8 ನಿಮಿಷಗಳ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆವು. ಬೆಳಗ್ಗೆ 10.02ಕ್ಕೆ ದಾಳಿಕೋರರ ಮೇಲೆ ಆರಂಭವಾದ ಆಪರೇಷನ್ 10.10ಕ್ಕೆ ಮುಗಿಯಿತು. 30- 35 ನಿಮಿಷದಲ್ಲಿ ಎಲ್ಲವನ್ನು ಸರಿ ಮಾಡಿ, ಆ ಪ್ರದೇಶ ಸಹಜ ಸ್ಥಿತಿಗೆ ಮರಳುವಂತೆ ಮಾಡಲಾಯಿತು ಎಂದು ಸಿಂಧ್ ರೇಂಜರ್ಸ್ ಡೈರೆಕ್ಟರ್ ಜನರಲ್ ಒಮರ್ ಅಹ್ಮದ್ ಬುಖಾರಿ ಸೋಮವಾರ ತಿಳಿಸಿದ್ದಾರೆ.
ಕರಾಚಿ ಸ್ಟಾಕ್ ಎಕ್ಸ್ ಚೇಂಜ್ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಭಯೋತ್ಪಾದಕರು ದೀರ್ಘಾವಧಿ ದಾಳಿಯ ಉದ್ದೇಶ ಹೊಂದಿದ್ದರು. ಕಟ್ಟಡದೊಳಗೆ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವ ಇರಾದೆ ಅವರಿಗೆ ಇತ್ತು. ಎಲ್ಲ ದಾಳಿಕೋರರ ಬಳಿಯೂ ಎಕೆ 47 ಮತ್ತು ಹ್ಯಾಂಡ್ ಗ್ರೆನೇಡ್ ಗಳು ಇದ್ದವು ಎಂದು ಅವರು ತಿಳಿಸಿದ್ದಾರೆ.
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ದಾಳಿಯ ಹೊಣೆ
ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯು ಈ ದಾಳಿ ಹೊಣೆ ಹೊತ್ತಿದೆ. ಆದರೆ ತನಿಖೆ ಪೂರ್ಣವಾದ ನಂತರ ಈ ಬಗ್ಗೆ ತಿಳಿಸಲಾಗುವುದು ಎಂದ ಡಿಜಿ, 2018ರಲ್ಲಿ ಕರಾಚಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೇಲೆ ಬಿಎಲ್ ಎ ನಡೆಸಿದ ದಾಳಿಯ ಜತೆಗೆ ಈಗಿನ ದಾಳಿಯು ಹೋಲಿಕೆ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ವಿದೇಶಿ ಸಂಸ್ಥೆಗಳು, ಅದರಲ್ಲೂ ಭಾರತದ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಕೈವಾಡ ಇರುವುದು ಅಲ್ಲಗಳೆಯುವಂತಿಲ್ಲ. ಏಕೆಂದರೆ, ಇಂಥದ್ದು ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ. "ಹೊರಗಿನ ಗುಪ್ತಚರ ಸಂಸ್ಥೆಗಳ" ಸಹಾಯ ಇಲ್ಲದೆ ದಾಳಿ ಸಾಧ್ಯವಿಲ್ಲ ಎಂದು ಆತ ಹೇಳಿದ್ದಾರೆ.
