ಹಿಂಡನ್ಬರ್ಗ್ ಅದಾನಿ ಗ್ರೂಪ್ ವಂಚನೆಯನ್ನು ಮಾಡಿದೆ ಎಂಬ ಬಗ್ಗೆ ವರದಿಯನ್ನು ಮಾಡಿದ ಬಳಿಕ ದೇಶದಲ್ಲಿ ಹಲವಾರು ಬೆಳವಣಿಗೆಗಳು ಕಂಡುಬಂದಿದೆ. ಈ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರವು ನಿಯಂತ್ರಕರು ತಮ್ಮ ಕೆಲಸವನ್ನು ಮಾಡಲು ಬಿಡುತ್ತದೆ. ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
"ಅದಾನಿ ಗ್ರೂಪ್ ವಿರುದ್ಧದ ವಂಚನೆಯ ಆರೋಪದ ಬಗ್ಗೆ ನಿಯಂತ್ರಕರು ತನಿಖೆ ನಡೆಸುತ್ತಾರೆ. ಅವರ ಕಾರ್ಯವನ್ನು ಮಾಡುತ್ತಾರೆ. ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ತನ್ನ ಹೇಳಿಕೆಯನ್ನು ನೀಡಿದೆ. ಹಾಗೆಯೇ ಬ್ಯಾಂಕ್ಗಳು ಮತ್ತು ಎಲ್ಐಸಿಯು ಕೂಡಾ ಈ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿದೆ. ಆದ್ದರಿಂದಾಗಿ ನಿಯಂತ್ರಕರು ತಮ್ಮ ಕೆಲಸವನ್ನು ಮಾಡುತ್ತಾರೆ," ಎಂದು ಮುಂಬೈನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
"ನಿಯಂತ್ರಕರು ಸರ್ಕಾರದಿಂದ ಸ್ವತಂತ್ರರಾಗಿದ್ದಾರೆ. ಮಾರುಕಟ್ಟೆಯ ಸ್ಥಿತಿಯನ್ನು ನಿಯಂತ್ರಣ ಮಾಡಬೇಕಾದರೆ ಯಾವ ಕಾರ್ಯವನ್ನು ಮಾಡಬೇಕೋ ಆ ಕಾರ್ಯವನ್ನು ನಿಯಂತ್ರಕರು ಮಾಡುತ್ತಾರೆ. ಸೆಬಿ (ಸೆಕ್ಯೂರಿಟೀಸ್ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಎಲ್ಲವನ್ನು ನಿಭಾಯಿಸುತ್ತದೆ," ಎಂದು ಕೂಡಾ ವಿವರಿಸಿದ್ದಾರೆ.

ಎಫ್ಪಿಒ ಬಗ್ಗೆ ವಿತ್ತ ಸಚಿವೆ ಹೇಳುವುದೇನು?
ಇನ್ನು ಅದಾನಿ ಗ್ರೂಪ್ ಎಫ್ಪಿಒ ಅನ್ನು ದಿಢೀರ್ ಆಗಿ ಹಿಂಪಡೆದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದು ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ಉತ್ತರಿಸಲು ನಿರಾಕರಿಸಿದ್ದಾರೆ. "ಈ ದೇಶದಲ್ಲಿ ಎಷ್ಟು ಬಾರಿ ಎಫ್ಪಿಒಗಳನ್ನು (ಫಾಲೋ ಆನ್ ಪಬ್ಲಿಕ್ ಆಫರ್) ಅನ್ನು ಹಿಂಪಡೆಯಲಾಗಿದೆ. ಅದರಿಂದಾಗಿ ಎಷ್ಟು ಬಾರಿ ಭಾರತದ ಘನತೆಗೆ ಧಕ್ಕೆ ಉಂಟಾಗಿದೆ. ಹಾಗೆಯೇ ಅದೆಷ್ಟು ಬಾರಿ ಎಫ್ಪಿಒ ಮತ್ತೆ ಆರಂಭವಾಗಿದೆ," ಎಂದು ಮಾಧ್ಯಮಕ್ಕೆ ಮರುಪ್ರಶ್ನೆ ಮಾಡಿದ್ದಾರೆ.
ಹಿಂಡನ್ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಸ್ಟಾಕ್ಗಳು ನಿರಂತರವಾಗಿ ಇಳಿಕೆ ಕಾಣುತ್ತಿದೆ. ಈ ನಡುವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಅಧಿಕವಾಗಿ ಅದಾನಿ ಸಂಸ್ಥೆಗೆ ಸಾಲ ನೀಡಿದೆ, ಈ ಸಂಸ್ಥೆಗಳು ಅಪಾಯದಲ್ಲಿದೆ ಎಂದು ವರದಿಯಾಗಿದ್ದವು. ಈ ಬಗ್ಗೆ ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಣೆಯನ್ನು ನೀಡಿದ್ದಾರೆ.
ಎಸ್ಬಿಐ ಆಗಲಿ ಅಥವಾ ಎಲ್ಐಸಿ ಆಗಲಿ ಅದಾನಿ ಗ್ರೂಪ್ಗೆ ಹೆಚ್ಚಿನ ಸಾಲವನ್ನು ನೀಡಿಲ್ಲ. ದೇಶದ ಅತೀ ದೊಡ್ಡ ಬ್ಯಾಂಕ್ ಆದ ಎಸ್ಬಿಐ ಮತ್ತು ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಎಲ್ಐಸಿ ಈ ಬಗ್ಗೆ ಈಗಾಗಲೇ ವಿವರವಾದ ಮಾಹಿತಿಯನ್ನು ನೀಡಿದೆ. ಎರಡೂ ಸಂಸ್ಥೆಗಳು ನಿಯಮಕ್ಕೆ ಅನುಗುಣವಾಗಿ, ಲಾಭಕ್ಕೆ ಅನುಗುಣವಾಗಿ ಅದಾನಿ ಗ್ರೂಪ್ ಜೊತೆ ವಹಿವಾಟು ಹೊಂದಿದೆ ಎಂದು ಸ್ಪಷ್ಟಪಡಿಸಿದೆ ಎಂದು ಮತ್ತೆ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ.
ಭಾರತವು ಉತ್ತಮವಾದ ನಿಯಮಗಳನ್ನು ಹೊಂದಿರುವ ಮತ್ತು ಉತ್ತಮವಾದ ಸರ್ಕಾರಿಸ್ವಾಮ್ಯದ ಹಣಕಾಸು ಮಾರುಕಟ್ಟೆಯನ್ನು ಹೊಂದಿದೆ. ಈ ಬಗ್ಗೆ ನಿಯಂತ್ರಕ ಸಂಸ್ಥೆ ಗಂಭೀರವಾಗಿದೆ ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.


Click it and Unblock the Notifications