ಸರ್ಕಾರಕ್ಕೆ ಬೇಕಾದಷ್ಟು ನೋಟು RBI ಮುದ್ರಿಸುವುದಕ್ಕೆ ಆಗಲ್ಲ ಏಕೆ? ನಿಯಮಗಳು ಏನು?
"ಅದೇನು ಸರ್ಕಾರಕ್ಕೆ ದುಡ್ಡಿಗೆ ಕಷ್ಟವೋ ಗೊತ್ತಿಲ್ಲ. ರಿಸರ್ವ್ ಬ್ಯಾಂಕ್ ನಿಂದ ತನಗೆ ಬೇಕಾದಷ್ಟು ನೋಟು ಪ್ರಿಂಟ್ ಮಾಡಿಸಿಕೊಳ್ಳಬಹುದು ಮತ್ತು ಜನರಿಗೆ ಹಂಚಬಹುದು ಅಲ್ಲವಾ?", ಅನ್ನೋದು ಕೊರೊನಾದ ಕಷ್ಟ ಕಾಲದಲ್ಲಿ ಕೆಲವರ ಪ್ರಶ್ನೆ. ಆದರೆ ಹಾಗೆ ಮಾಡೋದು ಅಷ್ಟು ಸಲೀಸಾ? ಒಂದು ವೇಳೆ ಹೀಗೇ ಮಾಡಿಬಿಟ್ಟರೆ ಏನಾಗುತ್ತದೆ ಅನ್ನೋದನ್ನು ಒಂದು ಉದಾಹರಣೆ ಸಹಿತ ವಿವರಿಸ್ತೀವಿ.
ಒಂದು ದೇಶ ಇದೆ. ಅಲ್ಲಿ ಇಬ್ಬರು ಮಾತ್ರ ಇದ್ದಾರೆ. ಅವರ ಆದಾಯ ವರ್ಷಕ್ಕೆ ತಲಾ 10 ರುಪಾಯಿ ಇದೆ. ಆ ದೇಶದ ಆರ್ಥಿಕತೆ ಅಂದರೆ ಭತ್ತ ಮಾತ್ರ ಬೆಳೆಯುವುದು. ಅದು ಕೂಡ ವರ್ಷಕ್ಕೆ ಎರಡು ಕೇಜಿ ಬೆಳೆಯಲಾಗುತ್ತದೆ. ಒಂದು ಕೇಜಿಗೆ ಅಲ್ಲಿನ ಇಬ್ಬರು ತಲಾ 10 ರುಪಾಯಿ ಕೊಟ್ಟು ಖರೀದಿ ಮಾಡಬೇಕು.
ದಿಢೀರ್ ಅಂತ ಒಂದು ದಿನ ಅಲ್ಲಿನ ಸರ್ಕಾರ ಹತ್ತು ರುಪಾಯಿ ಬದಲಿಗೆ ಇಪ್ಪತ್ತು ರುಪಾಯಿ ಪ್ರಿಂಟ್ ಮಾಡಲು ಶುರು ಆರಂಭಿಸುತ್ತದೆ. ಆದರೆ ಅಕ್ಕಿ ಉತ್ಪಾದನೆ ಎರಡು ಕೇಜಿ ಮಾತ್ರವೇ ಇರುತ್ತದೆ. ಆ ದೇಶದ ಇಬ್ಬರ ಆದಾಯ 20 ರುಪಾಯಿ ಆಯಿತು. ಹಾಗಂದರೆ ಜನರ ಕೈಲಿ ಹಣ ಹೆಚ್ಚಿಗೆ ಇದೆ. ಆದರೆ ಅಕ್ಕಿಗೆ ಬೇಡಿಕೆ ಹೆಚ್ಚಿದೆ. ಆಗ ಒಂದು ಕೇಜಿಯ ಅಕ್ಕಿಯ ಬೆಲೆ 10ರಿಂದ 20 ರುಪಾಯಿಗೆ ಏರಿಕೆ ಆಗುತ್ತದೆ.
ಹಣದ ಕೊರತೆ ನೀಗಿಸಲು ಸರ್ಕಾರದಿಂದ ಶುರುವಾಗಿದೆಯೇ ಪ್ರಯತ್ನ?
