30 ಕೇಜಿ ಚಿನ್ನ ಕಳ್ಳಸಾಗಣೆಗೆ ಟ್ವಿಸ್ಟ್; ಸ್ವಪ್ನಾ ಸುರೇಶ್- ಕೇರಳ ಸಿಎಂ ಕಚೇರಿ
ಜುಲೈ 5ನೇ ತಾರೀಕಿನಂದು ಕಸ್ಟಮ್ಸ್ ಅಧಿಕಾರಿಗಳು 15 ಕೋಟಿ ಮೌಲ್ಯದ 30 ಕೇಜಿ ಚಿನ್ನವನ್ನು ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುತ್ತಾರೆ. ಅದು ರಾಜತಾಂತ್ರಿಕ ಸರಕು ಆಗಿರುತ್ತದೆ. ಯುಎಇ ದೂತಾವಾಸ ಕಚೇರಿಯಲ್ಲಿನ ವ್ಯಕ್ತಿಯೊಬ್ಬರ ವಿಳಾಸಕ್ಕೆ ಬಂದಿರುತ್ತದೆ. ಈ ಸಂಬಂಧ ಯುಎಇ ದೂತಾವಾಸ ಕಚೇರಿಯಲ್ಲಿ ಕೆಲಸ ಮಾಡುವ ಸರಿತ್ ಕುಮಾರ್ ರನ್ನು ಬಂಧಿಸಲಾಗುತ್ತದೆ.
ಆತ ತನ್ನ ಮಾಜಿ ಸಹೋದ್ಯೋಗಿ ಸ್ವಪ್ನಾ ಸುರೇಶ್ ಹೆಸರು ಹೇಳುತ್ತಾನೆ. ಸದ್ಯಕ್ಕೆ ಆಕೆ ಕೇರಳ ಸ್ಟೇಟ್ ಇನ್ ಫರ್ಮೇಷನ್ ಟೆಕ್ನಾಲಜಿ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಲ್ಲಿ ಉದ್ಯೋಗ ಮಾಡುತ್ತಿರುವುದಾಗಿ ಹೇಳುತ್ತಾನೆ. ಇನ್ನೂ ಆಸಕ್ತಿಕರ ಸಂಗತಿ ಏನೆಂದರೆ, ಸ್ವಪ್ನಾ ಯುಎಇ ದೂತಾವಾಸ ಕಚೇರಿಯಲ್ಲಿ ಕೆಲಸ ಮಾಡುವಾಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜತೆ ತೆಗೆಸಿಕೊಂಡಿದ್ದ ಫೋಟೋ ಹರಿದಾಡುತ್ತದೆ.
ಕೊರೊನಾ ಆರ್ಥಿಕ ಬಿಕ್ಕಟ್ಟು: ತನಿಖಾ ತಂಡ ರಚಿಸಿದ ಯುರೋಪಿಯನ್ ಯೂನಿಯನ್
ಅಲ್ಲಿಗೆ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬರುತ್ತದೆ. ಅದರ ಬೆನ್ನಿಗೆ ರಾಜ್ಯ ಸರ್ಕಾರವು ಅವಳನ್ನು ಕೆಲಸದಿಂದ ತೆಗೆಯುತ್ತದೆ. ಸ್ವಪ್ನಾ ಸುರೇಶ್ ನೇಮಕದಲ್ಲಿ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ಎಂ. ಶಿವಶಂಕರ್ ಪಾತ್ರ ಇದೆ ಎಂಬ ಕಾರಣಕ್ಕೆ ಆ ಸ್ಥಾನಕ್ಕೆ ಮತ್ತೊಬ್ಬರ ನೇಮಕ ಆಗುತ್ತದೆ. ಅಂದ ಹಾಗೆ ಯಾರು ಈ ಸ್ವಪ್ನಾ ಸುರೇಶ್ ಎಂಬ ಪ್ರಶ್ನೆ ಕೇರಳ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಸದ್ದು ಮಾಡುತ್ತದೆ.
ಸ್ವಪ್ನಾ ಸುರೇಶ್ ಯಾರು?
