ದೆಹಲಿ ಮೆಟ್ರೋದಲ್ಲಿ ಸಿಐಎಸ್ ಎಫ್ ಸಿಬ್ಬಂದಿಯು ಹತ್ತೊಂಬತ್ತು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತ್ ಮೂಲದ ಟ್ರಾನ್ಸ್ ಪೋರ್ಟ್ ವ್ಯವಹಾರಸ್ಥರ ಪರವಾಗಿ ಐವತ್ತು ಲಕ್ಷ ರುಪಾಯಿ ನಗದು ಸಾಗಿಸುತ್ತಿದ್ದ ಆರೋಪದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಬಾರಾಖಂಬ ನಿಲ್ದಾಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ದುಡ್ಡಿದ್ದ ಬ್ಯಾಗ್ ನೊಂದಿಗೆ ಠಾಕೂರ್ ದಿಲೀಪ್ ರೈಲು ಏರಿದ್ದ.
ಐನೂರು, ಇನ್ನೂರು ಮತ್ತು ನೂರು ರುಪಾಯಿ ಮುಖ ಬೆಲೆಯ ನೋಟುಗಳಿದ್ದ ಐವತ್ತು ಲಕ್ಷ ರುಪಾಯಿ ನಗದು ಇದ್ದ ಬ್ಯಾಗ್ ಅನ್ನು ಸಿಐಎಸ್ ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆತ ಅಷ್ಟು ದೊಡ್ಡ ಮೊತ್ತ ತೆಗೆದುಕೊಂಡು ಹೋಗುತ್ತಿದ್ದುದು ಏಕೆ ಎಂಬುದನ್ನು ತಿಳಿಸಿಲ್ಲ. ಆತ ಕೆಲಸ ಮಾಡುತ್ತಿದ್ದ ಮಾಲೀಕರಿಗೆ ಸಮನ್ಸ್ ನೀಡಲಾಗಿದೆ.
ಇನ್ನು ಮಾಲೀಕರ ಪರವಾಗಿ ಮ್ಯಾನೇಜರ್ ಜಲ್ಪೇಶ್ ಮೆಟ್ರೋ ನಿಲ್ದಾಣಕ್ಕೆ ಬಂದು, ಮಾಲೀಕರ ಸೂಚನೆ ಮೇರೆಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ನಗದು ವರ್ಗಾವಣೆಗೆ ದಿಲೀಪ್ ತೆರಳಿದ್ದ ಎಂದು ತಿಳಿಸಿರುವುದಾಗಿ ಸಿಐಎಸ್ ಎಫ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇಷ್ಟು ದೊಡ್ಡ ಮೊತ್ತದ ನಗದು ತೆಗೆದುಕೊಂಡು ಹೋಗಲು ಸೂಕ್ತ ಕಾರಣ, ದಾಖಲೆ ಇರಲಿಲ್ಲ. ಆದ್ದರಿಂದ ಈ ಹಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಿದ್ದು, ಮುಂದಿನ ತನಿಖೆ ನಡೆಯಲಿದೆ.
2017ರ ನಂತರ ಒಂದೇ ಸಲಕ್ಕೆ ಎರಡು ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ ಎಂದು ಸರ್ಕಾರದಿಂದ ನಿಯಮ ಮಾಡಲಾಗಿದೆ. ಕಪ್ಪು ಹಣ ನಿಯಂತ್ರಣಕ್ಕಾಗಿ ಈ ಕಾನೂನು ಜಾರಿಗೆ ತರಲಾಗಿದೆ.


Click it and Unblock the Notifications