ನಾಳೆಯಿಂದ ರೈಲು ಸೇವೆ ಪುನರಾರಂಭ : ಏನಿದೆ ಹೊಸ ನಿಯಮ?
ಕೊರೊನಾವೈರಸ್ ಸೋಂಕು ತಡೆಗಟ್ಟಲು ರಾಷ್ಟ್ರವ್ಯಾಪಿ ಬಂದ್ ಜೊತೆಗೆ ರೈಲು ಸಂಚಾರ ಸ್ಥಗಿತಗೊಂಡು ಒಂದೂವರೆ ತಿಂಗಳಿಗಿಂತ ಹೆಚ್ಚಾಗಿದೆ. ಆದರೆ ನಾಳೆಯಿಂದ(ಮೇ 12) ರೈಲ್ವೇ ಸಂಚಾರ ಪುನರಾರಂಭಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಂಗಳವಾರ(ಮೇ 12)ದಿಂದ ಪ್ರತಿದಿನ 15 ರೈಲುಗಳು ಸಂಚಾರ ನಡೆಸಲಿವೆ. ಈ ವಿಶೇಷ ರೈಲುಗಳು ನವದೆಹಲಿಯಿಂದ ದಿಬ್ರುಗಢ್, ಅಗರ್ತಾಲಾ, ಹೌರಾ, ಪಾಟ್ನ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮುವಿನ ಟಾವ್ವಿಗೆ ಸಂಚರಿಸಲಿದೆ. ಈ ರೈಲು ಕೆಲವು ಕಡೆ ಮಾತ್ರ ನಿಲುಗಡೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಾರದಲ್ಲಿ ಹವಾನಿಯಂತ್ರಿತ ರೈಲು ಸೇವೆ ಆರಂಭವಾಗಲಿದೆ. ಟಿಕೆಟ್ ದರ ರಾಜಧಾನಿ ಎಕ್ಸ್ ಪ್ರೆಸ್ ನ ದರಕ್ಕೆ ಸಮಾನಂತರವಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಇಂದು ಸಂಜೆ 4 ಗಂಟೆಯಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಪ್ರಯಾಣಿಕರು IRCTC ವೆಬ್ ಸೈಟ್ ಅಥವಾ IRCTC ಮೊಬೈಲ್ ಆ್ಯಪ್ ಮೂಲಕ ಮಾತ್ರ ಟಿಕೆಟ್ ಖರೀದಿಸಬೇಕು. ರೈಲ್ವೇ ನಿಲ್ದಾಣಗಳಲ್ಲಿನ ಟಿಕೆಟ್ ಬುಕ್ಕಿಂಗ್ ಕೌಂಟರ್ ಬಂದ್ ಮುಂದುವರಿದಿದೆ. ಅಲ್ಲದೇ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ ಮಾಡುವ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಕೆಟ್ ಕನ್ ಫರ್ಮ್ ಆದ ಪ್ರಯಾಣಿಕರನ್ನು ಮಾತ್ರ ರೈಲ್ವೆ ನಿಲ್ದಾಣದೊಳಕ್ಕೆ ಬಿಡಲಾಗುವುದು. ಫ್ಲ್ಯಾಟ್ ಫಾರಂ ಟಿಕೆಟ್ ಕೊಡುವುದಿಲ್ಲ. ಎಲ್ಲಾ ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ನಿಲ್ದಾಣದಲ್ಲಿ ಟೆಂಪರೇಚರ್ ಸ್ಕ್ರೀನಿಂಗ್ ಕಡ್ಡಾಯ. ರೈಲ್ವೆ ನಿಲ್ದಾಣಕ್ಕೆ ಒಂದು ಗಂಟೆ ಮುನ್ನ ಆಗಮಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.