ಫೆಬ್ರವರಿ 1ರಿಂದ BSNL ಸಂಸ್ಥೆ ಅರ್ಧಕರ್ಧ ಖಾಲಿ: ಗ್ರಾಹಕರಿಗೆ ಪರದಾಟ ತಪ್ಪಿದ್ದಲ್ಲ
ಸರ್ಕಾರಿ ಸ್ವಾಮ್ಯದ BSNL ಸಂಸ್ಥೆ ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿ ಪ್ರಕಟಿಸಿದ ಕೂಡಲೇ ಅದಕ್ಕೆ ಸಿಬ್ಬಂದಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
"ಬಿಎಸ್ಎನ್ಎಲ್ ಸಂಸ್ಥೆಯನ್ನು ದೇಶದ ಅಗ್ರಗಣ್ಯ ಕಂಪೆನಿಯನ್ನಾಗಿಸುವುದೇ ನನ್ನ ಪ್ರಮುಖ ಗುರಿಯಾಗಿದೆ" ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಙಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು. ಆದರೆ, ಅದಕ್ಕೆ ಮುನ್ನವೇ ಸಿಬ್ಬಂದಿಗಳು ವಿಆರ್ ಎಸ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.
ಬಹುಷಃ ಕೇಂದ್ರ ಸರಕಾರ ಈ ಮಟ್ಟಿನಲ್ಲಿ ಸಿಬ್ಬಂದಿಗಳು ಸ್ವಯಂ ನಿವೃತ್ತಿ ಯೋಜನೆಯನ್ನು ಆಯ್ಕೆಮಾಡಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿ ಇರಲಿಲ್ಲವೋ ಏನೋ? ಈಗ, ಬಿಎಸ್ಎನ್ಎಲ್ ಸಂಸ್ಥೆಗೆ ಸಿಬ್ಬಂದಿಗಳ ಕೊರತೆ ಕಾಡಲಾರಂಭಿಸಿದೆ.
BSNL ಸಿಬ್ಬಂದಿಗೆ ವಿಆರ್ ಎಸ್ ಸ್ಕೀಂ ಶುರು; ಲೆಕ್ಕಾಚಾರ ಹೀಗೆ...
ಕರ್ನಾಟಕದ ಅಂದಾಜು ಸುಮಾರು ಏಳು ಸಾವಿರ ಸಿಬ್ಬಂದಿಗಳೂ ಸೇರಿ, ಸುಮಾರು ತೊಂಬತ್ತೆರಡು ಸಾವಿರ ಉದ್ಯೋಗಿಗಳಿಗೆ ಸಂಸ್ಥೆಯಲ್ಲಿ ಇಂದು ಕೊನೆಯ ದಿನ. ಕೇಂದ್ರ ಸರಕಾರ ವಿಆರ್ ಎಸ್ ತೆಗೆದುಕೊಳ್ಳುವರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಪ್ರಕಟಿಸಿತ್ತು.
ಒಂದೂ ಮುಕ್ಕಾಲು ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಬಿಎಸ್ಎನ್ಎಲ್
ಸುಮಾರು ಒಂದೂ ಮುಕ್ಕಾಲು ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಬಿಎಸ್ಎನ್ಎಲ್ ಸಂಸ್ಥೆ ನಷ್ಟದ ದಾರಿಯಲ್ಲಿ ಸಾಗುತ್ತಿರುವುದು ಗೊತ್ತಿದ್ದ ವಿಚಾರ. ಭಾರತದ ಟೆಲಿಕಾಂ ಪ್ರಪಂಚದಲ್ಲಿ ಏಕಮೇಮ ಚಕ್ರಾಧಿಪತಿ ರೀತಿಯಲ್ಲಿದ್ದ ಈ ಸಂಸ್ಥೆ, ಬರಬರುತ್ತಾ ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡಲಾಗದೇ ಹಿನ್ನಡೆ ಎದುರಿಸಲಾರಂಭಿಸಿತು.
