ವಾಷಿಂಗ್ಟನ್, ಅ. 28: ಟ್ವಿಟ್ಟರ್ಗೆ ಎಲಾನ್ ಮಸ್ಕ್ನ ಕೊಂಡಿ ಸೇರುತ್ತಾ ಎಂದು ಕಳೆದ ಕೆಲ ತಿಂಗಳಿಂದ ಇದ್ದ ಸಸ್ಪೆನ್ಸ್ಗೆ ಕೊನೆಗೂ ತೆರೆ ಬಿದ್ದಿದೆ. ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ಇಲಾನ್ ಮಸ್ಕ್ ಪೂರ್ಣಗೊಳಿಸಿದ್ದಾರೆ. ತಾನೇ ಟ್ವಿಟ್ಟರ್ ಅಧಿಪತಿಯಾಗಿರುವುದಾಗಿ ಘೋಷಿಸಿಕೊಂಡಿರುವ ಅವರು 'ಟ್ವಿಟ್ಟರ್ ಹಕ್ಕಿಯ ಬಿಡುಗಡೆ' ಮಾಡಿರುವುದಾಗಿಯೂ ಹೇಳಿದ್ದಾರೆ.
ಟ್ವಿಟ್ಟರ್ ಅನ್ನು ಖರೀದಿಸುತ್ತೇನೆಂದು ಎಲಾನ್ ಮಸ್ಕ್ ಏಪ್ರಿಲ್ ತಿಂಗಳಲ್ಲಿ ಹೇಳಿದಾಗ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೆ ಪೂರಕವೆಂಬಂತೆ ಮಸ್ಕ್ ಅವರು ಟ್ವಿಟ್ಟರ್ ಖರೀದಿ ಯತ್ನ ಕೈಬಿಡುವುದಾಗಿ ಒಮ್ಮೆ ಹೇಳಿದ್ದರು. ಆದರೆ, ಅಕ್ಟೋಬರ್ 4ರಂದು ಮಸ್ಕ್ ಮತ್ತೊಮ್ಮೆ ಟ್ವಿಟ್ಟರ್ ಮಾಡುವುದಾಗಿ ಫೈಲಿಂಗ್ ಸಲ್ಲಿಸಿದ್ದರು. ಈ ಬಾರಿ ಅವರು ಗಂಭೀರವಾಗಿದ್ದರು. ಅಕ್ಟೋಬರ್ 28ರೊಳಗೆ ಖರೀದಿ ಮುಗಿಸಬೇಕೆಂದು ಕೋರ್ಟ್ನಿಂದ ಸೂಚನೆಯೂ ಇತ್ತು. ಒಂದು ದಿನ ಮೊದಲೇ ಅವರು ಆ ಕೆಲಸ ಮಾಡಿ ಮುಗಿಸಿದ್ದಾರೆ.
ಟ್ವಿಟ್ಟರ್ ಮತ್ತು ಮಸ್ಕ್
ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಗೆ ಯೋಚಿಸುವ ಮುಂಚೆ ಒಬ್ಬ ಸೆಲಬ್ರಿಟಿ ಟ್ವೀಟಿಗ ಅಷ್ಟೇ ಆಗಿದ್ದರು. ಈ ವೇಳೆಯೇ ಅವರು ಟ್ವಿಟ್ಟರ್ನ ರಾಜಕೀಯ ಧೋರಣೆ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದುಂಟು. ಡೊನಾಲ್ಡ್ ಟ್ರಂಪ್ ಮೊದಲಾದವರ ಖಾತೆಗಳನ್ನು ಟ್ವಿಟ್ಟರ್ ಬಂದ್ ಮಾಡಿದ್ದು ಮಸ್ಕ್ಗೆ ಇರಿಸುಮುರುಸು ತಂದಿತ್ತೆನ್ನಲಾಗಿದೆ. ಟ್ವಿಟ್ಟರ್ನಲ್ಲಿ ಅಭಿಪ್ರಾಯಸ್ವಾತಂತ್ರ್ಯ ಇರಬೇಕಾದ ರೀತಿಯಲ್ಲಿ ಇಲ್ಲ. ಎಡಪಂಥೀಯರ ಪರ ಪಕ್ಷಪಾತಿತನದ ನಿಲುವು ಹೊಂದಿದೆ ಎಂದು ಮಸ್ಕ್ ಗುಟುರು ಹಾಕಿದ್ದುಂಟು. ಅದೇ ಭರದಲ್ಲಿ ಅವರು ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದು. ತಾನು ಟ್ವಿಟ್ಟರ್ ಖರೀದಿಸಿದರೆ ಮೊದಲು ಮ್ಯಾನೇಜ್ಮೆಂಟ್ ಬದಲಿಸುತ್ತೇನೆ ಎಂದು ಅದಾಗಲೇ ಘೋಷಿಸಿಬಿಟ್ಟಿದ್ದರು.