ಒಂದು ಸಿನಿಮಾದಲ್ಲಿನ ಕಥೆಯಂತಿದೆ ಆಕೆ ಬದುಕು. ಆಕೆ ಹೆಸರು ಸ್ವಪ್ನಾ ಸುರೇಶ್. ಹೈ ಪ್ರೊಫೈಲ್ ಚಿನ್ನ ಕಳ್ಳ ಸಾಗಾಣಿಕೆಯ ಪ್ರಮುಖ ಆರೋಪಿ. ಸ್ವಪ್ನಾ ಸುರೇಶ್ ವೃತ್ತಿ ಬದುಕು ಗಮನಿಸಿದರೆ ಎಂಥವರಿಗೂ ಬೆರಗಾಗಬೇಕು. ಆಕೆ ಅಬುಧಾಬಿಯಿಂದ ಕೇರಳಕ್ಕೆ ವಾಪಸಾದವಳು, ತಿರುವನಂತಪುರಂನಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಶುರು ಮಾಡುತ್ತಾಳೆ. ಸ್ವಪ್ನಾಳ ತಾಯಿ ಇರುವಂಥ ನೆಯ್ಯತಿಂಕರದ ನಿವಾಸಿಗಳು ಹೇಳುವ ಪ್ರಕಾರ, 2010- 11ರಲ್ಲಿ ಅಬುಧಾಬಿಯಿಂದ ಕೇರಳಕ್ಕೆ ಬಂದವಳು ಆಕೆ. ಆ ನಂತರ ಸ್ವಪ್ನಾಳ ಜೀವನಶೈಲಿ ಬಗ್ಗೆ ಹೇಳುವವರು ಸಿಗುತ್ತಾರೆಯೇ ವಿನಾ ಆಕೆಯದು ಏನು ಚಟುವಟಿಕೆ ಇತ್ತು ಎಂಬುದು ಯಾರಿಗೂ ಮಾಹಿತಿ ಇಲ್ಲ. ಸ್ವಪ್ನಾಳ ಬಾಲ್ಯ ಕಳೆಯುವುದು ಅಬುಧಾಬಿಯಲ್ಲಿ. ಅಲ್ಲಿ ಆಕೆಯ ತಂದೆ ಕೆಲಸ ಮಾಡುತ್ತಿರುತ್ತಾರೆ. ಅಬುಧಾಬಿ ವಿಮಾನ ನಿಲ್ದಾಣದ ಪ್ರಯಾಣಿಕರ ವಿಭಾಗದಲ್ಲಿ ಆಕೆ ಕೆಲ ಸಮಯ ಕೆಲಸ ಮಾಡುತ್ತಾಳೆ. ಆ ನಂತರ ಭಾರತಕ್ಕೆ ವಾಪಸಾಗುತ್ತಾಳೆ. 2011ರಲ್ಲಿ ಮಹಾರಾಷ್ಟ್ರದ ದಾದಾ ಸಾಹೇಬ್ ಅಂಬೇಡ್ಕರ್ ವಿ.ವಿಯಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆಯುತ್ತಾಳೆ. ಅಲ್ಲಿಂದ ಆಚೆಗೆ ಆಕೆಯ ಸಂಪರ್ಕ ಬೆಳೆಯುತ್ತಾ ಸಾಗುತ್ತದೆ.