ಫೆಬ್ರವರಿ ಒಂದರಿಂದ ತೀವ್ರ ಸಿಬ್ಬಂದಿಯ ಕೊರತೆ
ಸಂಸ್ಥೆಯ ಒಟ್ಟು ಸಿಬ್ಬಂದಿಗಳ ಪೈಕಿ ತೊಂಬತ್ತು ಸಾವಿರ ಸಿಬ್ಬಂದಿಗಳು ಸ್ವಯಂ ನಿವೃತ್ತಿ ಯೋಜನೆಯಡಿಯಲ್ಲಿ ಜನವರಿ 31, 2020ರಿಂದ ನಿವೃತ್ತಿ ಹೊಂದಲಿದ್ದಾರೆ. ಹಾಗಾಗಿ, ಫೆಬ್ರವರಿ ಒಂದರಿಂದ ತೀವ್ರ ಸಿಬ್ಬಂದಿಯ ಕೊರತೆ ಕಾಡಲಿದೆ. ಇದರ ಎಫೆಕ್ಟ್ ನೇರವಾಗಿ ಗ್ರಾಹಕರಿಗೆ ಬೀಳುವುದು ಸಹಜ. ಇದು, ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಕೇಂದ್ರದ ಪ್ರಯತ್ನಕ್ಕೂ ಹಿನ್ನಡೆಯಾಗಬಹುದು.
BSNL ಸಂಸ್ಥೆಯನ್ನು ನಂಬರ್ 1 ಕಂಪೆನಿಯಾಗಿಸುವುದೇ ನಮ್ಮ ಗುರಿ: ರವಿಶಂಕರ್ ಪ್ರಸಾದ್
ಸಚಿವ ರವಿಶಂಕರ್ ಪ್ರಸಾದ್
''ಬಿಎಸ್ಎನ್ಎಲ್ ಕೇವಲ ಮೊಬೈಲ್ ಅಥವಾ ಟೆಲಿಫೋನ್ ಸೇವೆ ನೀಡುವ ಕಂಪೆನಿಯಲ್ಲ. ವಿವಿಧ ಯೋಜನೆಗಳಲ್ಲಿ, ಕಾರ್ಯಾಚರಣೆಗಳಲ್ಲಿ ಸರಕಾರ ಅಳವಡಿಸಿಕೊಳ್ಳುವ ತಂತ್ರಗಾರಿಕೆಯ ಬೆನ್ನಲುಬು'' ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದರು. "ಬಿಎಸ್ಎನ್ಎಲ್ ದೇಶದ ಆಸ್ತಿಯಾಗಿದ್ದು, ತಮಿಳುನಾಡಿನಲ್ಲಿ ಜನರು ಪ್ರವಾಹದಿಂದ ಬಳಲುತ್ತಿದ್ದಾಗ ಅಂತಿಮವಾಗಿ ರಕ್ಷಣೆಗೆ ಬಂದಿದ್ದು ಬಿಎಸ್ಎನ್ಎಲ್" ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.
ಒಂದು ಲಕ್ಷ BSNL ಸಿಬ್ಬಂದಿಗಳಿಗೆ ಸಂಸ್ಥೆಯಲ್ಲಿ ಇಂದು ವಿದಾಯದ ದಿನ
"ಒಟ್ಟು 92,700 ಉದ್ಯೋಗಿಗಳು ಸಿಬ್ಬಂದಿಗಳು ಸ್ವಯಂ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದರಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ 78,300 ಮತ್ತು ಎಂಟಿಎನ್ಎಲ್ ಸಂಸ್ಥೆಯ 14,378 ಉದ್ಯೋಗಿಗಳು ಸೇರಿದ್ದಾರೆ. ಈಗಾಗಲೇ ಪೂರ್ಣಗೊಳಿಸಿರುವ ಸೇವೆಯ ವರ್ಷಗಳಿಗೆ ಒಂದು ವರ್ಷಕ್ಕೆ 35 ದಿನದಂತೆ ಹಾಗೂ ಬಾಕಿ ಇರುವ ಸೇವೆಗೆ ವರ್ಷಕ್ಕೆ 25 ದಿನದಂತೆ ವೇತನ ಲೆಕ್ಕ ಹಾಕಿ ಎಕ್ಸ್ ಗ್ರೇಷಿಯಾ ನೀಡಲಾಗುತ್ತದೆ" ಎಂದು ಸಂಸ್ಥೆಯ ಅಧ್ಯಕ್ಷ ಸುನಿಲ್ ಕುಮಾರ್, ಪಿಟಿಐಗೆ ತಿಳಿಸಿದ್ದಾರೆ.