ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: 8ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಸಮ್ಮಾನ್ ನಿಧಿ) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿವರ್ಷ ದೇಶದ ರೈತರಿಗೆ 6000 ರೂ. ತಲುಪುತ್ತದೆ. ಈ ಯೋಜನೆ ಅಡಿಯಲ್ಲಿ ಸರ್ಕಾರ ಈವರೆಗೆ ಒಟ್ಟು 7 ಕಂತುಗಳನ್ನು ಕಳುಹಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ 8ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ.
9.5 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳಿಗೆ 8 ನೇ ಕಂತಿನ 20,000 ಕೋಟಿಗೂ ಹೆಚ್ಚು ಹಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಇಂದು ಬಿಡುಗಡೆ ಮಾಡಿದರು.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಫಲಾನುಭವಿ ರೈತರಿಗೆ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ರೈತರಿಗೆ ನೀಡಲಾಗುತ್ತದೆ. ಇದರ ಅಡಿಯಲ್ಲಿ, ಪ್ರತಿ ವರ್ಷದ ಮೊದಲ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ, ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಬರುತ್ತದೆ.
ಈ ಯೋಜನೆಯಿಂದಾಗಿ 14 ಕೋಟಿ ಫಲಾನುಭವಿ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ತಲುಪುತ್ತದೆ. ಇದುವರೆಗೂ ಬರೋಬ್ಬರಿ 1.15 ಲಕ್ಷ ಕೋಟಿಯಷ್ಟು ಹಣ ರೈತ ಕುಟುಂಬಗಳಿಗೆ ತಲುಪಿಸಲಾಗಿದೆ.
8ನೇ ಕಂತಿನ ಹಣ ಬಿಡುಗಡೆಯ ಜೊತೆಗೆ ಪ್ರಧಾನಿ ಮೋದಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮೇಘಾಲಯ, ಜಮ್ಮು& ಕಾಶ್ಮೀರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ರೈತರೊಂದಿಗೆ ವೀಡಿಯೋ ಸಂವಾದ ನಡೆಸಿದರು.