ಷೇರು ಮಾರುಕಟ್ಟೆಯಲ್ಲಿ ಕೆಲವೊಂದು ಪಾಸಿಟಿವ್ ಅಂಶಗಳು ಆಟವಾಡುತ್ತಿದೆ. ಹೌದು, ಮಂಗಳವಾರ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ. ಸೆನ್ಸೆಕ್ಸ್ 62,800 ಅಂಕಕ್ಕೆ ತಲುಪಿದ್ದು, ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಆದರೆ ಇದಕ್ಕೆ ಪ್ರಮುಖ ಕಾರಣ ಏನು, ಯಾವೆಲ್ಲ ಅಂಶಗಳು ಪರಿಣಾಮ ಬೀರಿದೆ ಎಂಬುವುದು ನಿಮಗೆ ತಿಳಿದಿದೆಯೇ?
ಪ್ರಮುಖವಾಗಿ ಪ್ರಸ್ತುತ ಹಣದುಬ್ಬರವು ಕೊಂಚ ಇಳಿಕೆಯಾಗುತ್ತಿದೆ. ಈ ನಡುವೆ ಆರ್ಬಿಐ, ಫೆಡರಲ್ ದರವನ್ನು ಹೆಚ್ಚಳ ಮಾಡುವ ಸಾಧ್ಯತೆಯು ಕೂಡಾ ಕಡಿಮೆಯಾಗಿದೆ. ಅಂದರೆ ಈ ಹಿಂದಿನಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ. ಈ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ.
ಇನ್ನು ಇದನ್ನು ಹೊರತುಪಡಿಸಿ ಕಚ್ಚಾ ತೈಲದ ಬೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದು ಕೂಡಾ ಷೇರು ಮಾರುಕಟ್ಟೆ ಜಿಗಿತಕ್ಕೆ ಸಹಾಯ ಮಾಡಿದೆ. ಇನ್ನು ಈಕ್ವಿಟಿ ಮ್ಯೂಚುವಲ್ ಫಂಡ್ನಲ್ಲಿಯೂ ಏರಿಳಿತ ಕಂಡು ಬಂದಿದೆ. ವಿದೇಶ ಹೂಡಿಕೆದಾರರು ಕೂಡಾ ಮತ್ತೆ ಭಾರತೀಯ ಮಾರುಕಟ್ಟೆಗೆ ಕೊಂಚ ಆಕರ್ಷಿತರಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿನ ಜಿಗಿತದ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ...
ಮ್ಯೂಚುವಲ್ ಫಂಡ್ನಲ್ಲಿ ಬೆಳವಣಿಗೆ
ಮ್ಯೂಚುವಲ್ ಫಂಡ್ನಲ್ಲಿ ಉಂಟಾದ ಬೆಳವಣಿಗೆಯೂ ಷೇರು ಮಾರುಕಟ್ಟೆಯ ಏರಿಕೆಗೆ ಒಂದು ಕಾರಣವಾಗಿದೆ. ಷೇರುಪೇಟೆಯಲ್ಲಿ ಗೂಳಿಯಾಟ ಕಾಣಲು ಹಾಗೂ ಸೆನ್ಸೆಕ್ಸ್ ದಾಖಲೆ ಮಟ್ಟಕ್ಕೆ ಏರಲು ಈ ಮೇಲೆ ಉಲ್ಲೇಖ ಮಾಡಿದ ಹಲವಾರು ಕಾರಣಗಳು ಇವೆ. ಅದರಲ್ಲಿ ಈ ಮ್ಯೂಚುವಲ್ ಫಂಡ್ನಲ್ಲಿ ಉಂಟಾದ ಹಠಾತ್ ಬೆಳವಣಿಗೆ ಕೂಡಾ ಒಂದು ಕಾರಣವಾಗಿದೆ.
