ಇನ್ನು ಒಂದು ರುಪಾಯಿ ಬೆಲೆ ಏರಿದರೆ ಪೆಟ್ರೋಲ್- ಡೀಸೆಲ್ ಹೊಸ ದಾಖಲೆ
ಕಳೆದ ಎರಡು ತಿಂಗಳಿಂದ ಭಾರತದಲ್ಲಿ ಪೆಟ್ರೋಲ್ ದರ ಸ್ಥಿರವಾಗಿ ಏರಿಕೆ ಕಾಣುತ್ತಾ ಬರುತ್ತಿದೆ. ಕಳೆದ ಬಾರಿ ಸಾಮಾನ್ಯ ಗ್ರಾಹಕರ ಪಾಲಿಗೆ ಅತಿ ದುಬಾರಿ ಎಂದು ದಾಖಲಾಗಿದ್ದು 2018ರಲ್ಲಿ. ಮುಂಬೈನಲ್ಲಿ ರು. 91.39 ಹಾಗೂ ದೆಹಲಿಯಲ್ಲಿ ರು. 84.06 ದಾಖಲಾಗಿತ್ತು. ಡಿಸೆಂಬರ್ 7ನೇ ತಾರೀಕಿನ ಸೋಮವಾರದ ದರಕ್ಕೆ ಹೋಲಿಸಿದಲ್ಲಿ ಸಾರ್ವಕಾಲಿಕ ದಾಖಲೆಯ ಬೆಲೆಗೆ ಒಂದು ರುಪಾಯಿ ಮಾತ್ರ ದೂರ ಇದೆ.
"2021- 2022ರ ತನಕ ಆರ್ಥಿಕ ಚೇತರಿಕೆಗೆ ಕಾಯಬೇಕಾಗಬಹುದು"
ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ರು. 90.30ಕ್ಕೆ ಮಾರಾಟ ಆಗುತ್ತಿದ್ದರೆ, ನವದೆಹಲಿಯಲ್ಲಿ ರು. 83.71ಕ್ಕೆ ಮಾರಾಟವಾಗುತ್ತಿದೆ. ಕಳೆದ ಮೂರು ವಾರದಲ್ಲಿ ಪೆಟ್ರೋಲ್ ದರ ಹದಿನಾಲ್ಕು ಬಾರಿ ಪರಿಷ್ಕರಣೆ ಆಗಿ, 2.8%ಗೂ ಹೆಚ್ಚು ಏರಿಕೆ ಆಗಿದೆ. ಐಸಿಐಸಿಐ ಸೆಕ್ಯೂರಿಟೀಸ್ ಪ್ರಕಾರ, ಕೊರೊನಾ ಲಸಿಕೆ ಭರವಸೆ ಕಾರಣಕ್ಕೆ ತೈಲ ಬೆಲೆಯು ದಿನದಿನಕ್ಕೂ ಏರಿಕೆ ಆಗುತ್ತಿದೆ.
2018ನೇ ಇಸವಿಯಲ್ಲಿ ಏನಾಗಿತ್ತು?
2018 ಹಾಗೂ 2020ನೇ ಇಸವಿಗೆ ಹೋಲಿಕೆ ಮಾಡಿದರೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಹಲವರು ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸಾರ್ವತ್ರಿಕ ಚುನಾವಣೆ ಹತ್ತಿರ ಇತ್ತು. ಬೆಲೆ ಏರಿಕೆಯಿಂದ ದೈನಂದಿನ ಜನ ಜೀವನದ ಮೇಲೆ ಪರಿಣಾಮ ಆಗುತ್ತಿತ್ತು. ಜನರು ಸಹ ಅಸಂತುಷ್ಟಗೊಂಡಿದ್ದರು. ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದ್ದರಿಂದ ಸರ್ಕಾರವು ರಾತ್ರೋರಾತ್ರಿ ತುರ್ತು ಸಭೆ ಕರೆಯಬೇಕಾಯಿತು. ಆಗ ಸಿಕ್ಕ ಅತ್ಯುತ್ತಮ ಪರಿಹಾರ ಅಂದರೆ, ಮೇ 30ನೇ ತಾರೀಕ ರಾತ್ರಿ ಒಂದು ಪೈಸೆ ಇಳಿಕೆ ಮಾಡಲಾಯಿತು. ಅದರಿಂದ ಮತ್ತಷ್ಟು ಟೀಕೆ ವ್ಯಕ್ತ ಆಯಿತು.
