ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ಪಾದನೆ ಖರ್ಚನ್ನು ನಿಭಾಯಿಸುವುದಕ್ಕೆ ರೈತರಿಗೆ 1.20 ಲಕ್ಷ ಕೋಟಿ ಬೆಳೆ ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ನಬಾರ್ಡ್ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಕೃಷಿ ವಲಯವನ್ನು ಬೆಂಬಲಿಸುವ ಉದ್ದೇಶದಿಂದ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ ಮೆಂಟ್ (ನಬಾರ್ಡ್) ಈ ಘೋಷಣೆ ಮಾಡಿದೆ.
ನಬಾರ್ಡ್ ನಿಂದ ವಾರ್ಷಿಕವಾಗಿ 90 ಸಾವಿರ ಕೋಟಿ ರುಪಾಯಿ ಬೆಳೆ ಸಾಲವನ್ನು ವಿನಾಯಿತಿ ಬಡಿ ದರದಲ್ಲಿ ವಿತರಿಸಲಾಗುತ್ತದೆ. "ಈ ಹಣಕಾಸು ವರ್ಷದಲ್ಲಿ ಸಾಲದ ಪ್ರಮಾಣವನ್ನು 1.20 ಲಕ್ಷ ಕೋಟಿ ರುಪಾಯಿಗೆ ವಿಸ್ತರಿಸಲಾಗಿದೆ. ಈಗಾಗಲೇ 40 ಸಾವಿರ ಕೋಟಿ ರುಪಾಯಿ ವಿತರಿಸಲಾಗಿದೆ" ಎಂದು ನಬಾರ್ಡ್ ಅಧ್ಯಕ್ಷ ಜಿ.ಆರ್. ಚಿಂತಲ ಹೇಳಿದ್ದಾರೆ.
ಸಿಐಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕೃಷಿ ವಲಯದ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆ ಆಗಿದೆ. ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ ಒಂದು ಲಕ್ಷ ಕೋಟಿ ರುಪಾಯಿಯ ಕೃಷಿ ಮೂಲಸೌಕರ್ಯ ನಿಧಿ ಮೂಲಕ ಕೃಷಿ ವಲಯ ಮೂಲಸೌಕರ್ಯಕ್ಕೆ ವೇಗ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ 10 ಸಾವಿರ ಕೋಟಿ ಈ ಹಣಕಾಸು ವರ್ಷ ಹಾಗೂ 30 ಸಾವಿರ ಕೋಟಿ ಮುಂದಿನ ಮೂರು ವರ್ಷಕ್ಕೆ ಮೀಸಲಾಗುತ್ತದೆ ಎಂದು ನಬಾರ್ಡ್ ಹೇಳಿಕೆ ನೀಡಿದೆ. ಈ ಹೊಸ ಯೋಜನೆ ಆರಂಭದೊಂದಿಗೆ ಹತ್ತು ಸಾವಿರ ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಸೇಷನ್ (FPO) ದೇಶದಾದ್ಯಂತ ಉತ್ತೇಜಿಸಲಾಗುವುದು ಎಂದಿದ್ದಾರೆ.
ಕೃಷಿ ಖಾತೆ ರಾಜ್ಯ ಸಚಿವ ಪರಶೋತ್ತಮ್ ರುಪಾಲ ಮಾತನಾಡಿ, ನಬಾರ್ಡ್ ನಿಂದ ಬೆಳೆ ಸಾಲದ ಸಬ್ ವೆನ್ಷನ್ ಯೋಜನೆ ಪ್ರಕ್ರಿಯೆಯನ್ನು ಡಿಜಿಟೈಲ್ ಮಾಡಬೇಕು. ಆ ಮೂಲಕ ರೈತರು ಸಾಲವನ್ನು ಶೂನ್ಯ ಪರ್ಸೆಂಟ್ ನಲ್ಲಿ ಹಾಗೂ ಯಾವುದೇ ಸಮಸ್ಯೆ ಇಲ್ಲದೆ ತಕ್ಷಣದಲ್ಲೇ ಪಾವತಿ ಮಾಡಬಹುದು ಎಂದು ಸಲಹೆ ಮಾಡಿದರು.


Click it and Unblock the Notifications