ಮೇಲಿನ ಎರಡೂ ಘಟನೆಯಲ್ಲೂ ಅಕ್ಕಿಯ ಉತ್ಪಾದನೆಯಲ್ಲಿ ಏನೂ ವ್ಯತ್ಯಾಸ ಆಗಿಲ್ಲ. ಆದರೆ ಹೆಚ್ಚಿನ ಹಣ ಮುದ್ರಣ ಮಾಡಿದ್ದರಿಂದ ಬೆಲೆ ಜಾಸ್ತಿ ಆಯಿತು. ಆದ್ದರಿಂದ ನೋಟು ಮುದ್ರಣವು ಯಾವಾಗಲೂ ದೇಶದ ಸರಕು ಮತ್ತು ಸೇವೆಗಳಿಗೆ ತಾಳೆ ಆಗುವಂತೆ ಇರಬೇಕು. ಹಾಗಿಲ್ಲದಿದ್ದರೆ ಹಣದುಬ್ಬರದಿಂದ ದೇಶದ ಆರ್ಥಿಕತೆ ಹಾಳಾಗುತ್ತದೆ.
ಹಾಗಿದ್ದರೆ ನೋಟು ಮುದ್ರಣ ಮಾಡುವಾಗ ಯಾವ ಅಂಶಗಳನ್ನು ಗಮನಿಸಬೇಕು ಎಂಬುದರ ವಿವರಣೆ ಇಲ್ಲಿದೆ:
ಹಣದುಬ್ಬರ
ಸಮಯ ಕಳೆದಂತೆ ಸರಕು ಮತ್ತು ಸೇವೆಗಳ ಬೆಲೆ ಏರಿಕೆ ಆಗುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಇದು ಅರ್ಥಶಾಸ್ತ್ರದ ಪದ. ಕಳೆದ ವರ್ಷಕ್ಕೆ ಹೋಲಿಸಿದರೆ ಈಗಿನ ಹಾಲಿನ ದರ, ಅದುಗೆ ಸಿಲಿಂಡರ್, ಹೇರ್ ಕಟ್ ಗೆ ಬೆಲೆ ಹೆಚ್ಚಾಗಿಲ್ಲವಾ? ಹಣದುಬ್ಬರವು ಜೀವನ ನಿರ್ವಹಣೆ ವೆಚ್ಚವನ್ನು ಹೆಚ್ಚಿಸುತ್ತದೆ. ಜತೆಗೆ ಆಯಾ ಮುಖಬೆಲೆ ನೋಟಿಗೆ ಇರುವ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮುಂಚೆಲ್ಲ, ನೂರು ರುಪಾಯಿಗೆ ಹತ್ತು ತೆಂಗಿನಕಾಯಿ ತರ್ತಾ ಇದ್ದಿವಿ. ಈಗ ಮೂರರಿಂದ ನಾಲ್ಕು ಮಾತ್ರ ಬರುತ್ತದೆ ಅಂತೀವಲ್ಲ, ಇದೇ ಹಣದುಬ್ಬರ. ಜಿಂಬಾಬ್ವೆಯಲ್ಲಿ ಏನಾಗಿತ್ತು ಗೊತ್ತಾ? ಕೆಲವು ವರ್ಷಗಳ ಹಿಂದೆ ಮೂರು ಮೊಟ್ಟೆಗೆ 100 ಬಿಲಿಯನ್ ಡಾಲರ್ (10 ಸಾವಿರ ಕೋಟಿ) ಜಿಂಬಾಬ್ವೆ ಕರೆನ್ಸಿಯನ್ನು ಪಾವತಿಸಬೇಕಿತ್ತು. ಈ ಪ್ರಕರಣದಲ್ಲಂತೂ ಒಟ್ಟಾರೆ ಕರೆನ್ಸಿಯೇ ಅಪಮೌಲ್ಯ ಆಗಿತ್ತು. ಹಣದುಬ್ಬರ ವಿಪರೀತಕ್ಕೆ ಹೋಗಿದ್ದರ ಉದಾಹರಣೆ ಇದು.
ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ)
ಒಂದು ಆರ್ಥಿಕ ವರ್ಷದಲ್ಲಿ, ಒಂದು ದೇಶದಲ್ಲಿ ಉತ್ಪಾದನೆ ಆಗುವ ಒಟ್ಟು ಸರಕು ಮತ್ತು ಸೇವೆಗಳ ಅಂತಿಮ ಮೌಲ್ಯವನ್ನು ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಅಥವಾ ಜಿಡಿಪಿ ಎನ್ನಲಾಗುತ್ತದೆ. ಯಾವುದೇ ದೇಶದ ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳಲು ಜಿಡಿಪಿ ಪ್ರಮುಖವಾದ ಮಾನದಂಡ. ಎಷ್ಟು ನೋಟು ಮುದ್ರಣ ಆಗಬೇಕು ಎಂದು ನಿರ್ಧರಿಸುವ ಅಂಶದಲ್ಲಿ ಜಿಡಿಪಿ ನಿರ್ಧಾರಿತ ಅಂಶವಾಗುತ್ತದೆ. ಅದೇ ಮೌಲ್ಯಕ್ಕೆ ಸರ್ಕಾರ ನೋಟು ಮುದ್ರಿಸುತ್ತದೆ. ಅಂದರೆ, ಆರ್ಥಿಕ ಚಟುವಟಿಕೆಗಳು ಹೆಚ್ಚಾದಂತೆ ಜಿಡಿಪಿಯು ಚಲಾವಣೆಯಲ್ಲಿ ಹಣ ಹೆಚ್ಚಿಸುವ ಅಗತ್ಯವನ್ನು ಸೂಚಿಸುತ್ತದೆ. ಒಟ್ಟಾರೆ ಅರ್ಥ ಏನೆಂದರೆ, ಹಣದುಬ್ಬರ ಹಾಗೂ ಜಿಡಿಪಿಗೆ ಬದಲಾಗಿ ವಿನಿಮಯ ಮಾಡಿಕೊಳ್ಳಲು ಅಗತ್ಯ ಇರುವಷ್ಟು ಹಣವನ್ನು ಸರ್ಕಾರವು ಜನರಿಗೆ ನೀಡುತ್ತದೆ.
