ರೂಪಾಯಿ ನೋಟುಗಳಲ್ಲಿ ಗಾಂಧೀಜಿ ಚಿತ್ರ ಅಚ್ಚೊತ್ತುವ ಮುನ್ನ ಏನಿರುತ್ತಿದ್ದವು?
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿನ್ನೆ ಬುಧವಾರ ರೂಪಾಯಿ ಕರೆನ್ಸಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮೀ ದೇವರುಗಳ ಚಿತ್ರಗಳನ್ನು ಮುದ್ರಿಸಬೇಕು ಎಂದು ಒತ್ತಾಯಿಸಿ ಅಚ್ಚರಿ ಮೂಡಿಸಿದ್ದರು. ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದಲ್ಲಿ ಅಲ್ಲಿಯ ರೂಪಯ್ಯ ಕರೆನ್ಸಿ ನೋಟುಗಳ ಮೇಲೆ ಗಣೇಶನ ಚಿತ್ರ ಮುದ್ರಿಸುತ್ತಿರುವ ಬಗ್ಗೆ ಸುದ್ದಿ ಆದ ಬೆನ್ನಲ್ಲೇ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದರು.
ಲಕ್ಷ್ಮೀ ಐಶ್ವರ್ಯದ ಸಂಕೇತವಾದರೆ, ಗಣೇಶ ವಿಘ್ನ ನಿವಾರಕ. ಹೀಗಾಗಿ, ಅವರ ಚಿತ್ರಗಳು ಕರೆನ್ಸಿ ನೋಟುಗಳ ಮೇಲಿದ್ದರೆ ಭಾರತದ ಆರ್ಥಿಕ ತೊಂದರೆಗಳು ನಿವಾರಣೆಯಾಗಿ ಸಂಪತ್ತು ಸೇರುತ್ತದೆ ಎಂದು ಕೇಜ್ರಿವಾಲ್ ಹೇಳುತ್ತಾ, ವರ್ತಕರು ಈ ಎರಡು ದೇವರ ವಿಗ್ರಹಗಳನ್ನ ತಮ್ಮ ಬಳಿ ಇಟ್ಟುಕೊಳ್ಳುವ ಸಂಗತಿಯನ್ನು ಉಲ್ಲೇಖಿಸಿದ್ದರು.
ರೂಪಾಯಿ ನೋಟಿಗೆ ಗಣೇಶ ಮತ್ತು ಲಕ್ಷ್ಮೀ ಫೋಟೋ ಹಾಕಿ: ಕೇಜ್ರಿವಾಲ್ ಒತ್ತಾಯ
ಕೇಜ್ರಿವಾಲ್ ಅವರ ಈ ಹೇಳಿಕೆಯನ್ನು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ಕಟುವಾಗಿ ಟೀಕಿಸಿವೆ. ಕೇಜ್ರಿವಾಲ್ ಹಿಂದೂ ವಿತಂಡವಾದಿ ಎಂದು ಬಿಜೆಪಿ ಬೈದಿದೆ. ಅಂದಹಾಗೆ, ಈಗಿನ ಮತ್ತು ಹಿಂದಿನ ತಲೆಮಾರಿನವರೆಲ್ಲರೂ ಬ್ಯಾಂಕ್ ನೋಟುಗಳಲ್ಲಿ ಮಹಾತ್ಮ ಗಾಂಧಿ ಚಿತ್ರ ನೋಡಿಕೊಂಡೇ ಬೆಳೆದವರು. ಆದರೆ, ವಾಸ್ತವದಲ್ಲಿ ಕರೆನ್ಸಿ ನೋಟುಗಳಲ್ಲಿ ಗಾಂಧಿಜಿ ಚಿತ್ರ ಮಾತ್ರವೇ ಮುದ್ರಣವಾಗುತ್ತಾ ಬಂದಿದೆ ಎಂಬುದು ನಿಜವಲ್ಲ.
ಕರೆನ್ಸಿ ಇತಿಹಾಸ
ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿದ್ದು 1935ರಲ್ಲಿ. ಮೊದಲ ನೋಟಿನ ಮುದ್ರಣವಾಗಿದ್ದು 1938ರಲ್ಲಿ. ಆಗ ಇಂಗ್ಲೆಂಡ್ ಅರಸ 6ನೇ ಜಾರ್ಜ್ ಅವರ ಚಿತ್ರವನ್ನು ಒಂದು ರೂಪಾಯಿ ನೋಟುಗಳಲ್ಲಿ ಮುದ್ರಿಸಲಾಗಿತ್ತು.
