ಮುದ್ರಾ ಸೇರಿ ಹಲವು ಯೋಜನೆಗಳ ಪರಿಶೀಲನೆಗೆ ಇಳಿದ ವಿತ್ತ ಸಚಿವೆ, ಕಾರಣವೇನು?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಲ ಸಂಬಂಧಿತ ಕೇಂದ್ರ ಸರ್ಕಾರಿ ಯೋಜನೆಗಳು ಯಾವ ರೀತಿ ಕಾರ್ಯ ನಿರ್ವಹಣೆಯಲ್ಲಿದೆ ಎಂಬುವುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮುಖ್ಯವಾಗಿ ಪರಿಷಿಷ್ಠ ಜಾತಿಗೆ ಸೇರಿದ ಸಾಲ ಸಂಬಂಧಿತ ಯೋಜನೆಗಳ ಬಗ್ಗೆ ಮಂಗಳವಾರ ಕೇಂದ್ರ ಸಚಿವೆ ಪರಿಶೀಲನೆಗೆ ಇಳಿದಿದ್ದಾರೆ.
ಸಭೆಯೊಂದು ನಡೆಯಲಿದ್ದು ಈ ಸಭೆಯಲ್ಲಿ ಎಸ್ಸಿ ಸಮುದಾಯಕ್ಕೆ ಸೇರಿದವರಿಗೆ ಬ್ಯಾಂಕುಗಳಿಂದ ನೀಡಲಾದ ಸಾಲದ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಹಾಗೆಯೇ ಸ್ಟಾರ್ಟ್ ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಂತಹ ಸಾಲ ಸಂಬಂಧಿತ ಯೋಜನೆಗಳ ಅಡಿಯಲ್ಲಿ ಎಸ್ಸಿ ಸಮುದಾಯದ ಜನರಿಗೆ ನೀಡಲಾದ ಸಾಲದ ಬಗ್ಗೆ ಬ್ಯಾಂಕಿನಲ್ಲಿ ಪರಿಶೀಲಿಸಲಾಗುತ್ತದೆ.
"ಸ್ಟಾರ್ಟ್ ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ನ್ಯಾಷನಲ್ ರೂರಲ್ ಲೀವ್ಲಿಹುಡ್ ಮಿಷನ್, ನ್ಯಾಷನಲ್ ಅರ್ಬನ್ ಲೀವ್ಲಿಹುಡ್ ಮಿಷನ್, ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಆಂಡ್ ಸ್ಮಾಲ್ ಎಂಟರ್ಪ್ರೈಸಸ್, ಶಿಕ್ಷಣ ಸಾಲ, ಪರಿಶಿಷ್ಟ ಜಾತಿಗೆ ಇರುವ ಸಾಲ ಮೊದಲಾದ ಯೋಜನೆಗಳ ಅಡಿಯಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ನೀಡಲಾದ ಸಾಲದ ಬಗ್ಗೆ ಪರಿಶೀಲನೆ ಮಾಡಲಾಗುವುದು," ಎಂದು ಸಚಿವಾಲಯವು ಮಾಹಿತಿ ನೀಡಿದೆ.
ಸಭೆಯಲ್ಲಿ ಯಾರೆಲ್ಲ ಭಾಗಿ?
ಹಣಕಾಸು ಸಚಿವಾಲಯದ ಪ್ರಕಾರ ಈ ಸಭೆಯು ನವದೆಹಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಸಚಿವರುಗಳಾದ ಪಂಕಜ್ ಚೌಧರಿ, ಭಾಗ್ವತ್ ಕಿಸಾನ್ ರಾವ್ ಕರಾಡ್ ಹಾಗೂ ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಭಾಗಿಯಾಗಲಿದ್ದಾರೆ. ನ್ಯಾಷನಲ್ ಕಮಿಷನ್ ಫಾರ್ ಎಸ್ಸಿಯ ಮುಖ್ಯಸ್ಥರು, ಖಾಸಗಿ, ಸರ್ಕಾರಿ ಬ್ಯಾಂಕುಗಳ ನಿರ್ದೇಶಕರು, ನಬಾರ್ಡ್ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.
ಇನ್ನು ಎಸ್ಸಿಗಳ ಅಭಿವೃದ್ಧಿಗಾಗಿ ಬ್ಯಾಂಕುಗಳು ಕೈಗೊಂಡ ಕ್ರಮದ ಬಗ್ಗೆಯೂ ಈ ಸಭೆಯಲ್ಲಿ ಪರಿಶೀಲಿಸಲಾಗುತ್ತದೆ. ಮೀಸಲಾತಿ ಬಗ್ಗೆಯೂ ಚರ್ಚೆ ನಡೆಯಲಿದೆ. ಇನ್ನು ಎಸ್ಸಿ ಸಮುದಾಯವನ್ನು ಆರ್ಥಿಕವಾಗಿ ಪ್ರಬಲ ಮಾಡುವ ನಿಟ್ಟಿನಲ್ಲಿಯೂ ಚರ್ಚೆ ನಡೆಯಲಿದೆ.