ಮುಂಬೈ: ಕೊರೊನಾವೈರಸ್ ಹಾವಳಿಯಿಂದ ಕಳೆದ ಮೂರು ತಿಂಗಳು ಲಾಕ್ಡೌನ್ ಉಂಟಾಗಿ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಹೋಟೆಲ್ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ.
ಹೋಟೆಲ್ ಮತ್ತು ಪ್ರವಾಸೋದ್ಯಮ ನೆಚ್ಚಿಕೊಂಡಿದ್ದವರು ಇದೀಗ ಅಕ್ಷರಶಃ ಬೀದಿ ಪಾಲಾಗುತ್ತಿದ್ದಾರೆ. ಅವರು ಕೆಲಸ ಆದಾಯವಿಲ್ಲದೇ ಹೊಟ್ಟೆಪಾಡಿಗೆ ಏನು ಮಾಡಬೇಕು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಕೊಂಡಿದ್ದಾರೆ. ಇಷ್ಟು ದಿನ ಸರ್ಕಾರ, ಸಂಘ ಸಂಸ್ಥೆಗಳು ಕಾರ್ಮಿಕರಿಗೆ ಸ್ವಲ್ಪ ಮಟ್ಟಿನ ಸಹಾಯ ಮಾಡಿದ್ದರು. ಇದೀಗ ಮೂರು ತಿಂಗಳು ಕಳೆದರೂ ಕೊರೊನಾ ಲಾಕ್ಡೌನ್ ಮಾತ್ರ ಹೋಟೆಲ್ ಮತ್ತು ಪ್ರವಾಸೋದ್ಯಮವನ್ನು ಚೇತರಿಸಿಕೊಳ್ಳಲು ಬಿಡುತ್ತಿಲ್ಲ.
ಇದೀಗ ಹೋಟೆಲ್ ಕಾರ್ಮಿಕರಿಗೆ ನೆರವಾಗಲು ಪೆಪ್ಸಿ, ಸ್ವಿಗ್ಗಿ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್ಆರ್ಎಐ) ಮುಂದಾಗಿವೆ.
ಪೆಪ್ಸಿ ಶೇ 25% ಹಾಗೂ ಸ್ವಿಗ್ಗಿ ಶೇ 5 ರಷ್ಟು
ಪೆಪ್ಸಿ, ಸ್ವಿಗ್ಗಿ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್ಆರ್ಎಐ) ಜಂಟಿಯಾಗಿ ಹೋಟೆಲ್ ಕಾರ್ಮಿಕರ ಕಲ್ಯಾಣಕ್ಕೆ ಮುಂದಾಗಿವೆ. ಗ್ರಾಹಕರು ಸ್ವಿಗ್ಗಿಯಲ್ಲಿ ಪೆಪ್ಸಿ ತಂಪು ಪಾನೀಯದ ಜೊತೆ ಏನಾದರೂ ಆಹಾರ ಪದಾರ್ಥವನ್ನು ಖರೀದಿ ಮಾಡಿದರೆ, ಪೆಪ್ಸಿ ಶೇ 25% ಹಾಗೂ ಸ್ವಿಗ್ಗಿ ಶೇ 5 ರಷ್ಟು ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್ಆರ್ಎಐ) ಮೂಲಕ ಹೋಟೆಲ್ ಕಾರ್ಮಿಕರಿಗೆ ಹಣಕಾಸಿನ ನೆರವು ಒದಗಿಸುತ್ತದೆ.
ಜೂನ್ 25 ರಿಂದ ಜುಲೈ 19 ರವರೆಗೆ
ಉಪಕ್ರಮದ ಭಾಗವಾಗಿ, ಯಾವುದೇ ಗ್ರಾಹಕರು ಜೂನ್ 25 ರಿಂದ ಜುಲೈ 19 ರವರೆಗೆ ಸ್ವಿಗ್ಗಿಯಲ್ಲಿ ಆಹಾರವನ್ನು ಆರ್ಡರ್ ತೆಗೆದುಕೊಂಡಾಗ ಈ ನಿಯಮ ಅನ್ವಯಿಸುತ್ತದೆ ಎಂದು ಪೆಪ್ಸಿಯ ವಕ್ತಾರರು ತಿಳಿಸಿದ್ದಾರೆ.
ಇಬ್ಬರೂ ಕಷ್ಟಪಡುತ್ತಿದ್ದಾರೆ
ಪ್ರಸ್ತುತ ಸವಾಲಿನ ಸಮಯದಿಂದ ಬಳಲುತ್ತಿರುವ ರೆಸ್ಟೋರೆಂಟ್ ಕಾರ್ಮಿಕರಿಗೆ ಒದಗಿಸಲು ಈ ನಿಧಿಯನ್ನು ಬಳಸಲಾಗುವುದು ಎಂದು ಪೆಪ್ಸಿ ಪಾನೀಯ ಕಂಪನಿ ತಿಳಿಸಿದೆ. ರೆಸ್ಟೋರೆಂಟ್ ಉದ್ಯಮವು ಸಮಾಜ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ ಮತ್ತು ಈ ನಡೆಯುತ್ತಿರುವ ಆರೋಗ್ಯ ಸವಾಲಿನಿಂದ ತೀವ್ರವಾಗಿ ತೊಂದರೆ ಅನುಭವಿಸಿದೆ. ರೆಸ್ಟೋರೆಂಟ್ಗಳ ಮಾಲೀಕರು ಮತ್ತು ರೆಸ್ಟೋರೆಂಟ್ ಕಾರ್ಮಿಕರು ಇಬ್ಬರೂ ಕಷ್ಟಪಡುತ್ತಿದ್ದಾರೆ ಎಂದು ಪೆಪ್ಸಿಕೋ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಆಹಾರ ಭದ್ರತಾ ಬೆಂಬಲ
ಪ್ರಸ್ತುತ ಸಮಸ್ಯೆಗೆ ಅರ್ಥಪೂರ್ಣ ಮಾರ್ಗಗಳನ್ನು ಕಂಡುಹಿಡಿಯುವ ನಮ್ಮ ಪ್ರಯತ್ನದಲ್ಲಿ ಗ್ರಾಹಕರೊಂದಿಗೆ ಒಂದು ಆಂದೋಲನವನ್ನು ಸಜ್ಜುಗೊಳಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ರೆಸ್ಟೋರೆಂಟ್ ಕಾರ್ಮಿಕರು ಮತ್ತು ತೊಂದರೆಯಲ್ಲಿರುವ ಅವರ ಕುಟುಂಬಗಳಿಗೆ ಆಹಾರ ಭದ್ರತಾ ಬೆಂಬಲವನ್ನು ಒದಗಿಸುವುದು ಸಮಯೋಚಿತ ಅಗತ್ಯವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಪೆಪ್ಸಿಕೋ ವಕ್ತಾರರು ತಿಳಿಸಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.


Click it and Unblock the Notifications