ಅತ್ತ, ಟ್ವಿಟ್ಟರ್ನ ಸಿಇಒ ಸೇರಿದಂತೆ ಬಹುತೇಕ ಉದ್ಯೋಗಿಗಳಿಗೆ ಎಲಾನ್ ಮಸ್ಕ್ ಬರುವುದು ಸುತಾರಾಂ ಇಷ್ಟವಿರಲಿಲ್ಲ. ಇಲಾನ್ ಮಸ್ಕ್ ಬಂದರೆ ಟ್ವಿಟ್ಟರ್ ಟ್ವಿಟ್ಟರ್ ಆಗಿ ಉಳಿಯುವುದಿಲ್ಲ. ನಾನಂತೂ ಇರೋದಿಲ್ಲ ಎಂಬಂತೆ ಸಿಇಒ ಪರಾಗ್ ಅಗರ್ವಾಲ್ ಶುರುವಿನಲ್ಲೇ ಹೇಳಿಬಿಟ್ಟಿದ್ದರು. ಡೊನಾಲ್ಡ್ ಟ್ರಂಪ್ರ ಟ್ವಿಟ್ಟರ್ ಖಾತೆ ರದ್ದಾಗಲು ಕಾರಣವಾದ ಟ್ವಿಟ್ಟರ್ನ ಕಾನೂನು ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆಯೂ ಮಸ್ಕ್ ಜೊತೆ ಕೆಲಸ ಮಾಡುವ ಮನಸ್ಥಿತಿಯಲ್ಲಿರಲಿಲ್ಲ.
ಇದೀಗ ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಮೊದಲ ಕೆಲಸವೆಂದರೆ ಸಿಇಒ ಪರಾಗ್ ಅಗರ್ವಾಲ್, ಕಾನೂನು ಮುಖ್ಯಸ್ಥೆ ವಿಜಯಾ ಗದ್ದೆ ಸೇರಿದಂತೆ ಟ್ವಿಟ್ಟರ್ನ ಟಾಪ್ ಎಕ್ಸಿಕ್ಯೂಟಿವ್ಗಳನ್ನು ಕೆಲಸದಿಂದ ವಜಾಗೊಳಿಸಿದ್ದು. ಇದು ನಿರೀಕ್ಷಿತವೇ ಆಗಿತ್ತು. ಮಸ್ಕ್ ಆಗಮನದವರೆಗೂ ಇವರು ರಾಜೀನಾಮೆ ನೀಡದೇ ಯಾಕೆ ಕಾದಿದ್ದರು ಎಂಬುದು ಕುತೂಹಲ.
