ಯೆ ಸಕಾರಾತ್ಮಕವಾಗಿ ಆರ್ಥಿಕ ಪ್ರಗತಿ ಕಾಣುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು ಎಂದು ಒಇಸಿಡಿ ಅಭಿಪ್ರಾಯಪಟ್ಟಿದೆ.
ಪ್ಯಾರಿಸ್ನಲ್ಲಿರುವ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ (ಒಇಸಿಡಿ) ಆರ್ಥಿಕ ನೀತಿಗಳ ಬಗ್ಗೆ ನಿಗಾ ಇಡುವ ಒಂದು ಅಂತರಸರ್ಕಾರಿ ಸಂಸ್ಥೆಯಾಗಿದೆ. ಇತ್ತೀಚೆಗೆ ಅದು ಪ್ರಕಟಿಸಿದ "ಎಕನಾಮಿಕ್ ಔಟ್ಲುಕ್" ಎಂಬ ತನ್ನ ವರದಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದೆ.
"2022-23ರ ಹಣಕಾಸು ವರ್ಷದಲ್ಲಿ ಸೌದಿ ಅರೇಬಿಯಾ ನಂತರ ಭಾರತವೇ ಅತಿ ಹೆಚ್ಚು ವೇಗದಲ್ಲಿ ಆರ್ಥಿಕ ಪ್ರಗತಿ ಸಾಧಿಸುವ ದೇಶವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.
ಜಿಡಿಪಿ ಕಡಿಮೆಯಾದರೂ ಉತ್ತಮ ಸ್ಥಿತಿ
"2023-24ರ ಹಣಕಾಸು ವರ್ಷದಲ್ಲಿ ರಫ್ತು ಮತ್ತು ಮಾರುಕಟ್ಟೆ ಬೇಡಿಕೆ ಕಡಿಮೆಗೊಳ್ಳುವುದರಿಂದ ಭಾರತದ ಜಿಡಿಪಿ ವೃದ್ಧಿ ದರ ಶೇ. 5.7ಕ್ಕೆ ನಿಲ್ಲಬಹುದು. ಆದರೂ ಕೂಡ ಚೀನಾ, ಸೌದಿ ಅರೇಬಿಯಾ ಸೇರಿದಂತೆ ಜಿ20 ದೇಶಗಳ ಆರ್ಥಿಕತೆಗಿಂತ ಭಾರತ ಹೆಚ್ಚು ವೇಗವಾಗಿ ಬೆಳೆಯುತ್ತದೆ.
"2022-23ರ ಹಣಕಾಸು ವರ್ಷದಲ್ಲಿ ಶೇ. 6.6 ಇರುವ ಭಾರತದ ಜಿಡಿಪಿ ಬೆಳವಣಿಗೆ ದರ, ಆ ನಂತರದ ಮುಂದಿನ ಕ್ವಾರ್ಟರ್ಗಳಲ್ಲಿ ನಿಧಾನಗೊಂಡು 2023-24ರ ವರ್ಷಕ್ಕೆ ಶೇ. 5.7ಕ್ಕೆ ಸೀಮಿತಗೊಳ್ಳಬಹುದು. ಆದರೆ, 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ. 7ರ ಆಸುಪಾಸಿಗೆ ಏರಿಕೆ ಆಗಬಹುದು" ಎಂದು ಒಎಸಿಡಿ ತನ್ನ 'ಎಕನಾಮಿಕ್ ಔಟ್ಲುಕ್' ವರದಿಯಲ್ಲಿ ಅಂದಾಜು ಮಾಡಿದೆ.