ಕೊರೊನಾವೈರಸ್ ಭಯ : ಭಾರತಕ್ಕೆ ಆಗಮಿಸಬೇಕಿದ್ದ ಜಪಾನ್, ದಕ್ಷಿಣ ಕೊರಿಯಾ ಪ್ರಜೆಗಳ ವೀಸಾ ಕ್ಯಾನ್ಸಲ್
ವಿಶ್ವದ ಎಲ್ಲೆಡೆ ಈಗೇನಿದ್ರೂ ಕೊರೊನಾವೈರಸ್ ಕುರಿತಾಗಿ ಭಯ ಆವರಿಸಿದೆ. ಭಾರತದಲ್ಲೂ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದ್ದು ಜಪಾನ್, ದಕ್ಷಿಣ ಕೊರಿಯಾ ಪ್ರಜೆಗಳ ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಚೀನಾ ಹೊರತುಪಡಿಸಿ ಜಪಾನ್, ದಕ್ಷಿಣ ಕೊರಿಯಾ ದೇಶಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತವು ಜಪಾನ್ ಮತ್ತು ದಕ್ಷಿಣ ಕೊರಿಯಾದ ಪ್ರಜೆಗಳಿಗೆ ಆಗಮನ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ತಿಳಿಸಿದೆ.
ಕೊರೊನಾವೈರಸ್ ಪೀಡಿತ ಕ್ರೂಸ್ ಹಡಗಿನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದ 119 ಭಾರತೀಯರನ್ನು ಮತ್ತು 5 ವಿದೇಶಿಯರನ್ನು ಜಪಾನಿನ ಕರಾವಳಿಯಲ್ಲಿ ಸ್ಥಳಾಂತರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಹಡಗಿನಲ್ಲಿದ್ದ 3,711 ಜನರಲ್ಲಿ 700 ಕ್ಕೂ ಹೆಚ್ಚು ಜನರು ಈ ವೈರಸ್ ರೋಗಕ್ಕೆ ತುತ್ತಾಗಿರುವುದು ಪರೀಕ್ಷೆಯಿಂದ ತಿಳಿದುಬಂದಿದೆ. ದೇಶದ ಇತರೆಡೆಗಳಲ್ಲಿ 160 ಕ್ಕೂ ಹೆಚ್ಚು ಜನರು ಈ ಕಾಯಿಲೆಗೆ ತುತ್ತಾಗಿರುವುದು ಕಂಡುಬಂದಿದೆ.
ಕೊರೊನಾವೈರಸ್ ಪ್ರಕರಣಗಳು 2,000 ಕ್ಕಿಂತ ಹೆಚ್ಚಿರುವಾಗ, ದಕ್ಷಿಣ ಕೊರಿಯಾವು ಚೀನಾ ದೇಶ ಬಿಟ್ಟು ಅತಿ ಹೆಚ್ಚು ಸೋಂಕುಗಳನ್ನು ಹೊಂದಿರುವ ಅತಿದೊಡ್ಡ ಕ್ಲಸ್ಟರ್ ಆಗಿ ಮಾರ್ಪಟ್ಟಿದೆ. ಹೀಗಾಗಿ ಜಪಾನ್, ದಕ್ಷಿಣ ಕೊರಿಯಾದ ಪ್ರಜೆಗಳಿಗೆ ವೀಸಾ ಕ್ಯಾನ್ಸಲ್ ಮಾಡಲಾಗಿದೆ.