ಕನಿಷ್ಠ ಮೀಸಲು ವ್ಯವಸ್ಥೆ (ಮಿನಿಮಮ್ ರಿಸರ್ವ್ ಸಿಸ್ಟಮ್)
ದೇಶದಲ್ಲಿ ವಿತರಿಸುವ ಕರೆನ್ಸಿ ಮೀಸಲಿನ ಮೇಲೆ ಆಧಾರವಾಗಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನೆಲ್ಲ ಹೊಣೆಗಾರಿಕೆಯನ್ನು ನಿರ್ವಹಿಸಿದ ನಂತರ ಅದರ ಬಳಿ ಉಳಿಯುವುದೇ ಮೀಸಲು ಅಥವಾ ರಿಸರ್ವ್. ಈ ಮೀಸಲು ಅಂದರೆ: ಚಿನ್ನದ ಮೀಸಲು, ವಿದೇಶಿ ವಿನಿಮಯ ಮೀಸಲು ಹಾಗೂ ಬ್ಯಾಲೆನ್ಸ್ ಆಫ್ ಪೇಮೆಂಟ್ (BOP) ಕೇವಲ ಬರಬೇಕಾದ ಬಾಬ್ತು ಮಾತ್ರ. 1956ನೇ ಇಸವಿಯಿಂದ ಕೂಡ ರಿಸರ್ವ್ ಬ್ಯಾಂಕ್ ಕನಿಷ್ಠ ಮೀಸಲು ವ್ಯವಸ್ಥೆ ನಿಯಮವನ್ನು ಅನುಸರಿಸಿಕೊಂಡು ಬರುತ್ತಿದೆ. ಈಗ ರಿಸರ್ವ್ ಬ್ಯಾಂಕ್ 200 ಕೋಟಿ ರುಪಾಯಿ ನೋಟು ಮುದ್ರಿಸಬೇಕು ಅಂದರೆ, 115 ಕೋಟಿ ರುಪಾಯಿ ಚಿನ್ನದ ಗಟ್ಟಿ ಅಥವಾ ನಾಣ್ಯದ ರೂಪದಲ್ಲಿ ಅದರ ಬಳಿ ಇರಬೇಕು. ಇನ್ನು ಆರ್ಥಿಕ ಬೆಳವಣಿಗೆ ಮತ್ತು ಜನರ ವ್ಯವಹಾರದ ಅಗತ್ಯಗಳಿಗೆ ತಕ್ಕಂತೆ ಹೊಸ ನೋಟುಗಳನ್ನು ವಿತರಿಸುವ ಕೆಲವು ನಿಯಮ- ತತ್ವಗಳನ್ನು ಆರ್ ಬಿಐ ಅನುಸರಿಸಿಕೊಂಡು ಬಂದಿದೆ.
ಸರ್ಕಾರದಿಂದ ಒಪ್ಪಿಗೆ ಪಡೆಯುವ ಆರ್ ಬಿಐ
ಪದೇ ಪದೇ ಕೈ ಬದಲಿಯಾಗಿ ವಿಪರೀತ ಕೊಳೆಯಾದ ನೋಟು, ಎರಡು ತುಂಡುಗಳನ್ನು ಅಂಟಿಸಿರುವುದು ಇಂಥವನ್ನು ಬ್ಯಾಂಕ್ ಗೆ ವಾಪಸ್ ಕೊಡ್ತಾರಲ್ಲ ಅವನ್ನು "ಸಾಯಿಲ್ಡ್ ನೋಟ್" ಎಂದು ಕರೆಯಲಾಗುತ್ತದೆ. ಇನ್ನು ಕೆಲವು ನೋಟುಗಳ ಒಂದು ಭಾಗವೇ ಇರುವುದಿಲ್ಲ ಅಥವಾ ಒಂದು ಭಾಗವೇ ಎರಡು ಸಲ ಇರುತ್ತದೆ. ಇಂಥವನ್ನು "ಮ್ಯೂಟಿಲೇಟೆಡ್ ಬ್ಯಾಂಕ್ ನೋಟ್" ಎಂದು ಕರೆಯಲಾಗುತ್ತದೆ. ಈ ಎರಡೂ ಬಗೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆಯಲಾಗುತ್ತದೆ. ಅದರ ಬಗ್ಗೆ ಆರ್ ಬಿಐ ದಾಖಲೆಯಲ್ಲಿ ನಮೂದಿಸಲಾಗುತ್ತದೆ. ಈ ನೋಟುಗಳನ್ನು ಆರ್ ಬಿಐ ಅಧಿಕಾರಿಗಳ ಸಮ್ಮುಖದಲ್ಲೇ ತೀಕ್ಷ್ಣ ಕಣ್ಗಾವಲಿನಲ್ಲಿ ಸುಡಲಾಗುತ್ತದೆ. ಈ ನೋಟುಗಳ ಲೆಕ್ಕವು ಆರ್ ಬಿಐ ಬಳಿ ಪಕ್ಕಾ ಇರುತ್ತದೆ. ಆದ್ದರಿಂದ ಅಷ್ಟು ಮೊತ್ತದ ನೋಟನ್ನು ಮುದ್ರಿಸಲಾಗುತ್ತದೆ. ಹಣದುಬ್ಬರ, ಜಿಡಿಪಿ ಹಾಗೂ ಹಳೇ ನೋಟುಗಳ ವಿಲೇವಾರಿ ಇವೆಲ್ಲರ ಲೆಕ್ಕಾಚಾರ ಹಾಕಿದ ಮೇಲೆ, ಎಷ್ಟು ಮೊತ್ತವನ್ನು ಮುದ್ರಣ ಮಾಡಬೇಕಾಗುತ್ತದೆ ಎಂಬ ಬೇಡಿಕೆಯೊಂದಿಗೆ ಕೇಂದ್ರ ಸರ್ಕಾರದ ಅನುಮತಿಗೆ ಬರುತ್ತದೆ. ಆರ್ ಬಿಐ ಹಾಗೂ ಕೇಂದ್ರ ಸರ್ಕಾರವು ನೋಟಿನ ಮುಖಬೆಲೆ, ರಚನೆ ಹಾಗೂ ಭದ್ರತೆ ಫೀಚರ್ ಗಳ ಬಗ್ಗೆ ಚರ್ಚೆ ನಡೆಸುತ್ತದೆ. ಮಂಜೂರಾತಿ ಸಿಕ್ಕ ತಕ್ಷಣ ಮುದ್ರಣ ಆರಂಭಿಸುತ್ತದೆ.
ಮುದ್ರಣ ನಿಯಮಗಳು
ಭಾರತದಲ್ಲಿ ತುರ್ತು ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಐದು ಪರ್ಸೆಂಟ್ ಹೆಚ್ಚಿಗೆ ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ಮೊತ್ತವನ್ನು ಪ್ರಾದೇಶಿಕ ಕಚೇರಿ ಹಾಗೂ ಬ್ಯಾಂಕ್ ನಿಂದ ಪರಿಶೀಲಿಸಿ ಮತ್ತು ಆರ್ ಬಿಐ ಮುಂಬೈ ಕೇಂದ್ರ ಕಚೇರಿ ಡಿಸಿಎಂ ಮತ್ತೊಮ್ಮೆ ಪರಿಶೀಲನೆ ಮಾಡುತ್ತಾರೆ. ಮುಖಬೆಲೆಯ ಆಧಾರದಲ್ಲಿ ಮುದ್ರಣಕ್ಕೆ ತೆಗೆದುಕೊಳ್ಳಲಾಗುತ್ತದೆ. ಪ್ರಿಂಟಿಂಗ್ ಪ್ರೆಸ್ ಗಳಿಗೆ ಪ್ರಿಂಟಿಂಗ್ ಆರ್ಡರ್ ನೀಡಲಾಗುತ್ತದೆ. ನಾಲ್ಕು ಭಾಗದಲ್ಲಿ ಮುದ್ರಿಸಿ, ಅವುಗಳನ್ನು ಯೋಜನೆಯನ್ನು ವರ್ಗಾವಣೆ ಮಾಡಲಾಗುತ್ತದೆ. ಇಡೀ ಪ್ರಕ್ರಿಯೆಯನ್ನು ಆರ್ ಬಿಐನ ವಿತರಣೆ ಇಲಾಖೆ ಕಣ್ಗಾವಲಿನಲ್ಲೇ ನಡೆಸಲಾಗುತ್ತದೆ.