ಮುಂಬೈ ವಿಮಾನ ನಿಲ್ದಾಣ ಹಗರಣ: ಜಿವಿಕೆ ಗ್ರುಪ್ ಮೇಲೆ ಸಿಬಿಐ ಪ್ರಕರಣ
ಮುಂಬೈ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (MIAL) ಹಗರಣಕ್ಕೆ ಸಂಬಂಧಿಸಿದಂತೆ ಜಿವಿಕೆ ಗ್ರೂಪ್ ಕಂಪೆನಿ ಅಧ್ಯಕ್ಷರಾದ ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಮತ್ತು ಅವರ ಮಗ ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಸಂಜಯ್ ರೆಡ್ಡಿ ಅವರ ಮೇಲೆ ಬುಧವಾರ ಸಿಬಿಐ ಪ್ರಕರಣ ದಾಖಲಿಸಿದೆ.
ಜಿವಿಕೆ ಸಮೂಹದ ಪ್ರವರ್ತಕರು ತಮ್ಮ ಕಂಪನಿಗಳಿಗೆ ಹಣಕಾಸು ಒದಗಿಸಲು MIAL ನ ಮೀಸಲು ಹಣ 395 ಕೋಟಿ ರುಪಾಯಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಯುರೋಪ್ ದೇಶಗಳಲ್ಲಿ ಪಾಕ್ (PIA) ವಿಮಾನ ಹಾರಾಟ ಅಮಾನತು
ಮುಂಬೈ ವಿಮಾನ ನಿಲ್ದಾಣದ ನವೀಕರಣ ಮತ್ತು ನಿರ್ವಹಣೆಗಾಗಿ MIAL ಜಿವಿಕೆ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜೊತೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಜಂಟಿ ಸಹಭಾಗಿತ್ವ ರೂಪಿಸಿತ್ತು. ಏಪ್ರಿಲ್ 4, 2006 ರಂದು MIAL ಜೊತೆ ಮುಂಬೈ ವಿಮಾನ ನಿಲ್ದಾಣದ ಆಧುನೀಕರಣ, ನಿರ್ವಹಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿತ್ತು.
MIAL ನಲ್ಲಿ ಜಿವಿಕೆ ಸಮೂಹದ ಪ್ರವರ್ತಕರು ಎಎಐನ ಅಧಿಕಾರಿಗಳೊಂದಿಗೆ ವಿವಿಧ ಮಾರ್ಗಗಳನ್ನು ಬಳಸಿಕೊಂಡು ಹಣವನ್ನು ವಂಚಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 395 ಕೋಟಿ ರುಪಾಯಿ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.