ಕರ್ನಾಟಕದಲ್ಲಿ ಕಾಫಿ ಉತ್ಪಾದನೆ ಶೇಕಡಾ 35 ರಷ್ಟು ಕುಸಿತ
ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಕರ್ನಾಟಕದಲ್ಲಿ ಕಾಫಿ ಉತ್ಪಾದನೆ ಶೇಕಡಾ 35 ರಷ್ಟು ಕುಸಿದಿದೆ. ಆಗಸ್ಟ್ನಿಂದ ಅಕ್ಟೋಬರ್ವರೆಗೆ ಭಾರೀ ಮಳೆ ಸುರಿದ ಪರಿಣಾಮ ಕಾಫಿ ತೋಟಗಳಿಗೆ ಹಾನಿ ಉಂಟಾಗಿದ್ದು, 2019-20ರಲ್ಲಿ ಶೇಕಡಾ 30 ರಿಂದ 35ರಷ್ಟು ಉತ್ಪಾದನೆ ಕುಸಿದಿದೆ ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಅಧ್ಯಕ್ಷ ಎಂ.ಬಿ ಗಣಪತಿ ಹೇಳಿದ್ದಾರೆ.
ಸೋಮವಾರ(ನವೆಂಬರ್ 11) ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆಪಿಎ ಅಧ್ಯಕ್ಷ ಎಂ.ಬಿ ಗಣಪತಿ ಆಗಸ್ಟ್- ಅಕ್ಟೋಬರ್ ತಿಂಗಳವರೆಗೆ ದಕ್ಷಿಣ ಕೊಡಗು, ಹಾಸನ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿದು ಕಾಫಿ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಮೆಣಸು ಬೆಳೆಗೂ ಕೂಡ ತೊಂದರೆಯಾಗಿದೆ ಎಂದರು.
ಭಾರೀ ಮಳೆ , ಪ್ರವಾಹ ಹಾಗೂ ಭೂಕುಸಿತದಿಂದಾಗಿ 2018-19 ರಲ್ಲೂ ಕಾಫಿ ಉತ್ಪಾದನೆ ಸಾಮಾನ್ಯವಾಗಿ ಶೇಕಡಾ 30ರಷ್ಟು ಕುಸಿದಿದೆ. ಕೊಡಗಿನಲ್ಲಿ ಶೇಕಡಾ 45ರಷ್ಟು ಉತ್ಪಾದನೆ ಕುಂಠಿತಗೊಂಡಿದೆ ಎಂದರು. ಅರೇಬಿಕಾ ಬೆಳೆ ನಾವು ಅಂದಾಜಿಸಿದ್ದಕ್ಕಿಂಕ ಕಡಿಮೆ ಉತ್ಪಾದನೆಯಾಗಿದ್ದು 90 ಸಾವಿರ ಟನ್ ಮೀರಲಿಲ್ಲ ಎಂದು ಕೆಪಿಎ ಅಧ್ಯಕ್ಷ ಎಂ.ಬಿ ಗಣಪತಿ ಹೇಳಿದರು.
ಕಾಫಿ ಬೆಳೆ ಉತ್ಪಾದನೆ ಇಷ್ಟೊಂದು ಮಟ್ಟಿಗೆ ಕುಸಿಯಲು ಕಳೆದ ಕೆಲವು ತಿಂಗಳುಗಳಲ್ಲಿ ಆದ ಹವಾಮಾನ ಬದಲಾವಣೆಯ ಪ್ರಭಾವ ಮಹತ್ವದ್ದಾಗಿದೆ. ಇದು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದ್ದು, ಕಡಿಮೆ ಬೆಲೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.