ಸ್ವಾತಂತ್ರ್ಯೋತ್ತರದಲ್ಲಿ ಆರ್ಬಿಐ ಮೊದಲು ನೋಟು ಮುದ್ರಿಸಿದ್ದು 1949 ಆಗಸ್ಟ್ ತಿಂಗಳಲ್ಲಿ. ಆಗ ಅಶೋಕ ಸ್ತಂಭದ ಚಿತ್ರವನ್ನು ಒಳಗೊಳ್ಳಲಾಗಿತ್ತು. ನಂತರ ವಿವಿಧ ದೇವಸ್ಥಾನಗಳು, ಅಣೆಕಟ್ಟು, ಉದ್ಯಾನವನ, ಸೆಟಿಲೈಟ್ ಇತ್ಯಾದಿಯ ಚಿತ್ರಗಳು ನೋಟುಗಳ ಮೇಲಿರುತ್ತಿದ್ದವು.
ಐವತ್ತರ ದಶಕದಲ್ಲಿ ಒಂದು ಸಾವಿರ, ಐದು ಸಾವಿರ ಮತ್ತು ಹತ್ತು ಸಾವಿರ ರೂ ಮುಖಬೆಲೆಯ ನೋಟುಗಳಲ್ಲಿ ತಂಜಾವೂರ್ ದೇವಸ್ಥಾನ, ಗೇಟ್ ವೇ ಆಫ್ ಇಂಡಿಯಾ, ಸಂಸತ್ತು ಮೊದಲಾದವುಗಳ ಫೋಟೋ ಇರುತ್ತಿತ್ತು.
2 ರೂ ಮುಖಬೆಲೆಯ ನೋಟುಗಳ ಮೇಲೆ ಭಾರತದ ಮೊದಲ ಉಪಗ್ರಹ ಆರ್ಯಭಟ್ನ ಚಿತ್ರವಿತ್ತು. 5 ರೂ ನೋಟಿನಲ್ಲಿ ಕೃಷಿ ಸಲಕರಣೆ, 10 ರೂ ನೋಟಿನಲ್ಲಿ ನವಿಲು, 20 ರೂ ನೋಟಿನಲ್ಲಿ ರಥದ ಚಕ್ರದ ಚಿತ್ರಗಳನ್ನು ಕಾಣಬಹುದಿತ್ತು.
ಏನಪ್ಪಾ ಇದು..! ಮಿಸ್ ಯೂನಿವರ್ಸ್ ಅನ್ನೇ ಖರೀದಿಸಿದ್ದಾಳೆ ಈ ಥಾಯ್ ಮಹಿಳೆ
ಮಹಾತ್ಮ ಗಾಂಧಿ ಚಿತ್ರ ಪ್ರಿಂಟ್ ಯಾವಾಗಿಂದ?
1969ರಲ್ಲಿ ಮೊದಲ ಬಾರಿಗೆ ನೋಟುಗಳಲ್ಲಿ ಮಹಾತ್ಮ ಗಾಂಧಿ ಚಿತ್ರ ಮುದ್ರಿಸಲಾಗಿತ್ತು. ಆಗ ಗಾಂಧೀಜಿಯವರ ಜನ್ಮ ಶತಾಬ್ದಿಯ ಸಂದರ್ಭವಾದ್ದರಿಂದ ಗೌರವಾರ್ಥವಾಗಿ ಗಾಂಧಿ ಫೋಟೋ ಆರ್ಬಿಐನ ನೋಟುಗಳಲ್ಲಿ ಮುದ್ರಣವಾಗಿತ್ತು. ಆಗ ಅದು ಗಾಂಧಿ ನೋಟುಗಳೆಂದೇ ಹೆಸರುವಾಸಿಯಾದವು. ಅಲ್ಲಿಂದೀಚೆ ಬಹುತೇಕವಾಗಿ ನೋಟುಗಳ ಮೇಲೆ ಗಾಂಧಿ ಚಿತ್ರವನ್ನು ಮುದ್ರಿಸುತ್ತಾ ಬರಲಾಗುತ್ತಿದೆ.
