ಈರುಳ್ಳಿ ರಫ್ತು ನಿಷೇಧ 2020ರವರೆಗೆ ವಿಸ್ತರಣೆ
ಸದ್ಯ ಚಾಲ್ತಿಯಲ್ಲಿರುವ ಈರುಳ್ಳಿ ರಫ್ತು ನಿಷೇಧವನ್ನು 2020ರ ಫೆಬ್ರವರಿವರೆಗೂ ವಿಸ್ತರಣೆ ಮಾಡಲು ಕೇಂದ್ರ ಮನಸ್ಸು ಮಾಡಿದೆ. ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕಾಗಿ ಈರುಳ್ಳಿಯನ್ನು ರಫ್ತು ನಿಷೇಧ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ.
ಆಗಸ್ಟ್-ಸೆಪ್ಟೆಂಬರ್ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈರುಳ್ಳಿ ಉತ್ಪಾದನೆ ಭಾರೀ ಕುಸಿತ ಕಂಡಿದ್ದಲ್ಲದೆ, ಪೂರೈಕೆಯಲ್ಲೂ ವಿಳಂಭ ಉಂಟಾಗಿತ್ತು. ಈರುಳ್ಳಿಯನ್ನು ಅತಿ ಹೆಚ್ಚು ಬೆಳೆಯುವ ಮಹಾರಾಷ್ಟ್ರ, ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಬೆಳೆ ಹಾನಿ ಆಗಿದ್ದಲ್ಲದೆ ಸರಬರಾಜು ಸೀಮಿತವಾಗಿತ್ತು. ದೇಶದ ಹಲವು ನಗರಗಳಲ್ಲಿ 1 ಕೆ.ಜಿ ಈರುಳ್ಳಿ ದರವು 50 ರಿಂದ 100 ರುಪಾಯಿಗೆ ತಲುಪಿತು.
'ಖಾಸಗಿ ವ್ಯಾಪಾರಿಗಳು ಈಗಾಗಲೇ ವಿದೇಶಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕನಿಷ್ಟ 1 ಸಾವಿರ ಟನ್ ಈರುಳ್ಳಿ ತಿಂಗಳ ಅಂತ್ಯದ ವೇಳೆಗೆ ಮತ್ತು ಮುಂದಿನ ತಿಂಗಳೊಳಗೆ ದೇಶಕ್ಕೆ ಪ್ರವೇಶಿಸುವ ನಿರೀಕ್ಷಿಯಿದೆ ' ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರವು 1 ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದಾಗಿದೆ. ಸರ್ಕಾರಿ ಸ್ವಾಮ್ಯದ ವ್ಯಾಪಾರ ಸಂಸ್ಥೆ ಎಂಎಂಟಿಸಿ 1 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಿದೆ. ನಾಫೆಡ್ ಸಂಸ್ಥೆಯು ನವೆಂಬರ್ 15ರಿಂದ ಡಿಸೆಂಬರ್ 15ರ ಅವಧಿಯಲ್ಲಿ ಈರುಳ್ಳಿಯನ್ನು ದೇಶೀಯ ಮಾರುಕಟ್ಟೆಗೆ ವಿತರಿಸುತ್ತಿದೆ.
1 ಲಕ್ಷ ಟನ್ ಈರುಳ್ಳಿ ಆಮದಿಗೆ ಮುಂದಾದ ಕೇಂದ್ರ ಸರ್ಕಾರ
ಆದರೆ, ವಿಶ್ವದ ಅತಿ ದೊಡ್ಡ ಈರುಳ್ಳಿ ರಫ್ತುದಾರ ಭಾರತವು ಈರುಳ್ಳಿ ರಫ್ತು ನಿಷೇಧದಿಂದಾಗಿ, ಏಷ್ಯಾದಲ್ಲಿ ಈರುಳ್ಳಿ ಬೆಲೆಯು ಏರಿಕೆಗೊಳ್ಳುತ್ತಿದೆ. ಹೆಚ್ಚು ಈರುಳ್ಳಿಯನ್ನು ಆಮದು ಮಾಡಿಕೊಳ್ಳುವ ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ರಾಷ್ಟ್ರಗಳು ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಇತರ ಮೂಲಗಳನ್ನು ಹುಡುಕಿಕೊಳ್ಳುವ ಅಗತ್ಯವಿದೆ.