ಪರಾಗ್ ಅಗರ್ವಾಲ್ಗೆ ದಂಡಿ ದುಡ್ಡು
ಭಾರತ ಮೂಲದ ಪರಾಗ್ ಅಗರ್ವಾಲ್ 2021 ನವೆಂಬರ್ನಲ್ಲಿ ಟ್ವಿಟ್ಟರ್ ಸಿಇಒ ಆಗಿ ನೇಮಕವಾಗಿದ್ದರು. ಒಂದು ವರ್ಷ ಪೂರೈಸುವ ಮುನ್ನವೇ ಕೆಲಸ ಹೋದರೂ ಸಾಕಷ್ಟು ಪರಿಹಾರದ ಮೊತ್ತವನ್ನು ಅವರು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯುಸಿನೆಸ್ ಇನ್ಸೈಡರ್ ವರದಿ ಪ್ರಕಾರ ಪರಾಗ್ ಅಗರ್ವಾಲ್ 38.7 ಮಿಲಿಯನ್ ಡಾಲರ್ (ಸುಮಾರು 319 ಕೋಟಿ ರೂಪಾಯಿ) ಹಣವನ್ನು ಕಾಂಪೆನ್ಸೇಶನ್ ಆಗಿ ಪಡೆದುಕೊಂಡಿದ್ದಾರೆ.
ಟ್ವಿಟ್ಟರ್ನ ಲೀಗಲ್ ವಿಬಾಗದ ಮುಖ್ಯಸ್ಥೆಯಾಗಿದ್ದ ಆಂಧ್ರ ಮೂಲದ ವಿಜಯಾ ಗದ್ದೆ 12.5 ಮಿಲಿಯನ್ ಡಾಲರ್ (104 ಕೋಟಿ ರೂಪಾಯಿ), ಸಿಎಫ್ಒ ನೆಡ್ ಸೆಗಲ್ 25.4 ಮಿಲಿಯನ್ ಡಾಲರ್ (209 ಕೋಟಿ ರೂಪಾಯಿ), ಚೀಫ್ ಕಸ್ಟಮರ್ ಆಫೀಸರ್ ಸಾರಾ ಪರ್ಸೋನೆಟ್ 11.2 ಮಿಲಿಯನ್ ಡಾಲರ್ (92 ಕೋಟಿ ರೂಪಾಯಿ) ಹಣ ಪಡೆದು ನಿರ್ಗಮಿಸುತ್ತಿದ್ದಾರೆ.
ಟ್ವಿಟ್ಟರ್ನಲ್ಲಿ ಮುಂದೇನು?
ಟ್ವಿಟ್ಟರ್ ಖರೀದಿಸಲು ಇಲಾನ್ ಮಸ್ಕ್ ಬ್ಯಾಂಕ್ ಸಾಲಗಳ ಮೂಲಕ ಹಣದ ವ್ಯವಸ್ಥೆ ಮಾಡಿದ್ದಾರೆ. ಹಿಂದೆ ಯಾವತ್ತೂ ಲಾಭ ತೋರಿಸದ ಟ್ವಿಟ್ಟರ್ಗೆ ಆದಾಯ ಮಾರ್ಗ ಹುಡುಕುವುದು ಮಸ್ಕ್ ಮುಂದಿರುವ ಸವಾಲು. ಟ್ವಿಟ್ಟರ್ನ ಈಗಿನ ಸಿಬ್ಬಂದಿ ಪ್ರಮಾಣವನ್ನು ಕಡಿಮೆ ಮಾಡುವುದು ಒಂದು ಹೆಜ್ಜೆಯಾಗಬಹುದು.