ಆಡಳಿತಾರೂಢ ಬಿಜೆಪಿ ಪಾಲಿಗೆ ನಿರ್ಣಾಯಕ
2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಇತ್ತು. ಈಗ 2020ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ. ಎರಡೂ ಆಡಳಿತಾರೂಢ ಬಿಜೆಪಿ ಪಾಲಿಗೆ ನಿರ್ಣಾಯಕ ಆಗಿತ್ತು. ಆಗಿನ ಸಂದರ್ಭಕ್ಕೆ ನೆನಪಿಸಿಕೊಂಡರೆ, ಚುನಾವಣೆ ತನಕ ಹತ್ತೊಂಬತ್ತು ದಿನಗಳ ಕಾಲ ತೈಲ ದರವನ್ನು ಪರಿಷ್ಕರಣೆ ಮಾಡಲಿಲ್ಲ. ಈ ಸಲ ಸೆಪ್ಟೆಂಬರ್ ಎರಡರಿಂದ ನವೆಂಬರ್ ಇಪ್ಪತ್ತರ ತನಕ ಮಾಡಲಿಲ್ಲ. ಆ ತನಕ ಬೆಲೆ ಏರುತ್ತಾ ಬಂದಿದೆ. ಇನ್ನೂ ಎಷ್ಟು ಚೆನ್ನಾಗಿ ಹೋಲಿಕೆ ಆಗುತ್ತದೆ ಅಂದರೆ, ಬಿಹಾರ ಚುನಾವಣೆ ಅಕ್ಟೋಬರ್ 28ರಿಂದ ನವೆಂಬರ್ 7ರ ತನಕ ನಡೆಯಿತು. ಮತ್ತೊಂದು ಸಮಸ್ಯೆ ಏನೆಂದರೆ, ಆಗ ಮತ್ತು ಈಗ ಭಾರತವು ತನ್ನ ಕಚ್ಚಾ ತೈಲದ ಅಗತ್ಯದಲ್ಲಿ ಶೇಕಡಾ ಎಂಬತ್ತರಷ್ಟನ್ನು ಆಮದು ಮಾಡಿಕೊಳ್ಳುತ್ತದೆ.
ಹಣದುಬ್ಬರದಲ್ಲಿ ಏರಿಕೆ; ಆರ್ ಬಿಐಗೆ ಚಿಂತೆ
ಭಾರತವು ಬಹುಪಾಲು ತೈಲವನ್ನು ಪಶ್ಚಿಮ ಏಷ್ಯಾ, ಅದರಲ್ಲೂ ಇರಾಕ್ ನಿಂದ ಆಮದು ಮಾಡಿಕೊಳ್ಳುತ್ತದೆ. ಬೆಲೆ ಏರಿಕೆಯಿಂದ ನಿತ್ಯದ ಪ್ರಯಾಣ ದರದ ಮೇಲೆ ಮಾತ್ರ ಅಲ್ಲ, ಸಾರಿಗೆ ವೆಚ್ಚದ ಮೇಲೂ ಆಗುತ್ತದೆ. ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ. ಹಣದುಬ್ಬರವನ್ನು ನಾಲ್ಕು ಪರ್ಸೆಂಟ್ ನೊಳಗೇ ಇರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಯತ್ನ ಈಗಾಗಲೇ ವಿಫಲವಾಗಿದೆ. ಈಚೆಗೆ ಹಣಕಾಸು ನೀತಿ ಸಭೆಯ ಕುರಿತು ಹೇಳಿಕೆ ನೀಡಿದ್ದ ಗವರ್ನರ್ ಶಕ್ತಿಕಾಂತ ದಾಸ್, ಚಳಿಗಾಲದಲ್ಲಿ ಹಣದುಬ್ಬರ ಮೇಲ್ಮಟ್ಟದಲ್ಲಿ ಇರುವ ಸಾಧ್ಯತೆ ಇದೆ ಎಂದಿದ್ದರು. ಈಚಿನ ಪೆಟ್ರೋಲ್ ದರ ಏರಿಕೆಯು ಆರ್ ಬಿಐಗೆ ನೆರವಾಗುವುದಿಲ್ಲ.