ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಕಡಿತ ಸಾಧ್ಯವಿಲ್ಲ ಎಂದ ಕೇಂದ್ರ
ಅಬಕಾರಿ ಸುಂಕದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಹೇಳಿದ್ದಾರೆ. ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಇರುವ ಪೆಟ್ರೋಲ್- ಡೀಸೆಲ್ ಚಿಲ್ಲರೆ ದರದ ಏರಿಕೆಯಿಂದ ಗ್ರಾಹಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಾ ಎಂಬ ಪ್ರಶ್ನೆ ಹಿನ್ನೆಲೆಯಲ್ಲಿ ಈ ಉತ್ತರ ನೀಡಿದ್ದಾರೆ.
ಸದ್ಯಕ್ಕೆ ಅಂಥ ಯಾವ ಪ್ರಸ್ತಾವವೂ ಇಲ್ಲ ಎಂದು ರಾಜ್ಯ ಸಭೆಯಲ್ಲಿ ಉತ್ತರಿಸಿದ್ದಾರೆ. ಬೆಲೆ ಇಳಿಕೆ ಮಾಡುವುದಕ್ಕೆ ಸರ್ಕಾರದಿಂದ ತೆರಿಗೆ ಇಳಿಕೆ ಮಾಡಬಹುದಾ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಪೆಟ್ರೋಲ್ ದರ ಬುಧವಾರ ಮುಂಬೈನಲ್ಲಿ ಲೀಟರ್ ಗೆ ರು. 94 ದಾಟಿದೆ. ಡೀಸೆಲ್ ರು. 84.63 ಮುಟ್ಟಿದೆ. ಹತ್ತಿರ ಹತ್ತಿರ ಕಳೆದ ಹನ್ನೊಂದು ತಿಂಗಳಿಂದ ಪೆಟ್ರೋಲ್ ಪಂಪ್ ಗಳಲ್ಲಿನ ದರ ಇಳಿಕೆ ಆಗಿಲ್ಲ.
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ದರವು ಕಳೆದ ಏಪ್ರಿಲ್ ನಲ್ಲಿ ದಶಕದಲ್ಲೇ ಕನಿಷ್ಠ ಮಟ್ಟ ತಲುಪಿತ್ತು. ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ದಾಖಲೆಯ ರು. 13 ಹಾಗೂ ಡೀಸೆಲ್ ಗೆ 16 ರುಪಾಯಿ ಏರಿಕೆ ಮಾಡಲಾಗಿತ್ತು. 2020ರ ಮಾರ್ಚ್ ಮಧ್ಯದಿಂದ ರೀಟೇಲ್ ಪೆಟ್ರೋಲ್ ದರ ಲೀಟರ್ ಗೆ ರು. 18.01 ಮತ್ತು ಡೀಸೆಲ್ ರು. 15.44 ಏರಿಕೆ ಆಗಿದೆ.
ಭಾರತವು ಶೇಕಡಾ 85ರಷ್ಟು ತೈಲ ಆಮದಿನ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಅಂತರರಾಷ್ಟ್ರೀಯ ತೈಲ ದರದ ಮೇಲೆ ಚಿಲ್ಲರೆ ಮಾರಾಟ ದರವು ನಿರ್ಧಾರ ಆಗುತ್ತದೆ ಎಂದು ಏರುತ್ತಿರುವ ತೈಲ ಬೆಲೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.