ಇಂಡೋನೇಷ್ಯಾ ಮತ್ತು ಗಣೇಶ
ಇಂಡೋನೇಷ್ಯಾ ಮುಸ್ಲಿಂ ಬಾಹುಳ್ಯ ಇರುವ ದೇಶ. ಇಸ್ಲಾಮಿಕ್ ರಾಷ್ಟ್ರವೂ ಹೌದು. ಹಿಂದೂಗಳು ಶೇ. 2ರಷ್ಟೂ ಇಲ್ಲ. ಜಾವಾ ದ್ವೀಪ ಪ್ರದೇಶದಲ್ಲಿ ಮಾತ್ರ ಹಿಂದೂ ಸಮುದಾಯದವರು ನೆಲಸಿದ್ದಾರೆ. ಮೂರ್ತಿ ಪೂಜೆ ಇಸ್ಲಾಂ ಧರ್ಮದಲ್ಲಿ ನಿಷಿದ್ಧ ಇರುವುದು ಗೊತ್ತೇ ಇದೆ. ಆದರೂ ಇಂಡೋನೇಷ್ಯಾದಲ್ಲಿ ಕರೆನ್ಸಿ ನೋಟುಗಳ ಮೇಲೆ ಗಣೇಶನ ಚಿತ್ರ ಮುದ್ರಿಸಲಾಗುತ್ತಿರುವುದು ಬಹಳ ಮಂದಿಗೆ ಅಚ್ಚರಿ ತಂದಿದೆ.
ಇಂಡೋನೇಷ್ಯಾ ಒಂದು ಕಾಲದಲ್ಲಿ ಹಿಂದೂ ಮತ್ತು ಬೌದ್ಧ ಧರ್ಮದ ಪ್ರಾಬಲ್ಯ ಹೊಂದಿದ್ದ ದೇಶ. 13ನೇ ಶತಮಾನದಿಂದ ಕ್ರಮೇಣವಾಗಿ ಇಸ್ಲಾಮೀಕರಣ ಆಗುತ್ತಾ ಹೋಯಿತು. ಆದರೆ, ಸಾಂಸ್ಕೃತಿಕವಾಗಿ ಇಂಡೋನೇಷ್ಯಾ ಅರಬ್ ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ತನ್ನ ಹಿಂದೂ ಬೇರನ್ನು ಮರೆಯದ ಇಂಡೋನೇಷ್ಯನ್ನರು ಈಗಲೂ ಹಿಂದೂ ಸಂಸ್ಕೃತಿಯ ಅನೇಕ ಅಂಶಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಪೌರತ್ವದ ಬಿಸಿ
ಡಚ್ಚರಿಂದ ಇಂಡೋನೇಷ್ಯಾ ಸ್ವಾತಂತ್ರ್ಯ ಪಡೆದಾಗ ಇಸ್ಲಾಂ ರಾಜಕೀಯ ಅಧಿಕಾರ ಇತ್ತು. ಅಲ್ಲಿ ಏಕ ದೇವರ ಧರ್ಮವನ್ನು ಮಾತ್ರ ಅಧಿಕೃತ ಧರ್ಮವಾಗಿ ಮಾನ್ಯ ಮಾಡಲು ನಿರ್ಧರಿಸಲಾಯಿತು. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ಮಾತ್ರವೇ ಏಕ ದೇವರ ಧರ್ಮವಾಗಿದ್ದವು. ಹಿಂದೂ ಧರ್ಮ ಬಹುದೇವತೆಗಳನ್ನು ಆರಾಧಿಸುವ ಧರ್ಮವಾದ್ದರಿಂದ ಅದಕ್ಕೆ ಮಾನ್ಯತೆ ಸಿಗಲಿಲ್ಲ. ಇದರಿಂದ ಹಿಂದೂಗಳಿಗೆ ಇಂಡೋನೇಷ್ಯಾದ ಪೌರತ್ವ ನಿರಾಕರಿಸಲಾಗಿತ್ತು. ಆ ಸಂದರ್ಭದಲ್ಲಿ ಬಹಳಷ್ಟು ಹಿಂದೂಗಳು ಇಂಡೋನೇಷ್ಯಾದ ಪೌರತ್ವಕ್ಕಾಗಿ ಅನಿವಾರ್ಯವಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರೆಂದು ಹೇಳಲಾಗುತ್ತದೆ. ಆದರೆ, ಮಾನಸಿಕವಾಗಿ ಬಹಳ ಇಂಡೋನೇಷ್ಯನ್ನರು ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ.