'ಆರ್ಥಿಕತೆ ಚೇತರಿಕೆಯೂ ಆಗಲ್ಲ, ಜನರಿಗೂ ಸಾಲಲ್ಲ ಕೇಂದ್ರದ ಪ್ಯಾಕೇಜ್'
ಕೇಂದ್ರ ಸರ್ಕಾರದ 20.9 ಲಕ್ಷ ಕೋಟಿಯ ಪ್ಯಾಕೇಜ್ ಆರ್ಥಿಕತೆ ಚೇತರಿಕೆಗೆ ಸಾಲುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗೌರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಪ್ಯಾಕೇಜ್ ನಲ್ಲಿ ವಲಸಿಗ ಕಾರ್ಮಿಕರಿಗೆ ಉಚಿತವಾಗಿ ಆಹಾರಧಾನ್ಯ ನೀಡುವ ಬಗ್ಗೆ ಹೇಳಲಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಉದ್ಯೋಗ ಇಲ್ಲದ ಅವರಿಗೆ ಹಾಲು, ತರಕಾರಿ, ಅಡುಗೆ ಎಣ್ಣೆ ಖರೀದಿಗೆ ಮತ್ತು ಬಾಡಿಗೆ ಪಾವತಿಸಲು ಹಣ ಬೇಕು ಎಂದಿದ್ದಾರೆ.
ರೇಷನ್ ಕಾರ್ಡ್ ಇಲ್ಲದವರಿಗೂ ರೇಷನ್, ಬಾಡಿಗೆ ಮನೆಗೆ ನಿರ್ದಿಷ್ಟ ಬಾಡಿಗೆ ಫಿಕ್ಸ್
ಇಡೀ ವಿಶ್ವ ಮಹಾ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಅದೆಷ್ಟು ದೊಡ್ಡ ಪ್ರಮಾಣದ ಪರಿಹಾರವೇ ಆದರೂ ಸಾಲುವುದಿಲ್ಲ ಎಂದು ಅವರು ಹೇಳಿದ್ದಾರೆ. ನ್ಯೂಸ್ ಪೋರ್ಟಲ್ ವೊಂದಕ್ಕೆ ನೀಡಿದ ಸಂದರ್ಶನ ಸಂದರ್ಭದಲ್ಲಿ ರಘುರಾಮ್ ರಾಜನ್ ವ್ಯಕ್ತಪಡಿಸಿದ ಅಭಿಪ್ರಾಯದ ಆಯ್ದ ಅಂಶಗಳು ಹೀಗಿವೆ:
* ಈ ಸಮಸ್ಯೆ ನಿರ್ದಿಷ್ಟವಾಗಿ ಭಾರತದ ಪಾಲಿಗೆ ಹೆಚ್ಚು. ಏಕೆಂದರೆ ಕಳೆದ ಹಲವು ವರ್ಷಗಳು ಆರ್ಥಿಕ ನಿಧಾನಗತಿಯ ಕಾರಣಕ್ಕೆ ನಮ್ಮ ಬೆಳವಣಿಗೆ ಹಿಂಜರಿತ ಅನುಭವಿಸಿದೆ. ನಮ್ಮ ವಿತ್ತೀಯ ಕೊರತೆ ಹೆಚ್ಚಾಗಿದೆ. ಆರ್ಥಿಕತೆ ಮರಳಿ ಸರಿಹೋಗಲು ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ.
* ಕೊರೊನಾದಿಂದ ತೊಂದರೆಗೆ ಒಳಗಾದ ಜನರು, ಕಂಪೆನಿಗಳಿಗೆ ಪರಿಹಾರ ಒದಗಿಸುವ ಕಡೆಗೆ ಹೆಚ್ಚು ಗಮನ ನೀಡಬೇಕು.
* ಎಲ್ಲೆಲ್ಲಿ ಆರ್ಥಿಕತೆಯ ರಿಪೇರಿ ಅಗತ್ಯ ಇದೆಯೋ ಅಲ್ಲೆಲ್ಲ ರಿಪೇರಿ ಮಾಡಬೇಕಿದೆ. ಬ್ಯಾಂಕ್ ಗಳು, ಎಂಎಸ್ ಎಂಇ, ದೊಡ್ಡ ಸಂಸ್ಥೆಗಳು ಇದರಲ್ಲಿ ಒಳಗೊಂಡಿವೆ. ನಮಗೆ ಈಗ ಸುಧಾರಣೆ ಬೇಕಿದೆ.