ಭಾರತದ 'ರಾ' ಕೈವಾಡದ ಆರೋಪ
ನೇರವಾಗಿ ಹೇಳ್ತೇನೆ, ದೇಶದ ಹೊರಗಿನ ಸಂಸ್ಥೆಗಳ ಬೆಂಬಲ ಇಲ್ಲದೆ ಈ ಭಯೋತ್ಪಾದನಾ ಘಟನೆ ಸಾಧ್ಯವಿಲ್ಲ. ಅದರಲ್ಲೂ 'ರಾ' ಹತಾಶೆ ಮೇಲ್ನೋಟಕ್ಕೆ ನಿಮಗೆಲ್ಲ ಕಂಡುಬರುತ್ತದೆ ಎಂದು ಆರೋಪಿಸಿದ್ದು, ಇದು ಗುಪ್ತಚರ ಇಲಾಖೆ ವೈಫಲ್ಯ ಅಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಭದ್ರತಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿ ಇದ್ದವು. ಆದ್ದರಿಂದಲೇ ಉದ್ದೇಶಿತ ಗುರಿಯನ್ನು ತಲುಪಲು ಆಗಿಲ್ಲ ಎಂದಿದ್ದಾರೆ. ಹೈ ಪ್ರೊಫೈಲ್ ಸ್ಥಳಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ನಮಗಿದೆ ಎಂದು ಸಾಬೀತು ಮಾಡಲು ಭಯೋತ್ಪಾದಕರು ಯತ್ನಿಸಿದ್ದಾರೆ. ಆದರೆ ಅವರಿಗೆ ಅವಮಾನ ಆಗಿದೆ. ಕೆಲವೇ ನಿಮಿಷಗಳಲ್ಲಿ ಅವರೆಲ್ಲರ ಹತ್ಯೆ ಮಾಡಿದ್ದೇವೆ. ದೇಶದಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ ಎಂದು ಬುಖಾರಿ ಹೇಳಿದ್ದಾರೆ.
ಒಂದು ನಿಮಿಷ ಕೂಡ ಷೇರುಪೇಟೆ ವಹಿವಾಟು ನಿಂತಿಲ್ಲ
ಪಿಎಸ್ ಎಕ್ಸ್ ಮಂಡಳಿ ಅಧ್ಯಕ್ಷ ಸುಲೈಮಾನ್ ಎಸ್ ಮೆಹ್ದಿ ಮಾತನಾಡಿ, ವಹಿವಾಟನ್ನು ಒಂದು ನಿಮಿಷ ಕೂಡ ನಿಲ್ಲಿಸಿಲ್ಲ. ಇದು ಭಯೋತ್ಪಾದನೆ ದಾಳಿ ಎಂಬುದರಲ್ಲಿ ಅನುಮಾನ ಇಲ್ಲ. ಭದ್ರತಾ ಪಡೆಗಳು ಮತ್ತು ಪೊಲೀಸರ ಪ್ರತಿಕ್ರಿಯೆ ನಂಬಲಸಾಧ್ಯ ಮಟ್ಟದಲ್ಲಿತ್ತು. ಪೊಲೀಸರು ಬರುವವರೆಗೆ ಭಯೋತ್ಪಾದಕರನ್ನು ನಮ್ಮ ವೈಯಕ್ತಿಕ ಸಿಬ್ಬಂದಿಯು ತಡೆದರು. ಕಟ್ಟಡದೊಳಗೆ ಪ್ರವೇಶಿಸುವುದಕ್ಕೇ ಭಯೋತ್ಪಾದಕರಿಗೆ ಅವಕಾಶ ನೀಡಿಲ್ಲ ಎಂದಿದ್ದಾರೆ. ಕರಾಚಿಯಲ್ಲಿ ಇರುವ ಪಾಕಿಸ್ತಾನ ಸ್ಟಾಕ್ ಎಕ್ಸ್ ಚೇಂಜ್ ದೇಶದಲ್ಲೇ ದೊಡ್ಡದು. ಎಲ್ಲ ಪ್ರಮುಖ ಬ್ಯಾಂಕ್ ಗಳು ಹಾಗೂ ಹಣಕಾಸು ಒದಗಿಸುವ ಸಂಸ್ಥೆಗಳು ಇಲ್ಲೇ ಇವೆ. ಸಾಮಾನ್ಯವಾಗಿ ಇಲ್ಲಿ ಭದ್ರತೆ ಹೆಚ್ಚಿರುತ್ತದೆ. ಸೋಮವಾರ ಬೆಳಗ್ಗೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಒಬ್ಬ ಇನ್ ಸ್ಪೆಕ್ಟರ್, ಇಬ್ಬರು ಭದ್ರತಾ ಪಡೆಯವರು ಸಾವನ್ನಪ್ಪಿದ್ದಾರೆ. ಏಳು ಮಂದಿಗೆ ಗಾಯಗಳಾಗಿವೆ. ಎಲ್ಲ ನಾಲ್ಕು ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.


Click it and Unblock the Notifications