ಮುಂಬೈ: ಕೊರೊನಾವೈರಸ್ ಲಾಕ್ಡೌನ್ ಪರಿಣಾಮ ಕಳೆದ ಮೂರು ತಿಂಗಳಿನಿಂದ ದೇಶದ ಅರ್ಥ ವ್ಯವಸ್ಥೆ ತಲ್ಲಣಗೊಂಡಿದೆ. ಅದರಲ್ಲೂ ಉದ್ಯೋಗ ನಷ್ಟ ಪ್ರಮಾಣ ವ್ಯಾಪಕವಾಗಿತ್ತು. ಆದರೆ, ಕೆಲ ಸಕಾರಣಗಳಿಂದ ಉದ್ಯೋಗ ನಷ್ಟ ಭೀತಿ ಸದ್ಯ ದೂರವಾದಂತಾಗಿದೆ. ಇದಕ್ಕೆ ಪ್ರಮುಖ ಕಾರಣವೇ ಬೇರೆ ಇದೆ.
ಜೂನ್ 21 ಕ್ಕೆ ಕೊನೆಗೊಂಡ ವಾರದಲ್ಲಿ ಉದ್ಯೋಗದ ದರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಆದರೆ, ಇದರ ಹಿಂದೆ ಇರುವ ಪ್ರಮುಖ ಸಂಗತಿ ಗ್ರಾಮೀಣ ಉದ್ಯೋಗಗಳು ಹೆಚ್ಚಾಗಿರುವುದು ಉದ್ಯೋಗ ದರ ಕುಸಿತ ಚೇತರಿಸಿಕೊಂಡಿದೆ ಎಂದು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯಾ ಎಕಾನಮಿ (CMIE) ಸಿಇಒ ಮತ್ತು ಎಂಡಿ ಮಹೇಶ್ ವ್ಯಾಸ್ ಹೇಳಿದ್ದಾರೆ.
ಅವರು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ನಿರುದ್ಯೋಗದ ದರ ಶೇ 7.26 ಕ್ಕೆ ಇಳಿದಿದ್ದರೇ, ನಗರ ಭಾಗದಲ್ಲಿ ನಿರುದ್ಯೋಗದ ದರ 11.2 ಕ್ಕೆ ಇಳಿದಿದೆ.
ಕಡಿಮೆ ಸಂಬಳ ಪಡೆಯುವ ಉದ್ಯೋಗ
ಲಾಕ್ಡೌನ್ ಅವಧಿಗೂ ಹಾಗೂ ಲಾಕ್ಡೌನ್ ನಂತರ ಉದ್ಯೋಗ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಲಾಕ್ಡೌನ್ ತೆರವಾದ ನಂತರ ಗ್ರಾಮೀಣ ಉದ್ಯೋಗವು ಸುಧಾರಣೆಯನ್ನು ಕಂಡಿದ್ದರೂ, ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗ ಅಂಕಿಅಂಶಗಳು, ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಕಡಿಮೆ ಸಂಬಳ ಪಡೆಯುವ ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿರುವುದನ್ನು ತೋರಿಸುತ್ತದೆ ಎಂದು ಮಹೇಶ್ ವ್ಯಾಸ್ ಹೇಳಿದ್ದಾರೆ.
ಸಿಕ್ಕ ಉದ್ಯೋಗವನ್ನು ಅರಸಿಕೊಳ್ಳುತ್ತಿದ್ದಾರೆ
ಗ್ರಾಮೀಣ ಭಾರತದಲ್ಲಿ ಉದ್ಯೋಗದ ಸನ್ನಿವೇಶದಲ್ಲಿ ನಾವು ದೊಡ್ಡ ಸುಧಾರಣೆಯನ್ನು ಕಂಡಿದ್ದೇವೆ. ನಗರ ಭಾರತದಲ್ಲಿಯೂ ಸ್ವಲ್ಪ ಸುಧಾರಣೆಯಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿನ ನಿರುದ್ಯೋಗ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ದೀರ್ಘಕಾಲದ ಲಾಕ್ಡೌನ್ನಿಂದ ಉಂಟಾದ ಒತ್ತಡವು ಅನೇಕರ ಮೇಲೆ ದೊಡ್ಡ ಪರಿಣಾಮ ಬೀರಿತು. ಹೀಗಾಗಿ ಪ್ರಸ್ತುತ ಅನೇಕ ಜನರು ಹೆಚ್ಚು ಹಣ ನೀಡದಿದ್ದರೂ ಸಿಕ್ಕ ಉದ್ಯೋಗವನ್ನು ಅರಸಿಕೊಳ್ಳುತ್ತಿದ್ದಾರೆ ಎಂದು ಮಹೇಶ್ ವ್ಯಾಸ್ ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ
ದೇಶದಲ್ಲಿ ಗ್ರಾಮೀಣ ಉದ್ಯೋಗವನ್ನು ರೂಪಿಸುವುದರಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಮೇ ತಿಂಗಳಲ್ಲಿ ಈ ಯೋಜನೆಯಡಿ ಉದ್ಯೋಗದ ಅಂಕಿ ಅಂಶಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದು ಖಂಡಿತವಾಗಿಯೂ ದೇಶದ ಉದ್ಯೋಗ ದರವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ವ್ಯಾಸ್ ಹೇಳಿದ್ದಾರೆ.
ಬಿತ್ತನೆ ಶೇ 30 ರಷ್ಟು ಹೆಚ್ಚಳ
ಗ್ರಾಮೀಣ ಭಾಗದಲ್ಲಿ ಉದ್ಯೋಗ ಪ್ರಮಾಣ ಹೆಚ್ಚಾಗಲು ಇತರ ಅಂಶಗಳೂ ಸಹ ಸೇರಿವೆ. ಈ ವರ್ಷ ಮುಂಗಾರು ಬೆಳೆಗಳ ಬಿತ್ತನೆ ಉತ್ತಮವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿತ್ತನೆ ಶೇ 30 ರಷ್ಟು ಹೆಚ್ಚಳ ಕಂಡಿದ್ದೇವೆ. ಗ್ರಾಮೀಣ ಗುಡಿ ಕೈಗಾರಿಕೆಗಳು ಚೇತರಿಸಿಕೊಳ್ಳುತ್ತಿವೆ. ಸ್ವಯಂ ಉದ್ಯೋಗಗಳು ಹೆಚ್ಚುತ್ತಿವೆ. ಆದ್ದರಿಂದ ಗ್ರಾಮೀಣ ಭಾರತ ಉತ್ತಮವಾಗಿದೆ ಎಂಬುದು ನನ್ನ ಪರಿಕಲ್ಪನೆ ಎಂದು ವ್ಯಾಸ್ ಹೇಳಿದ್ದಾರೆ.


Click it and Unblock the Notifications