NSE ಫೋನ್ ಟ್ಯಾಪಿಂಗ್: ಚಿತ್ರಾ ವಿರುದ್ಧ ಹೊಸ ಕೇಸ್ ದಾಖಲಿಸಿದ ಸಿಬಿಐ
ಮುಂಬೈ, ಜುಲೈ 8: ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್ಚೇಂಜ್(ಎನ್ಎಸ್ಇ)ಯ ಗೌಪ್ಯ ಮಾಹಿತಿ ಹಂಚಿಕೆ, ಷೇರು ಪರಭಾರೆ ಪ್ರಕರಣ ಕಣ್ಮುಂದೆ ಇರುವಾಗಲೇ ಇದಕ್ಕೆ ಪೂರಕವಾಗಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಎನ್ಎಸ್ಇ ಫೋನ್ ಟ್ಯಾಪಿಂಗ್ ಮಾಡಿದ ಆರೋಪ ಮೇಲೆ ಎನ್ಎಸ್ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ, ರವಿ ನಾರಾಯಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣ ದಾಖಲಿಸಿಕೊಂಡಿದೆ. 2009ರಿಂದ 2017ರ ಅವಧಿಯಲ್ಲಿಎನ್ಎಸ್ಇ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಆರೋಪಿಸಲಾಗಿದೆ.
ಎನ್ಎಸ್ಇ ಪ್ರಕರಣ: ಮತ್ತೊಬ್ಬ ಪ್ರಮುಖ ಆರೋಪಿ ಬಂಧಿಸಿದ ಸಿಬಿಐ
4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್ಎಸ್ಇ (NSE)ಗೆ ಮಾಜಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರಾ ರಾಮಕೃಷ್ಣ ತಾನು ನೋಡದ, ತನಗೆ ಪರಿಚಯವೇ ಇಲ್ಲದ ಹಿಮಾಲಯದ ಯೋಗಿಯೋರ್ವರ ಸಲಹೆಯನ್ನು ಪಡೆದುಕೊಂಡೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು.
NSEಯ ಪ್ರಮುಖ ವ್ಯವಹಾರ ಯೋಜನೆಗಳು ಮತ್ತು ಅಜೆಂಡಾ ಸೇರಿದಂತೆ ಹಲವಾರು ವಿಚಾರಗಳನ್ನು ಆ ಅಪರಿಚಿತ ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬ ವಿಚಾರವನ್ನು ಸೆಬಿ ಬಹಿರಂಗಪಡಿಸಿದೆ.
2013 ಮತ್ತು 2016 ರ ನಡುವೆ ಅಧಿಕಾರದಲ್ಲಿದ್ದ ಚಿತ್ರಾ
ಚಿತ್ರಾ ರಾಮಕೃಷ್ಣ ಅವರು 2013 ಮತ್ತು 2016 ರ ನಡುವೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿದ್ದರು ಮತ್ತು "ವೈಯಕ್ತಿಕ ಕಾರಣಗಳನ್ನು" ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. ಎನ್ಎಸ್ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರು ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ದಾಳಿ ನಡೆಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಎನ್ಎಸ್ಇ ಕೋ ಲೊಕೇಶನ್ ಪ್ರಕರಣ
ಎನ್ಎಸ್ಇ ಕೋ ಲೊಕೇಶನ್ ಪ್ರಕರಣದಲ್ಲಿ ಈಗಾಗಲೇ ತನಿಖೆ ನಡೆಸುತ್ತಿರುವ ಸಿಬಿಐ, ಚಿತ್ರಾ ರಾಮಕೃಷ್ಣ, ನರೇನ್ ಮತ್ತು ಪಾಂಡೆ ವಿರುದ್ಧದ ಹೊಸ ಪ್ರಕರಣ ದಾಖಲಿಸಿಕೊಂಡು ಇಂದು ದೇಶದ ವಿವಿಧೆಡೆ ದಾಳಿ ನಡೆಸಿದೆ. ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಾರಾಯಣ್ ಅವರನ್ನು ಪ್ರಶ್ನಿಸಲಾಗಿದ್ದರೂ, ಈ ವಿಷಯದಲ್ಲಿ ಪಾಂಡೆಗೆ ಇನ್ನೂ ಏಜೆನ್ಸಿಯಿಂದ ಸಮನ್ಸ್ ಬಂದಿಲ್ಲ.
ಪಾಂಡೆ ಪಾತ್ರವೇನು?
1986 ಬ್ಯಾಚ್ ಅಧಿಕಾರಿ ಸಂಜಯ್ ಪಾಂಡೆ ಜೂನ್ 30 ರಂದು ನಿವೃತ್ತರಾಗಿದ್ದಾರೆ. ಇದಕ್ಕೂ ಮೊದಲು ನಾಲ್ಕು ತಿಂಗಳ ಕಾಲ ಮುಂಬೈ ಪೊಲೀಸ್ ಕಮಿಷನರ್, ಮಹಾರಾಷ್ಟ್ರದ ಹಾಲಿ ಪೊಲೀಸ್ ಮಹಾನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಜುಲೈ 5 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ ಕಚೇರಿಯಲ್ಲಿ ವಿಚಾರಣೆಗೆ ಕರೆಸಿಕೊಳ್ಳಲಾಗಿತ್ತು.
ಪಾಂಡೆ ಹುಟ್ಟು ಹಾಕಿದ್ದ ಐಸೆಕ್ ಸರ್ವೀಸ್ ಮೂಲಕ ಎನ್ಎಸ್ಇ ಉದ್ಯೋಗಿಗಳ ಮೇಲೆ ನಿಗಾ ಇಡಲಾಗುತ್ತಿತ್ತು. ಈ ರೀತಿ ಗುಪ್ತ ಕಾರ್ಯಾಚರಣೆ ಮಾಡಲು ಎನ್ಎಸ್ಇ ಮಾಜಿ ಮುಖ್ಯಸ್ಥರಿಂದಲೇ ಆದೇಶ ಬಂದಿತ್ತು ಎಂಬ ಆರೋಪವಿದೆ. ಸಂಸ್ಥೆಯಲ್ಲಿ ಅವ್ಯವಹಾರ ನಡೆದರೆ ತಕ್ಷಣದ ಅಲರ್ಟ್ ನೀಡಬೇಕಾದ್ದು, ಐಸೆಕ್ ಸರ್ವೀಸ್ ಮುಖ್ಯ ಕಾರ್ಯವಾಗಿತ್ತು. ಆದರೆ, ಅದನ್ನು ಬಿಟ್ಟು ಉದ್ಯೋಗಿಗಳ ಮೇಲೆ ನಿಗಾ ಇಡಲಾಗುತ್ತಿತ್ತು ಎಂದು ಸಿಬಿಐ ಹಾಗೂ ಇಡಿ ತನ್ನ ವರದಿಯಲ್ಲಿ ತಿಳಿಸಿವೆ.
ಎನ್ಎಸ್ಇ ಸ್ಥಳ ಪರಭಾರೆ ಪ್ರಕರಣ
2018 ರಿಂದ NSE ಸಹ-ಸ್ಥಳ ಹಗರಣದ ತನಿಖೆ ನಡೆಸುತ್ತಿದೆ. 2010 ಮತ್ತು 2015 ರ ನಡುವೆ ರಾಮಕೃಷ್ಣ ಸಿಇಒ ಆಗಿದ್ದಾಗ ಹಲವಾರು ಸ್ಟಾಕ್ ಬ್ರೋಕಿಂಗ್ ಕಂಪನಿಗಳು NSE ಯ ಸರ್ವರ್ಗೆ ಆದ್ಯತೆಯ ಪ್ರವೇಶವನ್ನು ಪಡೆದಿವೆ ಎಂದು ಆರೋಪಿಸಲಾಗಿದೆ.
ಎನ್ಎಸ್ಇ ಸ್ಥಳ ಪರಭಾರೆ ಪ್ರಕರಣದಲ್ಲಿ, ಆರೋಪಿ ರಾಮಕೃಷ್ಣ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಆರೋಪಿ ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರನ್ನಾಗಿ ಮರು ನೇಮಕ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ಹೇಳಿದೆ. ಏಪ್ರಿಲ್ 1, 2015 ರಿಂದ, NRC ಮತ್ತು ಮಂಡಳಿಯ ಗಮನಕ್ಕೆ ತರದೆ ನೇಮಕಾತಿ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.