ಮೋತಿಲಾಲ್ ಓಸ್ವಾಲ್ ಮಾಹಿತಿ
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮೋತಿಲಾಲ್ ಓಸ್ವಾಲ್ ಸರ್ವಿಸ್ ಲಿಮಿಟೆಡ್ನ ಬ್ರೋಕಿಂಗ್ ಹಾಗೂ ಡಿಸ್ಟ್ರೀಬ್ಯೂಟ್ನ ಎಂಡಿ, ಸಿಇಒ ಅಜಯ್ ಮೆನನ್, "ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ ನಿಫ್ಟಿ ಕಂಪನಿಗಳು ಅಂದಾಜಿಗಿಂತ ಸುಮಾರು ಶೇಕಡ 9ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ಜಾಗತಿಕ ಸರಕುಗಳನ್ನು ಹೊರತುಪಡಿಸಿ ಒಟ್ಟಾರೆ ಬೆಳವಣಿಗೆಯು ಶೇಕಡ 33ರಷ್ಟಾಗಿದೆ. ಮುಂದಿನ ಎರಡು ವರ್ಷದಲ್ಲಿ ನಿಫ್ಟಿ ಗಳಿಕೆ ಸಿಎಜಿಆರ್ (Compound annual growth rate) ಶೇಕಡ 17ರಷ್ಟು ಹೆಚ್ಚಾಗಲಿದೆ," ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಚ್ಚಾತೈಲ ಬೆಲೆ ಇಳಿಕೆ
ತೈಲದರವು ಶೇಕಡ 15ರಷ್ಟು ಇಳಿದಿದೆ, ಅಂದರೆ ಸುಮಾರು ಪ್ರತಿ ಬಿಬಿಎಲ್ಗೆ (ಯುಎಸ್ ಲಿಕ್ವಿಡ್ ಬ್ಯಾರೆಲ್) 80 ಡಾಲರ್ ಆಗಿದೆ. ಇದು ನಮ್ಮ ತೈಲ ಮಾರುಕಟ್ಟೆ ಆಧಾರಿತ ಆರ್ಥಿಕತೆಗೆ ಸಹಕಾರಿಯಾಗಿದೆ. ಇನ್ನು ರಿಟೇಲ್, ಸಗಟು ಹಣದುಬ್ಬರ ಕಡಿಮೆಯಾಗುತ್ತಿದೆ. ಹಾಗೆಯೇ ಇನ್ನಷ್ಟು ಇಳಿಯುವ ಸೂಚನೆಯಿದೆ. ಈ ನಡುವೆ ಫೆಡರಲ್ ದರ ಏರಿಕೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಕೂಡಾ ಮೋತಿಲಾಲ್ ಓಸ್ವಾಲ್ ಸರ್ವಿಸ್ ಲಿಮಿಟೆಡ್ನ ಬ್ರೋಕಿಂಗ್ ಹಾಗೂ ಡಿಸ್ಟ್ರೀಬ್ಯೂಟ್ನ ಎಂಡಿ, ಸಿಇಒ ಅಜಯ್ ಮೆನನ್ ತಿಳಿಸಿದ್ದಾರೆ.
ಹಬ್ಬದ ಸೀಸನ್ನಿಂದಾದ ಬೂಸ್ಟ್
ಎರಡು ವರ್ಷಗಳ ಕಾಲ ಜನರನ್ನು ಆರ್ಥಿಕವಾಗಿ ಕೊರೊನಾ ಸಾಂಕ್ರಾಮಿಕ ತೀರಾ ಕೆಳಮಟ್ಟಕ್ಕೆ ತಳ್ಳಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಜನರಿಗೆ ಆರ್ಥಿಕ ತೊಂದರೆಗಳು ಉಂಟಾಗಿದ್ದರೂ ಕೂಡಾ ಈ ವರ್ಷದ ಹಬ್ಬದ ಸೀಸನ್ ಭಾರೀ ಅದ್ದೂರಿಯಾಗಿದೆ. ಜನರು ಸಾಲ ಮಾಡಿಯಾದ್ರೂ ತುಪ್ಪ ತಿನ್ನುವುದು ಉತ್ತಮ ಎಂದು ಕೊಂಡಿದ್ದರೋ ಅಥವಾ ಇದ್ದ ಎಲ್ಲ ಉಳಿತಾಯದ ಹಣವನ್ನು ಖರ್ಚು ಮಾಡಿಕೊಂಡಿದ್ದರೋ ತಿಳಿದಿಲ್ಲ. ಬಹುತೇಕ ಜನರು ಹಬ್ಬವನ್ನು ಮಾತ್ರ ಭಾರೀ ಅದ್ದೂರಿಯಾಗಿ ನಡೆಸಿದ್ದಾರೆ. ವಿವಾಹ ಸೀಸನ್ನಲ್ಲಿ ಚಿನ್ನಕ್ಕೆ ಬೇಡಿಕೆ ಅಧಿಕವಾಗಿದೆ.


Click it and Unblock the Notifications