ಹಣ ಮಾಡಲು ಟ್ವಿಟ್ಟರ್ ಖರೀದಿಸಿಲ್ಲ ಎಂದು ಮಸ್ಕ್ ಹೇಳಿಕೊಂಡರೂ ಕಂಪನಿ ಸ್ವಂತವಾಗಿ ನಿಲ್ಲಲು ಆದಾಯದ ಅಗತ್ಯತೆಯಂತೂ ಇದೆ. ಕಾರ್ಪೊರೇಟ್ ಕಂಪನಿಗಳು ಮತ್ತು ಸರ್ಕಾರಗಳಿಗೆ ಟ್ವಿಟ್ಟರ್ ಬಳಕೆಗೆ ಇಂತಿಷ್ಟು ಶುಲ್ಕ ವಿಧಿಸುವ ಇರಾದೆಯಲ್ಲಿ ಮಸ್ಕ್ ಇದ್ದಾರೆನ್ನಲಾಗಿದೆ. ಕಂಪನಿಗಳು ಮತ್ತು ಸರ್ಕಾರಗಳಿಗೆ ವಿಶೇಷವಾದ ಟಿಕ್ಗಳನ್ನು ನೀಡಿ ಶುಲ್ಕ ಕಟ್ಟಿಸಿಕೊಳ್ಳಬಹುದು.
ಎಕ್ಸ್ ಅವತಾರ
ಇಲಾನ್ ಮಸ್ಕ್ ಕುತೂಹಲ ಎನಿಸುವ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ. ಟ್ವಿಟ್ಟರ್ ಅನ್ನು "ಎಕ್ಸ್, ದಿ ಎವೆರಿತಿಂಗ್ ಆ್ಯಪ್" ಆಗಿ ಬದಲಾಯಿಸುತ್ತೇನೆ ಎಂದಿದ್ದಾರೆ. ಎಕ್ಸ್ ಎಂದರೆ ಏನು? ಎಲ್ಲವೂ ಇರುವ ಸಕಲಾಂಗಗಳ ತಾಣವಾಗಿ ಟ್ವಿಟ್ಟರ್ ಅನ್ನು ಮಾರ್ಪಡಿಸುವ ಇರಾದೆಯಲ್ಲಿದ್ಧಾರಾ ಮಸ್ಕ್?
ಕೆಲವರ ಪ್ರಕಾರ ಚೀನಾದ ವೀಚ್ಯಾಟ್ ಆ್ಯಪ್ ಮಾದರಿಯು ಮಸ್ಕ್ ಮನಸಿನಲ್ಲಿದೆ. ವಾಟ್ಸಾಪ್ ರೀತಿ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿ ಹುಟ್ಟಿದ ವೀಚ್ಯಾಟ್ ಈಗ ಪೇಮೆಂಟ್, ಶಾಪಿಂಗ್, ಗೇಮಿಂಗ್ ಇತ್ಯಾದಿ ಹಲವಾರು ಕಾರ್ಯಗಳನ್ನು ಮಾಡಬಲ್ಲ ವೇದಿಕೆಯಾಗಿ ರೂಪುಗೊಂಡಿದೆ. ಒಂದೇ ಆ್ಯಪ್ನಲ್ಲಿ ನಿಮ್ಮಿಡೀ ಪ್ರಪಂಚವೇ ಅಡಗಿ ಕೂತಿರುತ್ತದೆ.
"ನೀವು ಚೀನಾದಲ್ಲಿದ್ದರೆ ವೀಚ್ಯಾಟ್ನಲ್ಲಿ ಇದ್ದೀರಿ ಎಂದೇ ಅರ್ಥ. ಟ್ವಿಟ್ಟರ್ನಲ್ಲಿ ಈ ರೀತಿಯ ವ್ಯವಸ್ಥೆ ರೂಪಿಸಬಲ್ಲೆವೆಂದರೆ ಅದೇ ದೊಡ್ಡ ಯಶಸ್ಸು" ಎಂದು ಜೂನ್ ತಿಂಗಳಲ್ಲಿ ಟ್ವಿಟ್ಟರ್ನ ಉದ್ಯೋಗಿಗಳೊಂದಿಗಿನ ಸಂವಾದವೊಂದರ ಸಂದರ್ಭದಲ್ಲಿ ಇಲಾನ್ ಮಸ್ಕ್ ಹೇಳಿದ್ದನ್ನು ಈಗ ಸ್ಮರಿಸಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications