ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಆಗಸ್ಟ್ 13, 2020) ಹೊಸ ತೆರಿಗೆ ಯೋಜನೆಗೆ ಚಾಲನೆ ನೀಡಲಿದ್ದಾರೆ. "ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ" ಎಂಬ ಪ್ಲಾಟ್ ಫಾರ್ಮ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಕೊಡುತ್ತಾರೆ.
ವಿವಿಧ ವಾಣಿಜ್ಯ ಮಂಡಳಿ, ವಾಣಿಜ್ಯ ಒಕ್ಕೂಟ, ಚಾರ್ಟರ್ಡ್ ಅಕೌಂಟೆಂಟ್ ಗಳ ಒಕ್ಕೂಟ ಮತ್ತು ಪ್ರಮುಖ ತೆರಿಗೆದಾರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಜತೆಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ಹಿಂದೆ ನಿರ್ಮಲಾ ಸೀತಾರಾಮನ್ ಮಾತನಾಡಿ, ತೆರಿಗೆ ಪಾವತಿದಾರರು ಈ ದೇಶವನ್ನು ಕಟ್ಟುವವರು. ಅವರಿಗಾಗಿ ಹಕ್ಕುಗಳ ಪಟ್ಟಿಯೊಂದನ್ನು ತರುತ್ತೇವೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಉಚಿತ ಆಹಾರ ಧಾನ್ಯ ವಿತರಣೆಗೆ ಸಹಾಯ ಮಾಡಿದ್ದಕ್ಕಾಗಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಧನ್ಯವಾದ ಹೇಳಿದ್ದಾರೆ.

ತೆರಿಗೆ ಸುಧಾರಣೆ ಬಗ್ಗೆ ತಿಳಿಯಬೇಕಾದ ಸಂಗತಿಗಳು:
* ನೇರ ತೆರಿಗೆ ಸುಧಾರಣೆ ಪ್ರಯಾಣವನ್ನು ಈ ಪ್ಲಾಟ್ ಫಾರ್ಮ್ ಮುಂದಿನ ಹಂತಕ್ಕೆ ಒಯ್ಯುತ್ತದೆ.
* ಈಚಿನ ವರ್ಷಗಳಲ್ಲಿ ಸಿಬಿಡಿಟಿಯಿಂದ ಹಲವಾರು ಪ್ರಮುಖ ನೇರ ತೆರಿಗೆ ಸುಧಾರಣೆಗಳನ್ನು ತರಲಾಗಿದೆ. ಕಳೆದ ವರ್ಷ ಕಾರ್ಪೊರೇಟ್ ತೆರಿಗೆಯನ್ನು 30ರಿಂದ 22 ಪರ್ಸೆಂಟ್ ಗೆ ಇಳಿಸಲಾಯಿತು. ಹೊಸ ಉತ್ಪಾದನಾ ಘಟಕಗಳಿಗೆ 15 ಪರ್ಸೆಂಟ್ ಗೆ ಇಳಿಸಲಾಯಿತು. ಡಿವಿಡೆಂಡ್ ವಿತರಣೆ ತೆರಿಗೆಯನ್ನು ತೆಗೆಯಲಾಯಿತು.
* ತೆರಿಗೆ ಸುಧಾರಣೆಯ ಮುಖ್ಯ ಗುರಿ ತೆರಿಗೆ ದರದ ಇಳಿಕೆ ಮತ್ತು ತೆರಿಗೆ ಕಾನೂನು ಸರಳ ಮಾಡುವುದು. ತೆರಿಗೆ ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರುವ ಉದ್ದೇಶದಿಂದ ಹಲವು ಬದಲಾವಣೆ ಮಾಡಲಾಗಿದೆ. ಅದರಲ್ಲಿ ಎಲ್ಲ ಸಂವಹನವನ್ನೂ ಕಂಪ್ಯೂಟರ್ ಜನರೇಟೇಡ್ ಡಾಕ್ಯುಮೆಂಟ್ ಐಡೆಂಟಿಫಿಕೇಷನ್ ನಂಬರ್ (DIN) ಮೂಲಕವೇ ಮಾಡಬೇಕು ಎಂಬುದು ಕೂಡ ಒಂದು. ಇನ್ನು ವೈಯಕ್ತಿಕ ತೆರಿಗೆ ಪಾವತಿದಾರರು ಹಾಗೂ ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ಪಾವತಿ ಮಾಡುವುದಕ್ಕೆ ಅನುಕೂಲ ಮಾಡಿಕೊಡಲು ನಿಯಮಾವಳಿಗಳನ್ನು ಸರಳ ಮಾಡಲಾಗಿದೆ.
* ತೆರಿಗೆ ವ್ಯಾಜ್ಯಗಳು ಬಾಕಿಯಿದ್ದಲ್ಲಿ ಅವುಗಳನ್ನು ಪರಿಹರಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆಯಿಂದ ನೇರ ತೆರಿಗೆಗೆ ಸಂಬಂಧಿಸಿದಂತೆ "ವಿವಾದ್ ಸೇ ವಿಶ್ವಾಸ್ ಕಾಯ್ದೆ 2020" ತರಲಾಗಿದೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ ಪಾವತಿಗಳ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಕಾನೂನು ಬದ್ಧವಾಗಿ ಸಲ್ಲಿಸಬೇಕಿದ್ದ ತೆರಿಗೆ ಮಾಹಿತಿಗಳ ಗಡುವನ್ನು ವಿಸ್ತರಿಸಲಾಗಿದೆ. ಜತೆಗೆ ರೀಫಂಡ್ ಗಳನ್ನು ಶೀಘ್ರವಾಗಿ ವಿತರಿಸಲಾಗಿದೆ.


Click it and Unblock the Notifications