ಎಫ್ ಐಆರ್ ದಾಖಲಿಸಲು ಹೈಕೋರ್ಟ್ ನಿಂದ ಸೂಚನೆ
ತಿರುವನಂತಪುರಂ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುವಂಥ ಏರ್ ಇಂಡಿಯಾದ SATSಗೆ ಆಕೆ ಸೇರುತ್ತಾಳೆ. ಕಂಪೆನಿಯಲ್ಲಿ ಸರಣಿಯಾಗಿ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬರುತ್ತವೆ. ಆ ವೇಳೆ ಆಕೆ ಕೆಲಸ ಬಿಡಬೇಕಾಗುತ್ತದೆ. AISATS ಹಾಗೂ ಏರ್ ಇಂಡಿಯಾ ಅಧಿಕಾರಿಗಳನ್ನು ಕೆಲಸದಿಂದ ತೆಗೆಯಲಾಗುತ್ತದೆ. ಸಂತ್ರಸ್ತರ ಪೈಕಿ ಒಬ್ಬರು ದೂರುದಾರರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುತ್ತಾರೆ ಹಾಗೂ ದಾಖಲೆ ನಕಲು ಮಾಡಿದ್ದಕ್ಕೆ, ನಕಲು ದೂರು ನೀಡಿದ ಕಾರಣಕ್ಕೆ ಹೈ ಕೋರ್ಟ್ ಸೂಚನೆ ಮೇರೆಗೆ ಕ್ರೈಂ ಬ್ರ್ಯಾಂಚ್ ನಿಂದ ಸ್ವಪ್ನಾ ವಿರುದ್ಧ ಎಫ್ ಐಆರ್ ಆಗುತ್ತದೆ. ಏರ್ ಪೋರ್ಟ್ ನಿಂದ ಕೆಲಸ ಬಿಟ್ಟ ತಕ್ಷಣ ಸ್ವಪ್ನಾ ಯುಎಇ ದೂತಾವಾಸ ಕಚೇರಿಯಲ್ಲಿ ಮುಖ್ಯ ಹುದ್ದೆಗೆ ಸೇರುತ್ತಾಳೆ. ಆಕೆಯ ವೃತ್ತಿಪರ ನಡವಳಿಕೆ ಸರಿಯಿಲ್ಲ ಎಂಬ ಕಾರಣಕ್ಕೆ ಕೆಲ ವರ್ಷದ ನಂತರ ಕೆಲಸದಿಂದ ತೆಗೆಯಲಾಗುತ್ತದೆ.
ಮುಖ್ಯಮಂತ್ರಿ ಕಚೇರಿ ತನಕ ತನಿಖೆಯ ಜಾಡು
ಆ ನಂತರ ಆಕೆ ಐ.ಟಿ. ಇಲಾಖೆಗೆ ನೇಮಕಾತಿ ಸಂಸ್ಥೆಯೊಂದರ ಮೂಲಕ ಸೇರುತ್ತಾಳೆ. ಕೇರಳ ಸ್ಟೇಟ್ ಐಟಿ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಕೆಎಸ್ ಐಟಿಎಲ್) ಸ್ಪೇಸ್ ಪಾರ್ಕ್ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಘಟಕಕ್ಕೆ ವರ್ಕ್ ಸ್ಟೇಷನ್ ನೀಡುತ್ತದೆ. ಅಲ್ಲಿ ಆಕೆ ಆಪರೇಷನ್ ಮ್ಯಾನೇಜರ್ ಆಗುತ್ತಾಳೆ. ಐಸಿಟಿ ಅಕಾಡೆಮಿ ಸಿಇಒ ಸಂತೋಷ್ ಕುರುಪ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾಳೆ ಎನ್ನುತ್ತವೆ ಮೂಲಗಳು. ನೇಮಕಾತಿ ಸಂಸ್ಥೆಯ ಹಿನ್ನೆಲೆ ಪರಿಶೀಲನೆ ವೇಳೆಯಲ್ಲಿ ಸ್ವಪ್ನಾ ವಿರುದ್ಧ ಯಾವ ಪ್ರಕರಣವೂ ಕಂಡುಬರುವುದಿಲ್ಲ. ಆಕೆಯ ಕಾಂಟ್ರ್ಯಾಕ್ಟ್ ಕೊನೆ ಆಗುವ ತನಕ, ಅಂದರೆ ಸೋಮವಾರದವರೆಗೆ ಆಕೆ ಕೆಲಸ ಮಾಡಿದ್ದಾಳೆ. ಯುಎಇ ಹಾಗೂ ಭಾರತದ ಮಧ್ಯದ ರಾಜತಾಂತ್ರಿಕ ಸಂಬಂಧದ ಮೇಲೆ ನೇರ ಪರಿಣಾಮ ಬೀರಬಹುದಾದ ಈ ಪ್ರಕರಣದ ಆಳ- ಅಗಲ ಇನ್ನೂ ಎಷ್ಟಿದೆಯೋ ಗೊತ್ತಾಗಬೇಕಿದೆ.