* ಈಗಿನ ಪ್ಯಾಕೇಜ್ ಕೊರೊನಾದಿಂದ ಆರ್ಥಿಕತೆ ಸುಧಾರಿಸುವುದಕ್ಕೆ ವಿಫಲರಾಗಿರುವುದಷ್ಟೇ ಅಲ್ಲ, ವಲಸಿಗ ಕಾರ್ಮಿಕರೂ ಸೇರಿದಂತೆ ತೊಂದರೆಗೆ ಒಳಗಾದವರಿಗೆ, ಹಣ ಮತ್ತು ಆಹಾರ ಧಾನ್ಯ ಅಗತ್ಯ ಇರುವವರಿಗೆ ಅದನ್ನು ಒದಗಿಸಲು ಸಾಧ್ಯವಾಗಿಲ್ಲ.
* ಆಹಾರ ಧಾನ್ಯ ಹಾಗೂ ಹಣ ಎರಡೂ ಬೇಕು. ಅದರ ಜತೆಗೆ ತರಕಾರಿ, ಅಡುಗೆ ಎಣ್ಣೆ ಕೂಡ ಬೇಕು. ಅವರಿಗೆ ಸೂರು ಒದಗಿಸದಿದ್ದಲ್ಲಿ ಇರುವುದಾದರೂ ಎಲ್ಲಿ? ಆದ್ದರಿಂದ ಆರ್ಥಿಕತೆ ಹಾಗೂ ಜನರ ರಕ್ಷಣೆ ಎರಡೂ ಈಗ ಬಹಳ ಮುಖ್ಯ.
* ವಿಪಕ್ಷದಲ್ಲಿ ಇರುವವರ ಜತೆಗೂ ಚರ್ಚಿಸಿ, ಪರಿಹಾರದ ಬಗ್ಗೆ ಆಲೋಚಿಸಬೇಕು. ಎಲ್ಲವನ್ನೂ ಪ್ರಧಾನಮಂತ್ರಿ ಕಚೇರಿಯೇ ಮಾಡಲು ಸಾಧ್ಯವಿಲ್ಲ.
* ನಿರ್ಮಾಣ ವಲಯ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಈಗಿನಿಂದ ಇನ್ನೊಂದು ವರ್ಷಕ್ಕೆ ಆರ್ಥಿಕತೆ ಹೇಗಿರಲಿದೆ? ಒಂದು ವೇಳೆ ಸರ್ಕಾರದಿಂದ ಸೂಕ್ತ ಪರಿಹಾರ ಪ್ಯಾಕೇಜ್ ಘೋಷಣೆ ಮಾಡದಿದ್ದಲ್ಲಿ ಭಾರೀ ಸಮಸ್ಯೆಯಾಗಲಿದೆ.
* ವಿತ್ತೀಯ ಕೊರತೆ ಜಾಸ್ತಿ ಆಗುತ್ತದೆ ಅಂತ ರೇಟಿಂಗ್ ಏಜೆನ್ಸಿಗಳ ಬಗ್ಗೆ ಸರ್ಕಾರ ಯೋಚಿಸಬಾರದು. ಏಕೆಂದರೆ ಈಗ ಆರ್ಥಿಕತೆ ಮತ್ತು ಜನರ ಸಮಸ್ಯೆ ನಿವಾರಣೆ ಆಗುವುದು ಮುಖ್ಯ.
* ಏರ್ ಲೈನ್ಸ್, ಪ್ರವಾಸೋದ್ಯಮ, ಕಾರು ತಯಾರಿಕೆ, ನಿರ್ಮಾಣ ಕ್ಷೇತ್ರದ ಬಗ್ಗೆ ಹೇಳುವುದಾದರೆ, ಅಮೆರಿಕದಂತೆ ಏರ್ ಲೈನ್ಸ್ ಗೆ ಅನುಕೂಲ ಮಾಡುವುದು ಕಷ್ಟ. ಆದರೆ ಸಾಲದ ಪರಿಹಾರ ನೀಡಬೇಕು.